ಖಾಸಗಿತನದ ಹಕ್ಕು ಮೂಲಭೂತ ಹಕ್ಕಲ್ಲ: ಸುಪ್ರೀಂ ಕೋರ್ಟ್ ಗೆ ಕೇಂದ್ರ
ಹೊಸದಿಲ್ಲಿ, ಜು. 27: ಖಾಸಗೀತನ ಬಹುಮುಖಿ ಹಾಗೂ ಇದನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ಗೆ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೆಹರ್ ನೇತೃತ್ವದ 9 ನ್ಯಾಯಮೂರ್ತಿಗಳ ನ್ಯಾಯಪೀಠದ ಮುಂದೆ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, ಇದು ಮೂಲಭೂತ ಹಕ್ಕಲ್ಲ ಎಂದು ಒತ್ತಿ ಹೇಳಿದ್ದಾರೆ.
ಖಾಸಗೀತನಕ್ಕೆ ಯಾವುದೇ ಮೂಲಭೂತ ಹಕ್ಕು ಇಲ್ಲ. ಒಂದು ವೇಳೆ ಇದನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿದರೆ, ಅದು ಬಹುಮುಖಿಯಾದುದು ಎಂದು ಹೇಳಬಹುದು. ಪ್ರತಿಯೊಂದು ಅಂಶವನ್ನು ವಾಸ್ತವವಾಗಿ ಮೂಲಭೂತ ಹಕ್ಕು ಎಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ ಎಂದ ವೇಣುಗೋಪಾಲ್ ಅವರು ನ್ಯಾಯಮೂರ್ತಿ ಜೆ. ಚಲಮೇಶ್ವರ್, ಎಸ್.ಎ. ಬೊಬ್ಡಾ, ಆರ್.ಕೆ. ಅಗ್ರವಾಲ್, ರೋಹಿಂಟಲ್ ಫಾಲಿ ನರಿಮನ್, ಅಭಯ್ ಮನೋಹರ್ ಸಪ್ರೆ , ಡಿ.ವೈ. ಚಂದ್ರಚೂಡ್, ಸಂಜಯ್ ಕಿಶಾನ್ ಕೌಲ್ ಹಾಗೂ ಎಸ್. ಅಬ್ದುಲ್ ನಝೀರ್ ಕೂಡ ಇದ್ದ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಮಾಹಿತಿಯ ಖಾಸಗೀತನ ಖಾಸಗೀ ಹಕ್ಕು ಆಗಲಾರದು. ಹಾಗೂ ಇದು ಎಂದಿಗೂ ಮೂಲಭೂತ ಹಕ್ಕಾಗಲಾರದು. ಖಾಸಗಿ ಹಕ್ಕು ಮೂಲಭೂತ ಹಕ್ಕು ಆಗಬಹುದು. ಆದರೆ, ಪೂರ್ಣವಾಗಿ ಆಗಲು ಸಾಧ್ಯವಿಲ್ಲ ಎಂದು ಅಟಾರ್ನಿ ಜನರಲ್ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.