ತಿಲಕ ಧರಿಸಿರಲಿ, ಟೋಪಿ ಧರಿಸಿರಲಿ ಯಾರನ್ನೂ ತುಷ್ಟೀಕರಿಸುವ ಪ್ರಶ್ನೆಯೇ ಇಲ್ಲ: ಆದಿತ್ಯನಾಥ್
ಲಕ್ನೊ, ಮೇ 6: ನಕಲಿ ಶಾಲುಗಳನ್ನು ಧರಿಸಿ ಓಡಾಡುವವರು ಇನ್ನಾದರೂ ಬದಲಾಗಬೇಕು. ಯಾರನ್ನೂ ಬಿಡುವುದಿಲ್ಲ . ಹಣೆಗೆ ತಿಲಕ ಧರಿಸಿರಲಿ, ತಲೆಗೆ ಟೋಪಿ ಧರಿಸಿರಲಿ- ಎಲ್ಲರಿಗೂ ಕಾನೂನು ಒಂದೇ ಆಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ರಾಜ್ಯದ ಜನತೆಗೆ ಭರವಸೆ ನೀಡಿದ್ದಾರೆ.
ಟಿವಿ ಚಾನೆಲ್ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಲ್ಲಾ ಜನರಿಗೂ ಭದ್ರತೆ ಒದಗಿಸಲಾಗುವುದು. ರಾಜ್ಯದ ಅಭಿವೃದ್ಧಿ ಕಾರ್ಯದಲ್ಲಿ ಎಲ್ಲರೂ ಒಳಗೊಳ್ಳಬೇಕೆಂದು ಸರಕಾರದ ಆಶಯವಾಗಿದೆ. ಯಾರನ್ನೂ ತುಷ್ಟೀಕರಿಸು ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ತಾನು ಸ್ಥಾಪಿಸಿದ್ದ ಹಿಂದೂ ಯುವವಾಹಿನಿ ಸಂಘಟನೆಯ ಸದಸ್ಯರು ರಾಜ್ಯದ ಹಲವೆಡೆ ನಡೆದ ಹಿಂಸಾಚಾರ ಪ್ರಕರಣದಲ್ಲಿ ಒಳಗೊಂಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಕಲಿ ಶಾಲು ಧರಿಸಿ ಓಡಾಡುತ್ತಿರುವವರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳಬೇಕು. ಯಾರನ್ನೂ ಸುಮ್ಮನೆ ಬಿಡಲಾಗದು . ಬಿಜೆಪಿ ಅಥವಾ ಸಂಘಟನೆಯ ಹೆಸರು ಕೆಡಿಸಲು ಯತ್ನಿಸುತ್ತಿರುವವರನ್ನು ಪತ್ತೆಹಚ್ಚಲಾಗುವುದು ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡಲು ಆದ್ಯತೆ ನೀಡಲಾಗುವುದು. ಅಲ್ಲಲ್ಲಿ ಕೆಲವೊಂದು ಸಣ್ಣಪುಟ್ಟ ಘಟನೆಗಳು ನಡೆದಿರಬಹುದು. ಆದರೆ ಸರಕಾರ 100ನೇ ದಿನ ಪೂರೈಸಿದ ವರದಿ ನೀಡುವಾಗ ಇಂತಹ ಘಟನೆಳ ಮೂಲೋಚ್ಛಾಟನೆ ಆಗಿರುತ್ತದೆ ಎಂದರು.ರಾಜ್ಯದ ಪ್ರತಿಯೋರ್ವ ಸೋದರಿ, ಪುತ್ರಿಯರಲ್ಲಿ ಸುರಕ್ಷತೆಯ ಭಾವನೆ ಮೂಡಿಸಲಾಗುವುದು. ವಿಐಪಿ ಸಂಸ್ಕೃತಿಗೆ ತಿಲಾಂಜಲಿ ನೀಡಲಾಗುವುದು. ಮುಂದಿನ ಬಾರಿ ಸ್ವಚ್ಛ ನಗರಗಳ ಸಮೀಕ್ಷೆಯ ವರದಿಯಲ್ಲಿ ರಾಜ್ಯದ ಕನಿಷ್ಟ 50 ನಗರಗಳು ಅಗ್ರ 100ರ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕು ಎಂಬ ಗುರಿ ಇದೆ ಎಂದರು.
ರಾಜ್ಯದಲ್ಲಿ ಕಳೆದ 15 ವರ್ಷಗಳಲ್ಲಿ ಅಧಿಕಾರಿಗಳ, ಸಿಬ್ಬಂದಿಗಳ ವರ್ಗಾವಣೆ ನೀತಿ ಎಂಬುದು ಒಂದು ದಂಧೆಯಾಗಿ ಮಾರ್ಪಟ್ಟಿತ್ತು. ಆದರೆ ಈಗ ನಾವು ಒಂದು ಸ್ಪಷ್ಟವಾದ ನೀತಿಯನ್ನು ಜಾರಿಗೊಳಿಸಿದ್ದೇವೆ. ಈಗ ಎಲ್ಲರೂ ವರ್ಗಾವಣೆಗೆ ಸೂಕ್ತ ಕಾರಣ ನೀಡಬೇಕಿದೆ. ಓರ್ವ ಅಧಿಕಾರಿಯನ್ನು ಯಾಕೆ ವರ್ಗಾಯಿಸಲಾಗಿದೆ ಮತ್ತು ಇದರಿಂದ ಜನರಿಗೆ ಆಗುವ ಅನುಕೂಲಗಳೇನು ಎಂಬುದನ್ನು ಎಲ್ಲಾ ಸಚಿವರೂ ನನಗೆ ತಿಳಿಸಬೇಕು ಎಂದು ಆದಿತ್ಯನಾಥ್ ತಿಳಿಸಿದರು.