ನೋಟಿಸ್ ನೀಡದೆ ಹರತಾಳಗಳಿಗೆ ಕಡಿವಾಣ ಅಗತ್ಯ:ಕೆಎಚ್ಆರ್ಸಿ
ತಿರುವನಂತಪುರ,ಜು.31: ಸಾಕಷ್ಟು ಮುಂಚಿತವಾಗಿ ನೋಟಿಸ್ ನೀಡದೆ ಹರತಾಳ ಗಳಿಗೆ ಕರೆ ನೀಡುವ ಪ್ರವೃತ್ತಿಗೆ ಕಠಿಣ ಶಾಸನಗಳ ಮೂಲಕ ಕಡಿವಾಣ ಹಾಕುವುದು ಅಗತ್ಯವಾಗಿದೆ ಎಂದು ಕೇರಳ ಮಾನವ ಹಕ್ಕುಗಳ ಆಯೋಗ(ಕೆಎಚ್ಆರ್ಸಿ)ವು ಹೇಳಿದೆ.
ಈ ಸಂಬಂಧ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರು ಮೂರು ವಾರಗಳಲ್ಲಿ ಆಯೋಗಕ್ಕೆ ತಿಳಿಸಬೇಕು ಎಂದು ಕೆಎಚ್ಆರ್ಸಿ ಪ್ರಭಾರ ಅಧ್ಯಕ್ಷ ಪಿ.ಮೋಹನದಾಸ್ ಅವರು ಸೋಮವಾರ ಇಲ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದರು.
ಬಿಜೆಪಿಯು ರವಿವಾರ ದಿಢೀರ್ ಹರತಾಳಕ್ಕೆ ಕರೆ ನೀಡಿದ್ದರಿಂದ ವಿವಿಧ ಆಸ್ಪತ್ರೆಗಳಲ್ಲಿ ರೋಗಿಗಳು ಮತ್ತು ಅವರ ಬಂಧುಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದು, ಆಹಾರವಿಲ್ಲದೆ ಪರದಾಡುವಂತಾಗಿತ್ತು. ಆಯೋಗಕ್ಕೆ ಈ ಬಗ್ಗೆ ದೂರುಗಳು ಬಂದಿವೆ ಎಂದು ತಿಳಿಸಿದ ಅವರು, ಹರತಾಳಕ್ಕೆ ಕರೆ ನೀಡಿದವರು ರೋಗಿಗಳು ಎದುರಿಸಬಹುದಾದ ತೊಂದರೆಗಳ ಬಗ್ಗೆ ಕೊಂಚ ಚಿಂತನೆ ನಡೆಸಬೇಕಾಗಿತ್ತು ಎಂದರು.
ರೋಗಿಗಳಿಗೆ ಆಹಾರ ನಿರಾಕರಿಸಲ್ಪಟ್ಟಾಗ ಸರಕಾರವು ಮೂಕಪ್ರೇಕ್ಷಕನಾಗಿರುವಂತಿಲ್ಲ ಎಂದರು.
ಆಸ್ಪತ್ರೆಯ ಸುತ್ತಲಿನ 500 ಮೀ.ಪ್ರದೇಶವನ್ನು ಹರತಾಳದ ವ್ಯಾಪ್ತಿಯಿಂದ ಹೊರಗಿರಿಸಬೇಕು ಎಂಬ ನಿಯಮವನ್ನು ಪಾಲಿಸಲಾಗುತ್ತಿಲ್ಲ ಎಂದು ಮಾನವ ಹಕ್ಕು ಕಾರ್ಯಕರ್ತ ಪಿ.ಕೆ.ರಾಜು ಅವರು ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಬೆಟ್ಟು ಮಾಡಿದ್ದಾರೆ.