ಮಂತ್ರವಾದಿಯ ಮಾತು ಕೇಳಿ ಸ್ವಂತ ಅತ್ತಿಗೆಯನ್ನೇ ಅತ್ಯಾಚಾರ ಮಾಡಿ ಕೊಲೆಗೈದ ಚಿನ್ನದ ವ್ಯಾಪಾರಿ
ಮೀರತ್,ಎ.21 : ವ್ಯಾಪಾರದಲ್ಲಿ ನಷ್ಟವುಂಟಾಗಲು ಅತ್ತಿಗೆಯೇ ಕಾರಣವೆಂದು ಹೇಳಿದ ಮಂತ್ರವಾದಿಯೊಬ್ಬನ ಸಲಹೆಯಂತೆ ಮೀರತ್ ನಗರದ ಚಿನ್ನದ ವ್ಯಾಪಾರಿಯೊಬ್ಬ ತನ್ನ 25 ವರ್ಷದ ನಾದಿನಿಯ ಮೇಲೆ ಅತ್ಯಾಚಾರಗೈದು ಆಕೆಯನ್ನು ಉಸಿರುಗಟ್ಟಿ ಸಾಯಿಸಿದ್ದಾನೆ.
ಆರೋಪಿ ಸಂಜಯ್ ವರ್ಮಾನ ವ್ಯಾಪಾರ ಅಷ್ಟೊಂದು ಹೇಳಿಕೊಳ್ಳುವಂತಹದ್ದಾಗಿರದೇ ಇದ್ದುದರಿಂದ ಆತ ಮಂತ್ರವಾದಿಯೊಬ್ಬನ ಮೊರೆ ಹೋಗಿದ್ದ. ಅತ್ತಿಗೆ ಮಾಟಮಂತ್ರ ಮಾಡಿರುವುದರಿಂದ ಹೀಗಾಗಿದೆ ಎಂದು ಮಂತ್ರವಾದಿ ಹೇಳಿದ್ದನ್ನು ವರ್ಮಾ ಬಲವಾಗಿ ನಂಬಿ ಬಿಟ್ಟಿದ್ದ. ಗುರುವಾರ ಬೆಳಗ್ಗೆ ಆತ ತನ್ನ ನಾಲ್ಕು ಮಂದಿ ಸಹೋದರರಲ್ಲಿ ಒಬ್ಬನ ಮನೆಗೆ ಆತ ಮನೆಯಲ್ಲಿಲ್ಲದ ವೇಳೆ ಹೋಗಿದ್ದ.
ನಂತರ ಇತರ ಇಬ್ಬರು ಸಹೋದರರಿಗೆ ಹಣ ನೀಡಿ ಮದ್ಯ ತರುವಂತೆ ಹೇಳಿದ್ದ. ಅವರು ಹೊರ ಹೋಗುತ್ತಲೇ ಆತ ತನ್ನ ಸಹೋದರ ಉಮೇಶನ ಪತ್ನಿಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ್ದ. ನಂತರ ನಂದಗ್ರಾಮ್ ಚೌಕ್ ಪ್ರದೇಶದಲ್ಲಿರುವ ಮನೆಯಿಂದ ಹೊರ ಬಂದು ಬೊಬ್ಬೆ ಹೊಡೆದಿದ್ದ. ಆದರೆ ಪೊಲೀಸ್ ವಿಚಾರಣೆಯ ವೇಳೆ ಜೋರಾಗಿ ಅತ್ತು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.