ಭೂಸುಧಾರಣೆ-2019ರ ಚುನಾವಣಾ ಕಾರ್ಯಸೂಚಿ
ಒಬ್ಬ ವ್ಯಕ್ತಿ ಎಷ್ಟು ಜಮೀನು ಹೊಂದಬಹುದು, ಎಷ್ಟು ಹಣ ಮಾಡಬಹುದು ಇತ್ಯಾದಿ ವಿಷಯಗಳ ಮೇಲೆ ನಿಯಂತ್ರಣವೇ ಇಲ್ಲದಿದ್ದರೆ ನಾವು ಬಡತನವನ್ನು ನಿರ್ಮೂಲನಗೊಳಿಸಲು ಹೇಗೆ ಸಾಧ್ಯ? ಹೆಚ್ಚುತ್ತಿರುವ ಅಸಮಾನತೆಗೆ ಬಡವರು ಕೆಲಸ ಮಾಡುವುದಿಲ್ಲ ಅಥವಾ ಸೋಮಾರಿಗಳಾಗಿದ್ದಾರೆ ಮತ್ತು ಕೆಲವು ಶ್ರೀಮಂತ ವ್ಯಕ್ತಿಗಳು ಶ್ರಮಪಟ್ಟು ದುಡಿಯುತ್ತಾರೆ ಮತ್ತು ಉತ್ತಮ ವ್ಯವಸ್ಥಾಪಕರಾಗಿದ್ದಾರೆ ಎಂಬುದು ಕಾರಣವಲ್ಲ. ಇಷ್ಟೊಂದು ಹಣವನ್ನು ಬಡಜನರನ್ನು ದೋಚಿ ಸಂಪಾದಿಸಲಾಗಿದೆ. ಹೆಚ್ಚು ಆದಾಯ ಮತ್ತು ಜಮೀನಿನ ಮೇಲೆ ನಾವು ನಿಯಂತ್ರಣ ಹೇರದಿದ್ದಲ್ಲಿ ನಾವು ವಿಫಲವಾಗಲಿದ್ದೇವೆ.
ಭೂಸುಧಾರಣೆಯೆನ್ನುವುದು ರಾಜಕೀಯ ಪಕ್ಷಗಳು ಮತ್ತು ನೀತಿ ನಿರೂಪಕರು ಬಹುಕಾಲದ ಹಿಂದೆಯೇ ಮರೆತ ವಿಷಯವಾಗಿದೆ. ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವು ಭೂಸೂಧಾರಣೆಯ ವಿಷಯಕ್ಕೆ ಪ್ರಾಮುಖ್ಯತೆ ನೀಡದಿರುವುದು ಕುಚೋದ್ಯವೇ ಸರಿ. ರಾಜಕೀಯ ಪಕ್ಷಗಳು ಕೂಡಾ ಕೇವಲ ಬಾಯಿ ಮಾತುಗಳಿಗಷ್ಟೇ ಸೀಮಿತವಾಗಿವೆ. ನಾವು ಕಳೆದ ಕೆಲವು ವರ್ಷಗಳಿಂದ ಗಮನಿಸುತ್ತಿರುವ ಸಾಮಾಜಿಕ ಚಳವಳಿಗಳು ಕಾರ್ಪೊರೇಟ್ ಸಂಸ್ಥೆಗಳು ಜಮೀನು ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ನಡೆದಿವೆಯೇ ಹೊರತು ಗ್ರಾಮೀಣ ಪ್ರದೇಶಗಳಲ್ಲಿ ಸೀಮಿತಗೊಳಿಸಲ್ಪಟ್ಟ ಸಮುದಾಯಗಳ ಮುಖ್ಯವಾಗಿ ದಲಿತರು ಮತ್ತು ಆದಿವಾಸಿಗಳಿಗೆ ಸೇರಿದ ಜಮೀನುಗಳನ್ನು ಮೇಲ್ಜಾತಿಯವರು ಸ್ವಾಧೀನಪಡಿಸಿಕೊಂಡಿರುವ ಬಗ್ಗೆ ವೌನವಹಿಸಿವೆ. ಸಮಾಜದ ಪ್ರಜಾಪ್ರಭುತ್ವೀಕರಣಕ್ಕೆ ಭೂಸುಧಾರಣೆಗಳು ಅತ್ಯಂತ ಅನಿವಾರ್ಯವಾಗಿದೆ. ಬಡತನ ನಿರ್ಮೂಲಕ್ಕೆ ಭೂಸುಧಾರಣೆ ಖಚಿತ ಅಸ್ತ್ರವಾಗಿದೆ ಎಂಬುದು ಜಗತ್ತಿನಾದ್ಯಂತ ಕಂಡುಕೊಳ್ಳಲಾಗಿರುವ ಸತ್ಯ.
ವಾಸ್ತವದಲ್ಲಿ, ರೈತ ಸಂಘಟನೆಗಳು ಮತ್ತು ಹಸಿವು ಮತ್ತು ಬಡತನದ ವಿರುದ್ಧ ಹೋರಾಡುವವರು ಹಾಗೂ ವಿಶ್ವಸಂಸ್ಥೆ, ಕೃಷಿಯ ಬೆಳೆಯುತ್ತಿರುವ ಕಾರ್ಪೊರೇಟೀಕರಣವನ್ನು ತಡೆಯಲು ಮತ್ತು ಬಡತನ ನಿರ್ಮೂಲನ ಮಾಡಲು ಹಾಗೂ ಜೈವಿಕ ಆಹಾರ ಬೆಳೆಯಲು ಕುಟುಂಬ ಕೃಷಿಗಾರಿಕೆಯನ್ನು ಒಂದು ದಾರಿಯನ್ನಾಗಿ ಸೂಚಿಸುತ್ತದೆ. ವ್ಯಕ್ತಿಯೊಬ್ಬರ ಆದಾಯವು ದಿನಕ್ಕೆ ಮುನ್ನೂರು ಕೋಟಿ ರೂ.ಗೂ ಅಧಿಕ ಏರಿಕೆಯಾಗಿರುವುದನ್ನು ಭಾರತ ಕಂಡಿದೆ. ಅದೇ ವ್ಯಕ್ತಿಯ ಕುಟುಂಬ ದೇಶದ ವಿವಿಧ ಬ್ಯಾಂಕ್ಗಳಿಗೆ 40,000 ಕೋಟಿ ರೂ. ಸಾಲ ಪಾವತಿ ಮಾಡಬೇಕಿದೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿಯ ಪ್ರಕಾರ, 2017ರ ಡಿಸೆಂಬರ್ ಕೊನೆಗೆ ಭಾರತದ ಎನ್ಪಿಎಗಳ ಅಂದರೆ ನಿರ್ವಹಿಸಲಾಗದ ಸಾಲಗಳ ವೌಲ್ಯ 8,40,958 ಕೋಟಿ ರೂ. ತಲುಪಿದೆ. ವರದಿಗಳ ಪ್ರಕಾರ, ಭಾರತದಲ್ಲಿ 14 ಕೋಟಿಗೂ ಅಧಿಕ ಕುಟುಂಬಗಳು ಯಾವುದೇ ರೀತಿಯ ಖಚಿತತೆ ಅಥವಾ ಸಾಮಾಜಿಕ ಭದ್ರತೆ ಇಲ್ಲದೆ ಹಂಚಿಕಾ ಕೃಷಿ ವಿಧಾನದಲ್ಲಿ ಕಾರ್ಯನಿರ್ವಹಿಸುತ್ತಿವೆೆ. ಅವರನ್ನು ರೈತರು ಎಂದು ಕರೆಯಲಾಗುವುದಿಲ್ಲ. ಭಾರತದ ಶೇ.22.5 ರೈತರು ಬಡತನ ರೇಖೆಗಿಂತ ಕೆಳಗಿದ್ದಾರೆ. ವಿವಿಧ ಪತ್ರಿಕೆಗಳು ಪ್ರಕಟಿಸಿರುವ ವರದಿಯ ಪ್ರಕಾರ 2011ರ ಜನಗಣತಿಯಂತೆ 26.3 ಕೋಟಿಗೂ ಅಧಿಕ ಕುಟುಂಬಗಳು ಕೃಷಿಯನ್ನೇ ನೆಚ್ಚಿಕೊಂಡಿವೆ. ಸಮಸ್ಯೆಯೆಂದರೆ, ಭೂಸುಧಾರಣೆಯು ಯಾಕೆ ಮುಖ್ಯ ರಾಜಕೀಯ ಕಾರ್ಯಸೂಚಿಯಾಗಿಲ್ಲ ಎಂಬುದು.
ನಾವೆಲ್ಲರೂ ಬಡತನವನ್ನು ನಿರ್ಮೂಲನಗೊಳಿಸಬೇಕು ಎಂದು ಬಯಸುತ್ತಿರುವಾಗ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಪಕ್ಷಗಳೂ ಭೂಸುಧಾರಣೆಯ ವಿಷಯವನ್ನು ಪ್ರಸ್ತಾಪಿಸದಿರಲು ಏನು ಕಾರಣ? ಭಾರತದಲ್ಲಿ ಬಡತನವೆಂಬುದು ಜಾತಿ ಆಧಾರಿತವಾಗಿದೆ. ಮುಕ್ತವಾಗಿ ಹೇಳುವುದಾದರೆ, ಜಮೀನುರಹಿತ ಜನರು ಯಾರು? ಸರಕಾರಕ್ಕೆ ನಾವು ಅಂಕಿಅಂಶಗಳನ್ನು ನೀಡುವ. 2011ರ ಆರ್ಥಿಕ ಗಣತಿಯ ಪ್ರಕಾರ, ಶೇ.79 ಆದಿವಾಸಿ ಕುಟುಂಬಗಳನ್ನು ವಂಚಿತ ಎಂದು ಪರಿಗಣಿಸಲಾಗಿದೆ. ಜಮೀನುರಹಿತರ ಪೈಕಿ ದಲಿತರು ಮತ್ತು ಆದಿವಾಸಿಗಳೇ ಹೆಚ್ಚಾಗಿದ್ದಾರೆ. ಭಾರತದಲ್ಲಿ ಹಸಿವಿನಿಂದ ಸಾಯುವವರನ್ನು ಮತ್ತು ಅವರ ಜಮೀನು ಸ್ಥಿತಿಯನ್ನು ಕಂಡಾಗ ನಮಗೆ ತಿಳಿಯುವುದೇನೆಂದರೆ, ಹಸಿವಿನಿಂದ ಸಂಭವಿಸಿದ ಬಹುತೇಕ ಸಾವುಗಳು ಭೂರಹಿತತೆಯ ನೇರ ಪರಿಣಾಮವಾಗಿ ಸಂಭವಿಸಿರುತ್ತವೆ. ಅಷ್ಟಕ್ಕೂ ಹಸಿವಿನಿಂದ ಸಾಯುವವರಾದರೂ ಯಾರು? ಅತ್ಯಂತ ಸೀಮಿತಗೊಳಿಸಲ್ಪಟ್ಟ ದಲಿತರು ಮತ್ತು ಆದಿವಾಸಿಗಳು. ವಿಫಲ ಭೂಸುಧಾರಣೆಗೆ ಜಾತಿ ಆಧಾರಿತ ಅಸಮಾನತೆ ಹೊಣೆಯಲ್ಲವೇ? ಅದು ಹೌದಾದಲ್ಲಿ ನಮ್ಮ ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಿರುವ ಜಮೀನು ಕ್ರೋಡೀಕರಣದ ಮೂಲಗಳನ್ನು ನಾವು ನಾಶಪಡಿಸಿ ಛಿದ್ರಗೊಳಿಸಬೇಕಿದೆ. ಇದರಿಂದ, ರಾಜಕೀಯ ಪ್ರಜಾಪ್ರಭುತ್ವಕ್ಕೆ ಅಗತ್ಯವೆಂದು ಬಾಬಾ ಸಾಹೇಬ್ ಅಂಬೇಡ್ಕರ್ ನಂಬಿದ್ದ ಸಾಮಾಜಿಕ ಪ್ರಜಾಪ್ರಭುತ್ವಕ್ಕೆ ದಾರಿ ತೆರೆಯಲಿದೆ. ವರ್ಷಗಳಿಂದಲೂ ನಾವು ಹಸಿವಿನಿಂದ ಸಂಭವಿಸಿದ ಸಾವಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ ಹಾಗೂ ಇತರ ಸರಕಾರಿ ಯೋಜನೆಗಳನ್ನೇ ಹೊಣೆ ಮಾಡುತ್ತಿದ್ದೇವೆ. ಆದರೆ ಒಂದಿಂಚೂ ಭೂಮಿ ಹೊಂದಿರದ ಸಮುದಾಯಗಳ ಜೊತೆ ಕೆಲಸ ಮಾಡಿರುವ ಮತ್ತು ಅವರನ್ನು ತಿಳಿದುಕೊಂಡಿರುವ ಕಾರಣ ಒಂದು ಮಾತನ್ನಂತೂ ನಾನು ಖಚಿತವಾಗಿ ಹೇಳಬಲ್ಲೆ, ಇಲ್ಲಿ ವಿಫಲವಾಗಿರುವುದು, ಹಸಿವಿನಿಂದ ಸಾವು ಮತ್ತು ಪರಿಶಿಷ್ಟ ಜಾರಿ ಮತ್ತು ಪಂಗಡಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಾರಣವಾಗಿರುವುದು ಭೂರಹಿತತೆ ಎಂಬುದನ್ನು ತಿಳಿಸದ ಚಳವಳಿಗಳು.
ಶಾಸನ ಸಭೆಗಳಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಸರಕಾರಗಳು ವಿಫಲವಾದರೆ, ಮತ್ತೊಂದೆಡೆ, ದೇಶವನ್ನು ದೋಚುತ್ತಿರುವ ಪ್ರಬಲ ಶಕ್ತಿಗಳು ಭೂಸ್ವಾಧೀನಪಡಿಸಿಕೊಳ್ಳುತ್ತಿರುವುದು ಹೆಚ್ಚುತ್ತಿರುವುದು ಚಿಂತೆಯ ವಿಷಯವಾಗಿದೆ. ನಮ್ಮಲ್ಲಿ ಬಡತನ ರೇಖೆಯಿರುವಾಗ ಅದರಂತೆಯೇ, ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅನೇಕ ವರ್ಷಗಳ ಹಿಂದೆ ತಿಳಿಸಿದಂತೆ ಶ್ರೀಮಂತ ರೇಖೆಯ ಅಗತ್ಯವೂ ಇದೆ. ಒಬ್ಬ ವ್ಯಕ್ತಿ ಎಷ್ಟು ಜಮೀನು ಹೊಂದಬಹುದು, ಎಷ್ಟು ಹಣ ಮಾಡಬಹುದು ಇತ್ಯಾದಿ ವಿಷಯಗಳ ಮೇಲೆ ನಿಯಂತ್ರಣವೇ ಇಲ್ಲದಿದ್ದರೆ ನಾವು ಬಡತನವನ್ನು ನಿರ್ಮೂಲನಗೊಳಿಸಲು ಹೇಗೆ ಸಾಧ್ಯ? ಹೆಚ್ಚುತ್ತಿರುವ ಅಸಮಾನತೆಗೆ ಬಡವರು ಕೆಲಸ ಮಾಡುವುದಿಲ್ಲ ಅಥವಾ ಸೋಮಾರಿಗಳಾಗಿದ್ದಾರೆ ಮತ್ತು ಕೆಲವು ಶ್ರೀಮಂತ ವ್ಯಕ್ತಿಗಳು ಶ್ರಮಪಟ್ಟು ದುಡಿಯುತ್ತಾರೆ ಮತ್ತು ಉತ್ತಮ ವ್ಯವಸ್ಥಾಪಕರಾಗಿದ್ದಾರೆ ಎಂಬುದು ಕಾರಣವಲ್ಲ. ಇಷ್ಟೊಂದು ಹಣವನ್ನು ಬಡಜನರನ್ನು ದೋಚಿ ಸಂಪಾದಿಸಲಾಗಿದೆ. ಹೆಚ್ಚು ಆದಾಯ ಮತ್ತು ಜಮೀನಿನ ಮೇಲೆ ನಾವು ನಿಯಂತ್ರಣ ಹೇರದಿದ್ದಲ್ಲಿ ನಾವು ವಿಫಲವಾಗಲಿದ್ದೇವೆ. ಈ ಹಿನ್ನೆಲೆಯಲ್ಲಿ, ಜಮೀನು ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರಬೇಕು ಮತ್ತು ಯಾವುದೇ ಸಂಘಟನೆ ಅಥವಾ ಕಂಪೆನಿ ತನಗೆ ಇಷ್ಟ ಬಂದಂತೆ ಸಾರ್ವಜನಿಕ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ನಾವು ಆಗ್ರಹಿಸುತ್ತೇವೆ. ಇದು ಬಹಿರಂಗವಾಗಿ ದೋಚಿದಂತೆ. ಬ್ಯಾಂಕ್ಗಳಿಂದ ಸಾರ್ವಜನಿಕರ ಹಣವನ್ನು ದೋಚುವುದರ ಜೊತೆಗೆ ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನೂ ದೋಚಲು ಈ ಕಂಪೆನಿಗಳಿಗೆ ಅವಕಾಶ ನೀಡಬಾರದು. ಬಡವರಿಗೆ ಜಾಗ ಒದಗಿಸಲು ಮತ್ತು ಸಮಾಜದ ಪ್ರಜಾಪ್ರಭುತ್ವಕ್ಕಾಗಿ ಎಲ್ಲ ಧಾರ್ಮಿಕ ಸಂಸ್ಥೆಗಳ ಮೇಲೆ ತೆರಿಗೆ ವಿಧಿಸಬೇಕು ಮತ್ತು ಈ ಸಂಸ್ಥೆಗಳ ಸ್ವಾಧೀನದಲ್ಲಿರುವ ಜಮೀನುಗಳನ್ನು ಬಡವರಿಗೆ ನೀಡಬೇಕು.
ಎಲ್ಲ ದೊಡ್ಡ ಗೋಶಾಲೆಗಳೂ ಜಮೀನು ನಿಯಂತ್ರಣದ ಅಡಿಗೆ ಬರಬೇಕು. ಅದರ ಹೊರತಾಗಿ, ಭೂದಾನ ಜಮೀನು ಏನಾಗಿದೆ, ಅದು ವಾಸ್ತವದಲ್ಲಿ ಗ್ರಾಮೀಣ ಬಡವರಿಗೆ ದೊರೆತಿದೆಯೇ ಎನ್ನುವುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ಸರಕಾರ ಆಯೋಗವನ್ನು ರಚಿಸಬೇಕು ಮತ್ತು ಈ ಕಾರ್ಯಕ್ಕಾಗಿ ಅದಕ್ಕೆ ಸೀಮಿತ ಸಮಯ ನೀಡಬೇಕು. ಎಲ್ಲ ಭೂದಾನ ಜಮೀನನ್ನು ದಲಿತರು ಮತ್ತು ಆದಿವಾಸಿಗಳಿಗೆ ಹಂಚಬೇಕು. ಅಭಿವೃದ್ಧಿಯ ಹೆಸರಲ್ಲಿ ಜಮೀನು ಅತಿಕ್ರಮಣ ಮಾಡಿಕೊಳ್ಳುವುದರ ಮೇಲೆ ಸರಕಾರ ತಾತ್ಕಾಲಿಕ ನಿಷೇಧ ಹೇರಬೇಕು. ಸಾರ್ವಜನಿಕರ ಒಳಿತಿಗೆ (ಪಬ್ಲಿಕ್ ಗುಡ್) ಎನ್ನುವ ಪದಕ್ಕೆ ಸ್ಪಷ್ಟೀಕರಣ ಒದಗಿಸಬೇಕು. ಅಂಬಾನಿ ಮತ್ತು ಅದಾನಿಯಂಥವರಿಗೆ ನೀಡಿದ ಜಮೀನನ್ನು ಸಾರ್ವಜನಿಕರ ಒಳಿತಿಗೆ ಎಂದು ಹೇಳಬಹುದೇ? ಇತ್ತೀಚಿನ ದಿನಗಳಲ್ಲಿ ವಿಮೆ ಹೊಂದಿರುವ ಮಧ್ಯಮ ವರ್ಗದ ಕುಟುಂಬಗಳೂ ಚಿಕಿತ್ಸೆಗೆ ಪ್ರವೇಶಿಸಲಾಗದ ಪಂಚತಾರಾ ಹೋಟೆಲ್ನಂತಿರುವ ಕಾರ್ಪೊರೇಟ್ ಆಸ್ಪತ್ರೆಗಳನ್ನೂ ಪಬ್ಲಿಕ್ ಗುಡ್ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಭಾರತವು ವಿಷಯಗಳ ನ್ಯಾಯಸಮ್ಮತ ಅನುಷ್ಠಾನಕ್ಕೆ ಸೂಕ್ತವಾದ ವಿಧಾನವನ್ನು ಅಭಿವೃದ್ಧಿಪಡಿಸಿಲ್ಲ. ನಮ್ಮ ಅಧಿಕಾರಶಾಹಿ ಮತ್ತು ನ್ಯಾಯಾಂಗ ಕಾಗದಗಳ ಮೇಲೆ ಜೀವಂತವಾಗಿವೆ. ನೀವು ಕಾಗದಗಳಲ್ಲಿ ಜೀವಂತವಾಗಿದ್ದೀರೆಂದರೆ ನೀವು ಜೀವಂತವಾಗಿದ್ದೀರಿ, ಇಲ್ಲವಾದರೆ ನೀವು ಸತ್ತವರಂತೆ. ಹಾಗಾಗಿ, ಸರಕಾರದ ಜಮೀನು ಮರುಹಂಚಿಕೆ ಅಂಕಿಅಂಶಗಳನ್ನು ಮೂಲದಿಂದಲೇ ಪರಿಶೀಲಿಸಬೇಕು.
ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಮತ್ತು ಇತರ ಹಲವು ಪ್ರದೇಶಗಳಲ್ಲಿ ಬಹಳಷ್ಟು ಜನರು ಭೂಮಾಲಕರಾಗಿದ್ದಾರೆ. ಆದರೆ ಅವರ ಜಮೀನು ಅವರ ಬಳಿ ಇಲ್ಲ. ಜನರು ತಮ್ಮ ಜಮೀನಿನ ಮೇಲೆ ಅಧಿಕಾರವನ್ನು ಯಾಕೆ ಹೊಂದಿಲ್ಲ ಎನ್ನುವುದನ್ನು ಪತ್ತೆಹಚ್ಚುವ ಜವಾಬ್ದಾರಿ ಆಡಳಿತವರ್ಗದ ಮೇಲಿದೆ. ಜಮೀನು ಸವರ್ಣ ಶಕ್ತಿಯ ಆಧಾರ ಮತ್ತು ಅತ್ಯಂತ ದೊಡ್ಡ ಮೂಲವಾಗಿದ್ದು ಅದರ ಮೂಲಕ ಗ್ರಾಮೀಣ ಬಡವರ ಮುಖ್ಯವಾಗಿ ದಲಿತ ಮತ್ತು ಆದಿವಾಸಿ ಸಮುದಾಯದ ಜನರ ಪ್ರಜಾಸತಾತ್ಮಕ ಹಕ್ಕುಗಳ ನಿಯಂತ್ರಣ ಮತ್ತು ಪ್ರಾಬಲ್ಯ ಸಾಧ್ಯವಾಗಿದೆ. ಮಂಡಲ ಆಯೋಗ ವರದಿಯ ಪ್ರಕಾರ ಇತರ ಹಿಂದುಳಿದ ವರ್ಗಕ್ಕೆ ಸೇರಿದ ಬಹಳಷ್ಟು ಜನರು ಜಮೀನುರಹಿತರಾಗಿದ್ದಾರೆ. ಆದರೆ ಮಂಡಲದಲ್ಲಿರುವ ಶಕ್ತಿಗಳು ಈ ಬಗ್ಗೆ ಮಾತನಾಡಿರುವುದು ಬಹಳ ಅಪರೂಪ. ಇದು ನಿಜವಾಗಿಯೂ ನಾಚಿಕೆಗೇಡು ಯಾಕೆಂದರೆ ಉನ್ನತ ನಾಯಕತ್ವ ತನ್ನದೇ ಹಿತಾಸಕ್ತಿಯನ್ನು ಕಾಪಾಡುತ್ತಿದೆ ಮತ್ತು ಭೂಸುಧಾರಣೆ ಬಗ್ಗೆ ಮಾತನಾಡಿದರೆ ತನ್ನ ಸಮುದಾಯದ ಹಿತಾಸಕ್ತಿಯ ವಿರುದ್ಧ ಮಾತನಾಡಿದಂತೆ ಎಂದು ತಿಳಿದಿದೆ. ಬಹುಜನ ಏಕತೆಯ ಬಗ್ಗೆ ಮಾತನಾಡುವ ಜನರೇ ಇವರು. ಮುಖ್ಯವಾಗಿ ಹಳ್ಳಿಗಳಲ್ಲಿ ಭೂ ಹಂಚಿಕೆ ಮತ್ತು ಅಧಿಕಾರದ ಸಮಾನ ಹಂಚಿಕೆಯ ಬಗ್ಗೆ ಮಾತನಾಡದೆ ಬಹುಜನ ಏಕತೆ ಸಾಧಿಸಲು ಹೇಗೆ ಸಾಧ್ಯ? ದೊಡ್ಡ ರೈತರು ಮತ್ತು ಕೃಷಿ ಸಮುದಾಯ ದಲಿತರೇ ಹೆಚ್ಚಾಗಿರುವ ಜಮೀನುರಹಿತರನ್ನು ಅಪ್ಪಿಕೊಳ್ಳಲು ಸಿದ್ಧವಿದೆಯೇ? ರಾಜಕೀಯ ಪಕ್ಷಗಳು ಮತ್ತು ನೀತಿ ನಿರೂಪಕರು ಈ ವಿಷಯಗಳ ಕುರಿತು ಮಾತನಾಡುವ ಸಮಯ ಒದಗಿಬಂದಿದೆ. ಇದು ಲಾಭದಾಯಕ ವಿಷಯವಲ್ಲ ಎಂದು ನನಗೆ ತಿಳಿದಿದೆ ಮತ್ತು ಈ ವಿಷಯವನ್ನು ಜೆಎನ್ಯುನ ಕೆಂಪು ಧ್ವಜಧಾರಿಗಳು ಎತ್ತುತ್ತಾರೆ ಎಂದು ಅನೇಕರು ಭಾವಿಸಿದ್ದಾರೆ. ಇದು ಕೇವಲ ಕೆಂಪು ಪಡೆಯ ವೈಫಲ್ಯವಲ್ಲ, ನೀಲಿ ಪಡೆಯ ವೈಫಲ್ಯ ಕೂಡಾ.
ಸಮಾಜವನ್ನು ಪ್ರಜಾಪ್ರಭುತ್ವೀಕರಣಗೊಳಿಸುವ ಮತ್ತು ಊಳಿಗಮಾನ್ಯ ಜಾತಿ ಪದ್ಧತಿಯನ್ನು ತೊಡೆಯಲು ನೆರವಾಗುವ ಇಂಥ ವಿಷಯಗಳನ್ನು ಬ್ರಾಹ್ಮಣ ಬಂಡವಾಳಶಾಹಿಗಳು ಪ್ರಸ್ತಾಪಿಸುತ್ತಾರೆ ಎಂದು ನಾವು ನಿರೀಕ್ಷಿಸುವುದಾದರೂ ಹೇಗೆ? ಇದು ಕೇವಲ ಪಕ್ಷಗಳ ವಿಷಯವಲ್ಲ, ಅನೇಕ ಚಳವಳಿಗಳು ಕೂಡಾ ಯಥಾಸ್ಥಿತಿಯನ್ನು ಕಾಪಾಡಲೆಂದೇ ನಡೆಯುತ್ತಿವೆ. ಒಂದೊಮ್ಮೆ ದಲಿತರು ಮತ್ತು ಆದಿವಾಸಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಬಡವರ್ಗ ತನ್ನ ಹಕ್ಕುಗಳ ಬಗ್ಗೆ ತಿಳಿದುಕೊಂಡರೆ, ಮುಂದೆ ಅದನ್ನು ಅವರು ಕಿತ್ತುಕೊಂಡು ಕ್ರೂರ ಜಾತಿ ಪದ್ಧತಿಯನ್ನು ಒಡೆದು ಹಾಕುತ್ತಾರೆ ಎಂಬ ಅರಿವು ಈ ಚಳವಳಿಗಳಿಗಿದೆ. ಜಾತಿ ವ್ಯವಸ್ಥೆ ಎಂಬುದು ಕೇವಲ ಒಂದು ಸಾಮಾಜಿಕ ರಚನೆಯಲ್ಲ. ಇದು, ದಲಿತರನ್ನು ಆರ್ಥಿಕ ವಂಚಿತರಾಗುವಂತೆ ಮಾಡುವ ಮೂಲಕ ಅವರನ್ನು ಸಂಪೂರ್ಣವಾಗಿ ದುರ್ಬಲಗೊಳಿಸಲು ಅಭಿವೃದ್ಧಿಪಡಿಸಲಾದ ಒಂದು ಸಂಸ್ಕೃತಿ. ನಮ್ಮ ಹಳ್ಳಿಗಳಲ್ಲಿ ಅಧಿಕಾರ ಎನ್ನುವುದು ಜಮೀನಿನ ಮೂಲಕ ಸಾಗುತ್ತದೆ. ಭೂಮಿ ಹೊಂದಿರುವ ಜನರೇ ನಮ್ಮ ಪ್ರಜಾಪ್ರಭುತ್ವ, ನಮ್ಮ ಸಾಮಾಜಿಕ ರಚನೆಯನ್ನು ನಿಯಂತ್ರಿಸುತ್ತಾರೆ ಮತ್ತು ನಮ್ಮ ಸಂಸ್ಕೃತಿಯನ್ನು ವ್ಯಾಖ್ಯಾನಿಸುತ್ತಾರೆ. ತಮಗೆ ಸಂಬಂಧಪಟ್ಟ ವಿಷಯ ಅತ್ಯಂತ ಕಡಿಮೆ ಬಾರಿ ಪ್ರಸ್ತಾಪಿಸಲಾಗುವ ಕಾರಣ ಸೀಮಿತವರ್ಗದ ಜನರು ಹತಾಶೆಗೊಂಡಿದ್ದಾರೆ. ನಾವು ನಮ್ಮನ್ನು ಭೂ ಮತ್ತು ಕೃಷಿ ಸುಧಾರಣೆಗೆ ಮತ್ತು ಸಮಾಜವನ್ನು ಪ್ರಜಾಪ್ರಭುತ್ವಗೊಳಿಸಲು ಮತ್ತು ಊಳಿಗಮಾನ್ಯ ಜಾತಿ ವ್ಯವಸ್ಥೆಯ ಬೆನ್ನು ಮುರಿಯಲು ಅರ್ಪಿಸಿಕೊಳ್ಳಬೇಕಾದ ಸಮಯ ಬಂದಿದೆ. ಇದು ನಮ್ಮ ಸಂಪನ್ಮೂಲಗಳ ಸಮಾನ ಹಂಚಿಕೆಯಿಂದ ಮಾತ್ರ ಸಾಧ್ಯ. ಎಷ್ಟು ರಾಜಕೀಯ ಪಕ್ಷಗಳು ಮತ್ತು ರಾಜಕೀಯ ವಿಶ್ಲೇಷಕರು ಈ ವಿಷಯವನ್ನು 2019ರ ಚುನಾವಣೆಗಳ ರಾಷ್ಟ್ರೀಯ ಕಾರ್ಯಸೂಚಿಯಲ್ಲಿ ಪ್ರಸ್ತಾಪಿಸುತ್ತಾರೆ ಎನ್ನುವುದನ್ನು ಕಾದು ನೋಡೋಣ.
ಕೃಪೆ: countercurrents