ಮೋದಿ ಜತೆ ಬಿಜೆಪಿ ಅಧ್ಯಕ್ಷ: ಕೇರಳ ಸಚಿವ ಆಕ್ಷೇಪ
ಕೊಚ್ಚಿನ್, ಜೂ. 18: ಕೊಚ್ಚಿನ್ ಮೆಟ್ರೋ ರೈಲು ಉದ್ಘಾಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಜತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಕುಮ್ಮನಮ್ ರಾಜಶೇಖರನ್ ಪ್ರಯಾಣಿಸಿದ್ದು, ಭದ್ರತಾ ಕ್ರಮಗಳ ಸ್ಪಷ್ಟ ಉಲ್ಲಂಘನೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಕೇರಳದ ಸಚಿವ ಕೆ.ಸುರೇಂದ್ರನ್ ಆಗ್ರಹಿಸಿದ್ದಾರೆ.
ದೇವಸ್ವಂ ಖಾತೆ ಸಚಿವರಾಗಿರುವ ಕಡಕಂಪಲ್ಲಿ ಸುರೇಂದ್ರನ್ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ, "ಪ್ರಧಾನಿಯ ಅಧಿಕೃತ ಕಾರ್ಯಕ್ರಮದಲ್ಲಿ ಭದ್ರತಾ ಲೋಪವಾಗಿರುವ ಬಗ್ಗೆ ತನಿಖೆ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.
ಸ್ಥಳೀಯ ಶಾಸಕ ಪಿ.ಟಿ.ಥಾಮಸ್ ಅವರಿಗೂ ಪ್ರಧಾನಿ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಲಿಲ್ಲ. ಹೀಗಿದ್ದಾಗ ಜನಪ್ರತಿನಿಧಿಯೇ ಅಲ್ಲದ ರಾಜಶೇಖರನ್ ಹೇಗೆ ಪ್ರಧಾನಿ ಜತೆಗೆ ಮೆಟ್ರೊ ಯಾನ ಕೈಗೊಂಡರು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೆಟ್ರೊ ಪ್ರಯಾಣದಲ್ಲಿ ರಾಜಶೇಖರನ್ ಅವರು ಪ್ರಧಾನಿ ಮೋದಿ, ರಾಜ್ಯಪಾಲ ಪಿ.ಸದಾಶಿವನ್ ಅವರ ಪಕ್ಕಕ್ಕೇ ಕುಳಿತಿದ್ದರು. ಬಳಿಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ವೆಂಕಯ್ಯ ನಾಯ್ಡು ಇದ್ದರು.