ಸರಕಾರ ಸರಿಯಾದ್ದನ್ನೇ ಮಾಡಿದೆ,ನನ್ನ ರಾಜೀನಾಮೆಯ ಪ್ರಶ್ನೆಯೇ ಇಲ್ಲ: ಖಟ್ಟರ್
ಹೊಸದಿಲ್ಲಿ,ಆ.30: ತನ್ನ ರಾಜೀನಾಮೆಗೆ ಬೇಡಿಕೆಗಳನ್ನು ಬುಧವಾರ ಇಲ್ಲಿ ತಿರಸ್ಕರಿಸಿದ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ್ ಅವರು, ತನ್ನ ಸರಕಾರವು ‘ಸಂಯಮ’ದಿಂದ ಕಾರ್ಯ ನಿರ್ವಹಿಸಿದೆ ಮತ್ತು ಅದರ ಕೆಲಸ ತನಗೆ ತೃಪ್ತಿಯನ್ನುಂಟು ಮಾಡಿದೆ ಎಂದು ಹೇಳಿದರು.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ಹರ್ಯಾಣದಲ್ಲಿ ಇತ್ತೀಚಿಗೆ ನಡೆದಿದ್ದ ಡೇರಾ ಹಿಂಸಾಚಾರ ಕುರಿತು ವರದಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯದ ನಾಯಕತ್ವದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ಸರಕಾರವು ಡೇರಾ ಪ್ರಕರಣವನ್ನು ನಿರ್ವಹಿಸಲು ವಿಫಲಗೊಂಡಿದೆ ಮತ್ತು ತನ್ಮೂಲಕ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿದೆ ಎಂಬ ಪ್ರತಿಪಕ್ಷಗಳ ಆರೋಪಗಳ ನಡುವೆಯೇ ಬಿಜೆಪಿಯ ಉನ್ನತ ನಾಯಕತ್ವವು ತನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬಹುದು ಎಂಬ ವದಂತಿಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಕಳೆದ ಶುಕ್ರವಾರ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಬಾಬಾ ಗುರ್ಮೀತ್ ಸಿಂಗ್ನನ್ನು ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಯೆಂದು ಪಂಚಕುಲಾದ ವಿಶೇಷ ಸಿಬಿಐ ನ್ಯಾಯಾಲಯವು ಘೋಷಿಸಿದ ಬಳಿಕ ಡೇರಾ ಬೆಂಂಬಲಿಗರು ಹಿಂಸೆಗಿಳಿದಿದ್ದು, ಕನಿಷ್ಠ 38 ಜನರು ಬಲಿಯಾಗಿದ್ದರು. ಈ ಪೈಕಿ ಹೆಚ್ಚಿನವರು ಪೊಲೀಸ್ ಗೋಲಿಬಾರ್ನಲ್ಲಿ ಜೀವ ಕಳೆದುಕೊಂಡಿದ್ದರು.
ಗುರ್ಮೀತ್ ನ್ಯಾಯಾಲಯದ ಎದುರು ಹಾಜರಾಗುವ ಮುನ್ನ ಏನಾದರೂ ಸಂಭವಿಸಿದ್ದರೆ ಆತ ನ್ಯಾಯಾಲಯಕ್ಕೆ ಹಾಜರಾಗದಿರಲು ಅದನ್ನೇ ನೆಪವನ್ನಾಗಿಟ್ಟು ಕೊಳ್ಳುತ್ತಿದ್ದ. ಆತ ಪಂಚಕುಲಾದ ನ್ಯಾಯಾಲಯದಲ್ಲಿ ಹಾಜರಾಗುವಂತೆ ನೋಡಿಕೊಳ್ಳಲು ತನ್ನ ಸರಕಾರವು ಸಂಯಮದಿಂದ ಕಾರ್ಯ ನಿರ್ವಹಿಸಿತ್ತು ಮತ್ತು ಅದು ತನ್ನ ಗುರಿಯನ್ನು ಸಾಧಿಸಿದೆ ಎಂದು ಖಟ್ಟರ್ ಹೇಳಿದರು.
ತನ್ನ ರಾಜೀನಾಮೆಗೆ ಒತ್ತಾಯಗಳ ಕುರಿತ ಪ್ರಶ್ನೆಗೆ ಅವರು, ಯಾರೂ ಏನು ಬೇಕಾದರೂ ಹೇಳಬಹುದು. ನಮ್ಮ ಕೆಲಸ ನಮಗೆ ತೃಪ್ತಿ ನೀಡಿದೆ. ನಾವು ಮಾಡಿದ್ದು ಸರಿಯಾಗಿಯೇ ಇದೆ ಎಂದು ಉತ್ತರಿಸಿದರು.
ರಾಜಕೀಯ ಬೆಂಬಲಕ್ಕಾಗಿ ಡೇರಾ ಮುಖ್ಯಸ್ಥನೊಡನೆ ತನ್ನ ಪಕ್ಷದ ಒಡನಾಟದ ಕುರಿತು ಪ್ರಶ್ನೆಗೆ ಅವರು, ರಾಜಕೀಯ ಪಕ್ಷಗಳು ಪ್ರತಿಯೊಬ್ಬರ ಸಹಕಾರವನ್ನು ಕೋರುತ್ತವೆ. ಆದರೆ ಇಂತಹ ಬೆಂಬಲಕ್ಕಾಗಿ ಯಾರಾದರೂ ಕಾನೂನು ಉಲ್ಲಂಘಿಸು ವುದನ್ನು ಸಹಿಸಲು ಸಾಧ್ಯವಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ಉತ್ತರಿಸಿದರು. ಪ್ರತಿಪಕ್ಷಗಳು ಆರೋಪಿಸಿರುವಂತೆ ತನ್ನ ಸರಕಾರವು ಡೇರಾ ಮುಖ್ಯಸ್ಥ ನೊಡನೆ ಯಾವುದೇ ವ್ಯವಹಾರ ಹೊಂದಿರಲಿಲ್ಲ ಎಂದು ಅವರು ಪ್ರತಿಪಾದಿಸಿದರು.