ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪ: ಕರ್ನಲ್ ಸೇರಿ ಇತರ ಮೂವರ ಬಂಧನ
ಮುಂಬೈ, ಸೆ. 19: ಲಂಚಕ್ಕಾಗಿ ಭಾರತೀಯ ವೈದ್ಯಕೀಯ ಮಂಡಳಿಯ ಸಂಕೀರ್ಣ ಮಾಹಿತಿಯನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಮಾರಾಟ ಮಾಡಿದ ಆರೋಪದಲ್ಲಿ ಸೇನಾ ವೈದ್ಯಕೀಯ ಕಾರ್ಪ್ನ ಕರ್ನಲ್, ಭಾರತೀಯ ವೈದ್ಯಕೀಯ ಮಂಡಳಿಯ ಕ್ಲರ್ಕ್ ಹಾಗೂ ಇತರ ಇಬ್ಬರನ್ನು ಬಂಧಿಸಲಾಗಿದೆ.
ಕರ್ನಲ್ ವಿಜಯ್ ಕುಮಾರ್ ಸಿಂಗ್, ಎಂಸಿಐಯ ಕೆಳದರ್ಜೆಯ ಗುಮಾಸ್ತ ಸಂತೋಷ್ ಕುಮಾರ್, ಅವರ ಸಹವರ್ತಿ ಸುಶೀಲ್ ಕುಮಾರ್ ಹಾಗೂ ಸಚಿನ್ ಕುಮಾರ್, ಪುದುಚೇರಿಯ ವೆಂಕಟೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಅಧ್ಯಕ್ಷ ಬಿ. ರಾಮಚಂದಿರನ್ ಹಾಗೂ ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡ ಬಳಿಕ ಈ ಬಂಧನ ನಡೆದಿದೆ.
ಇವರ ವಿರುದ್ಧ ಕ್ರಿಮಿನಲ್ ಸಂಚು, ಲಂಚ ಮೊದಲಾದ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಚೆನ್ನೈನ ಅಶೋಕ್ ನಗರದ ನಿವಾಸಿಯಾಗಿರುವ ಬಿ. ರಾಮಚಂದಿರನ್ ಕ್ಲರ್ಕ್ ಸಂತೋಷ್ ಕುಮಾರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಸಂತೋಷ್ ಕುಮಾರ್ ಕಾಲೇಜು ಪರಿಶೀಲನೆ, ಎಂಸಿಐ ಅನುದಾನಕ್ಕೆ ಅನುಮೋದನೆ ಮೊದಲಾದ ವಿಷಯಗಳನ್ನು ಬಿ. ರಾಮಚಂದಿರನ್ ಅವರಿಗೆ ತಿಳಿಸುತ್ತಿದ್ದ ಎಂದು ಪ್ರಥಮ ಮಾಹಿತಿ ವರದಿಯಲ್ಲಿ ಹೇಳಲಾಗಿದೆ.