ಮಧ್ಯಪ್ರದೇಶ: ಪ್ರತಿಭಟನೆ ನಡೆಸಿದ ರೈತರ ಬಟ್ಟೆ ಬಿಚ್ಚಿಸಿದ ಪೊಲೀಸರು
ಭೋಪಾಲ್, ಅ.4: ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಠಾಣೆಗೆ ಎಳೆದುತಂದು ಅವರನ್ನು ಠಾಣೆಯಲ್ಲಿ ಬಟ್ಟೆಬಿಚ್ಚಲು ಬಲವಂತಗೊಳಿಸಿ ಕೇವಲ ಚಡ್ಡಿಯಲ್ಲಿ ಗಂಟೆಗಟ್ಟಲೆ ಕೂಡಿಹಾಕಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಬುಂದೇಲ್ಖಂಡ್ ಎಂಬಲ್ಲಿ ನಡೆದಿದೆ.
ರೈತರನ್ನು ಕೇವಲ ಒಳಚಡ್ಡಿಯಲ್ಲಿ ಠಾಣೆಯಲ್ಲಿ ಕೂಡಿಹಾಕಿರುವ, ಬಳಿಕ ಅವರು ಕೈಯಲ್ಲಿ ತಮ್ಮ ಬಟ್ಟೆಯನ್ನು ಗಂಟುಕಟ್ಟಿಕೊಂಡು ಠಾಣೆಯಿಂದ ಹೊರಸಾಗುತ್ತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಲು ಪ್ರತಿಭಟನೆ ನಡೆಸುತ್ತಿದ್ದ ರೈತರು ಸರಕಾರಿ ಕಚೇರಿಯೊಂದರ ಮುಂದುಗಡೆ ಒಟ್ಟುಸೇರಿದ್ದರು. ಕಾಂಗ್ರೆಸ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದೆ ಎಂದು ಅಧಿಕಾರಾರೂಢ ಬಿಜೆಪಿ ತಿಳಿಸಿದೆ.
ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದಾಗ ಪೊಲೀಸರು ಜಲಫಿರಂಗಿ, ಅಶ್ರುವಾಯು ಹಾಗೂ ಲಾಠಿಚಾರ್ಜ್ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಆದರೆ ತಮ್ಮನ್ನು ಬಂಧಿಸಿ ಠಾಣೆಗೆ ಕರೆದೊಯ್ದ ಪೊಲೀಸರು ಥಳಿಸಿ, ಬಟ್ಟೆ ಬಿಚ್ಚಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್, ರೈತರನ್ನು ಅಮಾನುಷವಾಗಿ ಥಳಿಸಲಾಗಿದೆ ಹಾಗೂ ಅಪಮಾನಗೊಳಿಸಲಾಗಿದೆ. ಘಟನೆಯ ಫೋಟೋ ಹಾಗೂ ಇತರ ಸಾಕ್ಷಿಯ ಸಹಿತ ರಾಜ್ಯ ಮಾನವಹಕ್ಕು ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದೆ.
ಆದರೆ ಆರೋಪವನ್ನು ನಿರಾಕರಿಸಿರುವ ಪೊಲೀಸರು, ಪ್ರತಿಭಟನಾಕಾರರು ಕಲ್ಲೆಸೆದ ಕಾರಣ ಹಲವಾರು ಪೊಲೀಸರಿಗೆ ಗಾಯವಾಗಿದೆ ಎಂದಿದ್ದಾರೆ. ಈ ಮಧ್ಯೆ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕಾಂಗ್ರೆಸ್ ಬೆಂಕಿಗೆ ತುಪ್ಪ ಸುರಿಯುವ ಕಾರ್ಯ ಮಾಡುತ್ತಿದೆ. ಸರಕಾರ ಹಿಂಸಾತ್ಮಕ ಪ್ರತಿಭಟನೆಯನ್ನು ಸಹಿಸದು ಎಂದಿದ್ದಾರೆ. ರೈತರ ಬಟ್ಟೆ ಬಿಚ್ಚಿಸಿದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಘಟನೆಯ ಕುರಿತು ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದರು.
ರೈತರನ್ನು ಬಲಾತ್ಕಾರವಾಗಿ ಬಟ್ಟೆ ಬಿಚ್ಚಿಸಲಾಗಿದೆಯೇ ಅಥವಾ ಅವರೇ ಸ್ವಯಂ ಬಟ್ಟೆ ಬಿಚ್ಚಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಗೃಹ ಸಚಿವ ಭೂಪೇಂದ್ರ ಸಿಂಗ್ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ಇದು ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಾಗಿತ್ತು ಮತ್ತು ಅಲ್ಲಿ ಕಲ್ಲೆಸೆತದ ಘಟನೆ ನಡೆದಿದೆ. ಬಟ್ಟೆ ಬಿಚ್ಚಿಸಿದ್ದಾರೆ ಎಂಬ ಆರೋಪ ರಾಜಕೀಯ ಪ್ರೇರಿತವಾದದ್ದೇ ಎಂಬ ಬಗ್ಗೆ ತನಿಖೆ ನಡೆಯಲಿದೆ ಎಂದು ಸಿಂಗ್ ತಿಳಿಸಿದ್ದಾರೆ.