‘ಶೌಚಾಲಯವಿಲ್ಲದಿರುವುದು ಕ್ರೌರ್ಯಕ್ಕೆ ಸಮ’ ಎಂದು ಮಹಿಳೆಗೆ ಪತಿಯಿಂದ ವಿಚ್ಛೇದನ ನೀಡಿದ ನ್ಯಾಯಾಲಯ
ರಾಜಸ್ಥಾನದಲ್ಲೊಂದು ‘ಟಾಯ್ಲೆಟ್-ಏಕ್ ಪ್ರೇಮ್ ಕಥಾ’
ರಾಜಸ್ಥಾನ,ಆ.19: ಮನೆಯಲ್ಲಿ ಶೌಚಾಲಯವಿಲ್ಲದಿರುವುದು ಕ್ರೌರ್ಯಕ್ಕೆ ಸಮ ಎಂದಿರುವ ರಾಜಸ್ಥಾನದ ಕುಟುಂಬ ನ್ಯಾಯಾಲಯವೊಂದು ಮಹಿಳೆಯೊಬ್ಬರಿಗೆ ಗಂಡನಿಂದ ವಿಚ್ಛೇದನ ನೀಡಿದೆ.
ಮನೆಯಲ್ಲಿ ಶೌಚಾಲಯ ಇಲ್ಲದೆ ಇದ್ದಲ್ಲಿ ಬಯಲುಶೌಚದ ಸಂದರ್ಭ ಮಹಿಳೆ ಅನುಭವಿಸುವ ಮಾನಸಿಕ ಕಿರುಕುಳದ ಬಗ್ಗೆ ಮಾತನಾಡಿದ ಜಸ್ಟೀಸ್ ರಾಜೇಂದ್ರ ಕುಮಾರ್ ಶರ್ಮಾ ಶೌಚಾಲಯ ಇಲ್ಲದೆ ಇರುವುದು ಸಮಾಜಕ್ಕೆ ನಾಚಿಕೆಗೇಡು ಎಂದರು.
2011ರಲ್ಲಿ ಭಿಲ್ವಾರ ಜಿಲ್ಲೆಯ ಅತುನ್ ಗ್ರಾಮಕ್ಕೆ ಮದುವೆಯಾಗಿ ಬಂದಿದ್ದ ಮಹಿಳೆ ಗಂಡನ ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣ 2015ರಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಬಯಲುಶೌಚದ ಸಂದರ್ಭ ತಾನು ಅನುಭವಿಸುವ ಕಷ್ಟಗಳ ಬಗ್ಗೆ ಗಂಡನ ಮನೆಯವರಲ್ಲಿ ಹೇಳಿದ್ದರೂ ಅವರು ಅದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ ಎಂದವರು ಅರ್ಜಿಯಲ್ಲಿ ತಿಳಿಸಿದ್ದರು.
“ನಮ್ಮ ತಾಯಂದಿರು ಹಾಗೂ ಸಹೋದರಿಯರು ಇನ್ನೂ ಬಯಲುಶೌಚ ಮಾಡಬೇಕು ಎನ್ನುವುದು ನೋವು ನೀಡುವಂತದ್ದು. ಬಯಲುಶೌಚಕ್ಕಾಗಿ ಮಹಿಳೆಯರು ರಾತ್ರಿಯಾಗುವವರೆಗೂ ಕಾಯಬೇಕು. ಈ ಸಂದರ್ಭ ಅವರು ದೈಹಿಕ ಹಾಗೂ ಮಾನಸಿಕ ನೋವನ್ನು ಅನುಭವಿಸುತ್ತಾರೆ. 21 ಶತಮಾನದಲ್ಲೂ ಶೌಚಾಲಯಗಳಿಲ್ಲದಿರುವುದು ನಾಚಿಕೆಗೇಡಿನ ವಿಷಯ’ ಎಂದು ಜಸ್ಟೀಸ್ ಶರ್ಮಾ ಹೇಳಿದ್ದಾರೆ.