ಟಿವಿ ಶೋದಲ್ಲಿ ಆರೆಸ್ಸೆಸ್ ನಾಯಕನ ಜತೆಗಿನ ಸಂವಾದವೇ ನನ್ನ ಸಂಸ್ಥೆಯ ವಿರುದ್ಧದ ನೋಟಿಸ್ ಗೆ ಕಾರಣ
ಹರ್ಷ ಮಂದರ್
ಹೊಸದಿಲ್ಲಿ, ಸೆ.25: ಗೋರಕ್ಷಕರ ಅಟ್ಟಹಾಸದ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನವೊಂದನ್ನು ನಡೆಸುತ್ತಿರುವ ಹಿರಿಯ ಮಾನವಹಕ್ಕುಗಳ ಹೋರಾಟಗಾರ ಹಾಗೂ ಮಾಜಿ ಐಎಎಸ್ ಅಧಿಕಾರಿ ಹರ್ಷ ಮಂದರ್ ಸ್ಥಾಪಿಸಿರುವ ಸಂಸ್ಥೆಯೊಂದಕ್ಕೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಇಲಾಖೆಯು ಇದೀಗ ಹರ್ಷ ಮಂದರ್ ಅವರ ಸೆಂಟರ್ ಫಾರ್ ಇಕ್ವಿಟಿ ಸ್ಟಡೀಸ್ ಗೆ ನೋಟಿಸ್ ಒಂದನ್ನು ಜಾರಿಗೊಳಿಸಿದ್ದು, ಅದರ ಐಟಿ ರಿಟರ್ನ್ಸ್ ಗಳ ಸಂಪೂರ್ಣ ಪರಿಶೋಧನೆ ನಡೆಸಲಾಗುವುದೆಂದು ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹರ್ಷ ಮಂದರ್ ತಮ್ಮ ವಿರುದ್ಧ ಉದ್ದೇಶಪೂರ್ವಕವಾಗಿ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಎನ್ಡಿಟಿವಿಯ ಲೆಫ್ಟ್ ರೈಟ್ ಸೆಂಟರ್ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ನಾಯಕ ರಾಕೇಶ್ ಸಿನ್ಹಾ ಜತೆ ನಡೆಸಿದ ಸಂವಾದವೇ ತಮಗೆ ನೀಡಲಾಗಿರುವ ನೋಟಿಸ್ ಗೆ ಕಾರಣವೆಂದು ಹೇಳಿದ್ದಾರೆ.
‘‘ಇದೊಂದು ಸಾಮಾನ್ಯ ನೋಟಿಸ್ ಎಂದು ಆದಾಯ ತೆರಿಗೆ ಇಲಾಖೆ ಹೇಳಬಹುದಾದರೂ ನನ್ನ ಸಂಸ್ಥೆಗಳಿಗೆ ದೊರಕುವ ಧನಸಹಾಯದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಾರ್ವಜನಿಕವಾಗಿ ಬೆದರಿಸಿರುವುದರಿಂದ ಇದೊಂದು ದ್ವೇಷದ ಹಾಗೂ ಬೆದರಿಕೆಯ ಕ್ರಮವಾಗಿದೆ ಎಂದು ಹೇಳಬಹುದು’’ ಎಂದು ಮಂದರ್ ಹೇಳುತ್ತಾರೆ.
ಗೋರಕ್ಷಕರಿಂದ ಹತ್ಯೆಗೀಡಾದ ರಾಜಸ್ಥಾನದ ಪೆಹ್ಲು ಖಾನ್ ಹತ್ಯೆ ಸಂಬಂಧ ಸೆಪ್ಟೆಂಬರ್ 14ರಂದು ನಡೆದ ಟಿವಿ ಚರ್ಚಾ ಕಾರ್ಯಕ್ರಮದಲ್ಲಿ ರಾಕೇಶ್ ಸಿನ್ಹಾ ‘‘ಹರ್ಷ ಮಂದರ್ ಅವರ ಎನ್ಜಿಒ ಚಟುವಟಿಕೆಗಳ ಬಗ್ಗೆ ತನಿಖೆ ನಡೆಯಲಿ’’ ಎಂದು ಹೇಳಿದ್ದರು.
ಗೋರಕ್ಷಕರ ಅಟ್ಟಹಾಸ ನಡೆದಿರುವ ರಾಜ್ಯಗಳಿಗೆ ಕಾರವಾನ್-ಇ- ಮೊಹಬ್ಬತ್ ( ಕಾರವಾನ್ ಆಫ್ ಲವ್) ಅಂಗವಾಗಿ ಭೇಟಿ ನೀಡುತ್ತಿರುವ ಮಂದರ್ ಅವರು ಸೆಪ್ಟೆಂಬರ್ 15ರಂದು ಪೆಹ್ಲು ಖಾನ್ ಅವರ ಮೇಲೆ ಹಲ್ಲೆಗೈಯ್ಯಲಾದ ಸ್ಥಳದಲ್ಲಿ ತಮ್ಮ ಮೇಲೆ ಕಲ್ಲು ತೂರಾಟ ನಡೆಸುವವರನ್ನು ಲೆಕ್ಕಿಸದೆ ಹೂವುಗಳನ್ನಿಟ್ಟಿದ್ದರು.
ಇದಾದ ನಾಲ್ಕು ದಿನಗಳ ನಂತರ ಅವರು ಸ್ಥಾಪಕ ನಿರ್ದೇಶಕರಾಗರುವ ಸೆಂಟರ್ ಫಾರ್ ಈಕ್ವಿಟಿ ಸ್ಟಡೀಸ್ ಗೆ ನೋಟಿಸ್ ಜಾರಿಯಾಗಿದೆ. ಮಂದರ್ ಅವರ ಹೊರತಾಗಿ ಪ್ರೊ. ಘನಶ್ಯಾಮ್ ಶಾ, ಪ್ರೊ. ಎಸ್ ಪರಶುರಾಮನ್, ಪ್ರೊ. ಜೀನ್ ಡ್ರೀರ್, ಎನ್ ಸಿ ಸಕ್ಸೇನಾ ಅವರು ಜತೆಯಾಗಿ ಈ ಕೇಂದ್ರವನ್ನು ಆಗಸ್ಟ್ 2000ರಲ್ಲಿ ಸ್ಥಾಪಿಸಿದ್ದರು. ಯಾವುದೇ ತನಿಖೆಗೆ ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಮಂದರ್ ಹೇಳಿದ್ದಾರೆ. ಜತೆಗೆ ಭಾರತದ ಸಾಂವಿಧಾನಿಕ ಮೌಲ್ಯಗಳಿಗೆ ಮಾರಕವಾದ ಸಿದ್ಧಾಂತಗಳ ಬಗ್ಗೆ ಇರುವ ಸಾರ್ವಜನಿಕ ಅಸಮ್ಮತಿಯ ದನಿ ಅಡಗಿಸಲು ಎಷ್ಟೇ ಬೆದರಿಕೆಗಳೂ ಯಶಸ್ವಿಯಾಗದು ಎಂದು ಅವರು ಸಾರಿ ಹೇಳಿದ್ದಾರೆ.