ಭಾಗವತ ಐರೋಡಿ ರಾಮ ಗಾಣಿಗ
ಉಡುಪಿ, ಅ.21: ರಾಜ್ಯೋತ್ಸವ ಪುರಸ್ಕೃತ ಯಕ್ಷಗಾನ ಭಾಗವತ ಹಾಗೂ ಶಿಕ್ಷಕ ರಾಷ್ಟ್ರಪ್ರಶಸ್ತಿ ವಿಜೇತ ಐರೋಡಿ ರಾಮ ಗಾಣಿಗ(97) ಅನಾರೋಗ್ಯದಿಂದ ಗುರುವಾರ ತಡರಾತ್ರಿ ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೋಟ ಅಮೃತೇಶ್ವರಿ ಯಕ್ಷಗಾನ ಮೇಳದಲ್ಲಿ ಭಾಗವತರಾಗಿ ವೃತ್ತಿ ಜೀವನ ಆರಂಭಿಸಿದ ಅವರು ಸೌಕೂರು, ಮಂದಾರ್ತಿ, ಮಾರಣಕಟ್ಟೆ ಮೇಳಗಳಲ್ಲಿ ಭಾಗವತರಾಗಿ ಕಾರ್ಯನಿರ್ವಹಿಸಿದ್ದರು.
ಕೋಟ ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯಲ್ಲೂ ಸುಮಾರು 15 ವರ್ಷ ಭಾಗವತರಾಗಿ ದೇಶ-ವಿದೇಶ ಪ್ರವಾಸ ಕೈಗೊಂಡಿದ್ದರು. ಮುಂದೆ ಅವರು ಉಪ್ಪಿನಕುದ್ರು ಕೊಗ್ಗ ಕಾಮತರ ಯಕ್ಷಗಾನ ಗೊಂಬೆಯಾಟ ತಂಡದಲ್ಲೂ ಭಾಗವತರಾಗಿದ್ದರು. ಅಲ್ಲದೇ ಕೇಂದ್ರ ಸಾಂಸ್ಕೃತಿಕ ಇಲಾಖೆಯ ಸಹಯೋಗದಲ್ಲಿ ನಡೆದ ಹಿಂದಿ ಯಕ್ಷಗಾನ ಪ್ರದರ್ಶನದಲ್ಲೂ ಭಾಗವತರಾಗಿ ಕಾರ್ಯನಿರ್ವಹಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ರಾಮ ಗಾಣಿಗರ ನಿಧನಕ್ಕೆ ಯಕ್ಷಗಾನ ಕಲಾರಂಗದ ಕೆ.ಗಣೇಶ ರಾವ್, ಮುರಲಿ ಕಡೆಕಾರ್, ಅವರು ಎರಡು ದಶಕಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ ಅಂಬಲಪಾಡಿ ಶ್ರೀಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ ತೀವ್ರ ಸಂತಾಪ ಸೂಚಿಸಿದೆ.