ಪ್ರತ್ಯೇಕ ರಾಜ್ಯ: ಕೇಂದ್ರಕ್ಕೆ ಜಿಜೆಎಂ 10 ದಿನಗಳ ಗಡುವು
ಡಾರ್ಜಿಲಿಂಗ್, ಜು.31: ಪ್ರತ್ಯೇಕ ರಾಜ್ಯ ಘೋಷಣೆಗೆ ಆಗ್ರಹಿಸಿ ಚಳವಳಿ ನಡೆಸುತ್ತಿರುವ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಕೇಂದ್ರ ಸರ್ಕಾರಕ್ಕೆ 10 ದಿನಗಳ ಗಡುವು ವಿಧಿಸಿದೆ. ಹತ್ತು ದಿನಗಳ ಒಳಗಾಗಿ ಹೊಸ ರಾಜ್ಯ ಘೋಷಣೆಯಾಗದಿದ್ದರೆ, ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದೆ. ಬಿಜೆಪಿ ಮೈತ್ರಿಕೂಟದ ಅಂಗಪಕ್ಷವಾದ ಜಿಜೆಎಂ ಈ ಗಡುವು ನೀಡಿರುವುದು ಹೋರಾಟಗಾರರ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ಗೂರ್ಖಾಲ್ಯಾಂಡ್ ಬೆಂಬಲಿಗರು, ಭಾರತ- ಭೂತಾನ್ ಗಡಿಯ ಜೈಗಾಂ ನಗರದಲ್ಲಿ ಹಿಂಸಾಚಾರಕ್ಕೆ ಇಳಿದಿದ್ದಾರೆ. ಭೂತಾನ್ ಗೇಟ್ನ 200 ಮೀಟರ್ ದೂರದಲ್ಲಿ ಪ್ರತಿಭಟನಾಕಾರರು ಪೊಲೀಸರತ್ತ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಭೂತಾನ್, ಪುಯೆಂಟ್ಸ್ ಹೊಲಿಂಗ್ನ ಎರಡು ಗೇಟುಗಳು ಮುಚ್ಚಿದೆ. ಇದು ಭಾರತ ಹಾಗೂ ಭೂತಾನ್ ನಡುವಿನ ಪ್ರವೇಶ ಮತ್ತು ನಿರ್ಗಮನ ದ್ವಾರಗಳಾಗಿವೆ. ಮಿತ್ರಪಕ್ಷ ಬಿಜೆಪಿ ಬಗ್ಗೆ ಮೆದು ಧೋರಣೆ ಹೊಂದಿರುವ ಬಗ್ಗೆ ಜಿಜೆಎಂ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಜಿಜೆಎಂ ಎಚ್ಚರಿಕೆ ನೀಡಿರುವುದು ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
"ಆಗಸ್ಟ್ 8ರ ಬಳಿಕವೂ ಕೇಂದ್ರ ಸರ್ಕಾರ ಮೂಕಪ್ರೇಕ್ಷಕನಾಗಿ ಕುಳಿತರೆ, ನಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ. ತೆರಾಯಿ ಮತ್ತು ದೂರಸ್ ಪ್ರದೇಶಕ್ಕೂ ಚಳವಳಿ ಹಬ್ಬಲಿದೆ" ಎಂದು ಜಿಜೆಎಂ ಪ್ರಧಾನ ಕಾರ್ಯದರ್ಶಿ ಬಿನಯ್ ತಮಂಗ್ ಎಚ್ಚರಿಕೆ ನೀಡಿದ್ದಾರೆ.
"ಜೈಗಾಂವ್ನಲ್ಲಿ ಜಾಗತಿಕ ಗೂರ್ಖಾಲ್ಯಾಂಡ್ ರ್ಯಾಲಿ ದಿನ ನಮ್ಮ ಕಾರ್ಯಕರ್ತರನ್ನು ತಡೆಯಲಾಗಿದೆ. ಅಧಿಕಾರ ವರ್ಗ ಇನ್ನೆಂದಿಗೂ ನಮ್ಮ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ. ವಿಶ್ವಾದ್ಯಂತ ಇರುವ ಗೂರ್ಖಾಗಳು ನಮ್ಮ ಪರವಾಗಿದ್ದಾರೆ ಎಂದು ತಮಂಗ್ ಹೇಳಿದ್ದಾರೆ.