ಜಾರ್ಖಂಡ್ ನಲ್ಲಿ ನಡೆದ ಹತ್ಯೆಗೆ ಧಾರ್ಮಿಕ ಆಯಾಮ ಬೇಡ: ವೆಂಕಯ್ಯ ನಾಯ್ಡು
ಹೊಸದಿಲ್ಲಿ, ಜೂ. 30: ಗೋಮಾಂಸ ಕೊಂಡೊಯ್ಯುತ್ತಿದ್ದಾರೆ ಎಂದು ಶಂಕಿಸಿ ಜಾರ್ಖಂಡ್ನಲ್ಲಿ ಶುಕ್ರವಾರ 45 ವರ್ಷದ ಮುಸ್ಲಿಂ ವ್ಯಕ್ತಿಯೋರ್ವನನ್ನು ಹತ್ಯೆಗೈದಿರು ವುದನ್ನು ಖಂಡಿಸಿರುವ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಇದು ಅನಾಗರಿಕ ಕೃತ್ಯ. ಆದರೆ, ಇದನ್ನು ಧಾರ್ಮಿಕ ಆಯಾಮದಲ್ಲಿ ಪರಿಗಣಿಸದಿರಿ ಎಂದಿದ್ದಾರೆ.
ಗೋರಕ್ಷಣೆ ಹೆಸರಲ್ಲಿ ಜನರನ್ನು ಹತ್ಯೆಗೈಯ್ಯುವುದು ಒಪ್ಪತಕ್ಕದ್ದಲ್ಲ. ಗೋರಕ್ಷಣೆ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ ಒಂದು ದಿನದ ಬಳಿಕ ವೆಂಕಯ್ಯ ನಾಯ್ಡು ಈ ಹೇಳಿಕೆ ನೀಡಿದ್ದಾರೆ.
ಇಂತಹ ಕೃತ್ಯಗಳನ್ನು ಎಲ್ಲರೂ ಖಂಡಿಸಬೇಕು. ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಇದು ದೇಶದ ವಿವಿಧ ಭಾಗಗಳಲ್ಲಿ ಸಂಭವಿಸುತ್ತಿದೆ. ಇದು ನಿಜವಾಗಿಯೂ ಅವಮಾನಕರ, ಅನಾಗರಿಕ. ಆದರೆ, ಇದನ್ನು ಧಾರ್ಮಿಕ ಆಯಾಮದ ಒಳಗೆ ತರಬೇಡಿ ಎಂದು ನಾಯ್ಡು ಹೇಳಿದ್ದಾರೆ.
ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಿರಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ರಾಜ್ಯ ಮಟ್ಟ ಹಾಗೂ ಜಿಲ್ಲಾ ಮಟ್ಟದ ಪೊಲೀಸರು ಸೇರಿದಂತೆ ಕಾನೂನು ಜಾರಿ ಸಂಸ್ಥೆಗೆ ಆದೇಶಿಸಿದ್ದೇನೆ ಎಂದು ಅವರು ತಿಳಿಸಿದರು.
2014ರಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಗೋವಿಗೆ ಸಂಬಂಧಿಸಿ ನಡೆಯುತ್ತಿರುವ ಹಿಂಸಾಚಾರ ಹೆಚ್ಚಿದೆ.