ರೈತರ ಆತ್ಮಹತ್ಯೆಗೆ ಬಿಜೆಪಿ ಸರಕಾರ ಕಾರಣ: ಸಚಿನ್ ಪೈಲಟ್
ಜೈಪುರ, ಜೂ.17: ಕೃಷಿ ಪ್ರಧಾನವಾದ ದೇಶದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಹೇಳಿದ್ದಾರೆ.
ರಾಜಸ್ತಾನದ ಕೋಟ ಜಿಲ್ಲೆಯ ಇಟ್ವ ನಗರದಲ್ಲಿ ನಡೆದ ರೈತರ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಮತ್ತು ಮತ್ತು ರಾಜಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ದೇಶದಾದ್ಯಂತ ರೈತರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಕಾರಣೀಭೂತವಾಗಿದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವವರನ್ನು ಬಂದೂಕು ತೋರಿಸಿ ಬಾಯಿ ಮುಚ್ಚಿಸಲಾಗುತ್ತಿದೆ. ಇದೀಗ ಪರಿಸ್ಥಿತಿ ಎಷ್ಟೊಂದು ಕೆಟ್ಟಿದೆ ಎಂದರೆ ಪ್ರತೀ 41 ನಿಮಿಷಕ್ಕೆ ಓರ್ವ ರೈತ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದವರು ಹೇಳಿದರು.
‘ಸಬ್ಕಾ ಸಾಥ್.. ಸಬ್ಕಾ ವಿಕಾಸ್’ ಎಂದು ಘೋಷಣೆ ಮಾಡುತ್ತಿರುವ ಬಿಜೆಪಿ ಸರಕಾರ ರೈತರ ಶ್ರೇಯೋಭಿವೃದ್ಧಿ ಮತ್ತು ಕೃಷಿ ಅಭಿವೃದ್ಧಿಯ ನಿಟ್ಟಿನಲ್ಲಿ ಯಾವುದೇ ಕಾರ್ಯ ಮಾಡಿಲ್ಲ. ಕೃಷಿ ಕ್ಷೇತ್ರದ ದುರ್ದೆಸೆಯಿಂದ ಕಂಗಾಲಾಗಿರುವ ರೈತರು ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ . ಬಿಜೆಪಿ ಸರಕಾರ ರೈತರನ್ನು ಕೇವಲ ‘ವೋಟ್ಬ್ಯಾಂಕ್’ ದೃಷ್ಟಿಯಿಂದ ನೋಡುತ್ತಿದೆ ಎಂದು ಪೈಲಟ್ ದೂರಿದರು.