ಈ "ವಿವಿಐಪಿ" ಮರಕ್ಕಾಗಿ ವಾರ್ಷಿಕ 12 ಲಕ್ಷ ರೂ. ವ್ಯಯಿಸುವ ಮಧ್ಯ ಪ್ರದೇಶ ಸರಕಾರ: ಕಾರಣವೇನು ಗೊತ್ತೇ?
ಭೋಪಾಲ್,ಜು.13 : ಮಧ್ಯ ಪ್ರದೇಶದ ಸಲ್ಮತಪುರ ಎಂಬಲ್ಲಿನ ಗುಡ್ಡ ಪ್ರದೇಶವೊಂದರಲ್ಲಿರುವ ಅಶ್ವಥ ಮರವೊಂದರ ಸಂರಕ್ಷಣೆಗಾಗಿ ರಾಜ್ಯ ಸರಕಾರ ವಾರ್ಷಿಕ ರೂ. 12 ಲಕ್ಷ ವ್ಯಯಿಸುತ್ತಿದೆ. ಭಾರತದ ಈ ಪ್ರಪ್ರಥಮ ವಿವಿಐಪಿ ಮರವು ರಾಜಧಾನಿ ಭೋಪಾಲ ಹಾಗೂ ವಿದಿಶಾ ಪಟ್ಟಣದ ನಡುವೆ ಇರುವ ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾದ ಸಾಂಚಿ ಬುದ್ಧಿಸ್ಟ್ ಕಾಂಪ್ಲೆಕ್ಸ್ ನಿಂದ ಐದು ಕಿ.ಮೀ ದೂರದಲ್ಲಿದೆ.
ಈ ಮರಕ್ಕೆ ನೀರೆರೆಯಲು ಹಾಗೂ ಅದನ್ನು ಕಾಯಲು ಸರಕಾರ ಅದನ್ನು ನೆಟ್ಟಂದಿನಿಂದ ಸಾಕಷ್ಟು ಶ್ರಮ ವಹಿಸುತ್ತಿದೆ. ನಾಲ್ಕು ಮಂದಿ ಹೋಮ್ ಗಾರ್ಡುಗಳು ಈ ಮರವನ್ನು 2012ರಿಂದ ಹಗಲು ರಾತ್ರಿ ಕಾಯುತ್ತಿದ್ದಾರೆ.
ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಷ ಅವರು ತಮ್ಮ ದೇಶದಿಂದ ಈ ಗಿಡವನ್ನು ತಂದು ಅದನ್ನು ಇಲ್ಲಿ ಐದು ವರ್ಷಗಳ ಹಿಂದೆ ನೆಟ್ಟಿದ್ದರು. ಈ ಮರಕ್ಕೆಂದೇ ಒಂದು ನೀರಿನ ಟ್ಯಾಂಕ್ ಇದೆ, ರಾಜ್ಯದ ಕೃಷಿ ಇಲಾಖೆಯಿಂದ ಒಬ್ಬ ಸಸ್ಯತಜ್ಞ ಪ್ರತಿ ವಾರ ಇಲ್ಲಿಗೆ ಬಂದು ಈ ಮರವನ್ನು ಪರೀಕ್ಷಿಸುತ್ತಿದ್ದಾರೆ.
ಇಡೀ ಗುಡ್ಡವನ್ನು ಬುದ್ಧಿಸ್ಟ್ ವಿಶ್ವವಿದ್ಯಾಲಯಕ್ಕೆ ಬುದ್ಧಿಸ್ಟ್ ಸರ್ಕಿಟ್ ಅಭಿವೃದ್ಧಿಪಡಿಸಲು ನೀಡಲಾಗಿದೆ. ಈ ಯೋಜನೆಯ ಅಂದಾಜು ವೆಚ್ಚ ರೂ. 300 ಕೋಟಿಯಷ್ಟಾಗಿದ್ದು ಸದ್ಯ ಈ ವಿವಿ ತಿಂಗಳಿಗೆ ರೂ 20 ಲಕ್ಷ ಬಾಡಿಗೆಯ ಕಟ್ಟಡವೊಂದರಲ್ಲಿ ಕಾರ್ಯಾಚರಿಸುತ್ತಿದೆ.
``ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಗೌತಮ ಬುದ್ಧನಿಗೆ ಯಾವ ಬೋಧಿ ಮರದ ಕೆಳಗೆ ಜ್ಞಾನೋದಯವಾಯಿತೋ ಆ ಮರದ ಒಂದು ಗೆಲ್ಲನ್ನು ಭಾರತದಿಂದ ಶ್ರೀಲಂಕಾಕ್ಕೆ ಕೊಂಡು ಹೋಗಿ ಅನುರಾಧಪುರದಲ್ಲಿ ಅದನ್ನು ನೆಡಲಾಗಿತ್ತು'' ಎಂದು ಮಹಾಬೋಧಿ ಸೊಸೈಟಿ ಆಫ್ ಇಂಡಿಯಾದ ಭಂಟೆ ಚಂದರತನ್ ಹೇಳುತ್ತಾರೆ.
ಆದರೆ ಕಳೆದೊಂದು ತಿಂಗಳ ಅವಧಿಯಲ್ಲಿ ಮಧ್ಯ ಪ್ರದೇಶದಲ್ಲಿ 51 ಮಂದಿ ರೈತರು ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವಾಗ ಮರವೊಂದಕ್ಕೆ ಇಷ್ಟೊಂದು ಹಣ ವ್ಯಯಿಸುವ ಅಗತ್ಯವಿದೆಯೇ ಎಂದು ಪರಿಸರವಾದಿಗಳು ಪ್ರಶ್ನಿಸುತ್ತಿದ್ದಾರೆ.