ಬ್ಯಾರಿ ಭಾಷೆಯಲ್ಲಿ ಪಂಚತಂತ್ರ
ಮೂಲತಃ ವಿಷ್ಣುಶರ್ಮರಿಂದ ಬರೆಯಲ್ಪಟ್ಟಿದೆ ಎಂದು ನಂಬಲಾಗಿರುವ ಪಂಚತಂತ್ರವನ್ನು ಕನ್ನಡಕ್ಕೆ ತಂದ ಕೀರ್ತಿ ದುರ್ಗಸಿಂಹರಿಗೆ ಸಲ್ಲುತ್ತದೆ. ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿರುವ ಪಂಚತಂತ್ರವು ಪ್ರಾಚೀನ ಭಾರತದ ಮೇರು ಕೃತಿಗಳಲ್ಲಿ ಒಂದು. ಸಾವಿರಾರು ವರ್ಷಗಳಿಂದ ಪದೇ ಪದೇ ಪ್ರಕಟಗೊಳ್ಳುತ್ತಿರುವ, ಭಾಷಾಂತರಗೊಳ್ಳುತ್ತಿರುವ ಮತ್ತು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಪಂಚತಂತ್ರದ ಕತೆೆಗಳು ಮನುಷ್ಯನ ಬದುಕಿನ ನಾನಾ ಮುಖಗಳ ಪ್ರತಿಬಿಂಬದಂತಿವೆ.
ಪಂಚತಂತ್ರ ಎನ್ನುವುದು ನೀತಿಕತೆಗಳ ಒಂದು ಗುಚ್ಚ. ಪ್ರಕರಣವನ್ನು ಭೇದಿಸುವುದು, ಪರಾಂಬರಿಸಿ ನೋಡುವುದು, ಮಿತ್ರಭೇದ, ಸ್ನೇಹ ಸಂಪಾದಿ ಸುವುದು, ವೈರತ್ವ ಸಾಧಿಸುವುದು ಎಂಬ ಐದು ತಂತ್ರಗಳನ್ನು ಕತೆಗಳ ಮೂಲಕ ಹೆಣೆದು ಕತೆೆಯೊಳಗೆ ಉಪಕತೆಯನ್ನು ಪೋಣಿಸಿ ಬುದ್ಧಿ ಮತ್ತು ತಂತ್ರಗಳ ಮೇಲಾಟವನ್ನು ಪ್ರದರ್ಶಿಸಿ ಅಂತಿಮವಾಗಿ ಬುದ್ಧಿಯೇ ಮೇಲೆಂದು ಸಾರುವ ಪಂಚತಂತ್ರದ ಕತೆೆಗಳು ಸರ್ವ ಕಾಲಕ್ಕೂ, ಸರ್ವದೇಶಗಳಿಗೂ ವಿದಿತವಾಗಿವೆ.
ಅರೆಬಿಕ್, ಪರ್ಷಿಯನ್, ಇಂಗ್ಲಿಷ್, ಗ್ರೀಕ್, ಇಟಾಲಿಯನ್, ಫ್ರೆಂಚ್, ಸಿರಿಯನ್ , ಜರ್ಮನ್ ಮೊದಲಾದ ಪ್ರಮುಖ ಭಾಷೆಗಳಿಗೆ ಅನುವಾದ ಗೊಂಡಿರುವ ಪಂಚತಂತ್ರ ಭಾರತೀಯ ಭಾಷೆಗಳಲ್ಲಿ ಜನಜನಿತವಾದ ಕೃತಿ. ಶಾಲಾ ಕಾಲೇಜು ಪಠ್ಯಗಳಲ್ಲಿ ಅಡಕವಾಗಿರುವ ಪಂಚತಂತ್ರದ ಕತೆೆಗಳು ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲಾ ವಯೋಮಾನದವರನ್ನು ತದೇಕಚಿತ್ತದಿಂದ ಆಲಿಸುವಂತೆ ಮತ್ತು ಯೋಚಿಸುವಂತೆ ಮಾಡಬಲ್ಲ ಶಕ್ತಿಯನ್ನು ಹೊಂದಿದೆ.
ಇಂತಹ ಪ್ರಸಿದ್ಧ ಕೃತಿಯೊಂದು ಇದೀಗ ಬ್ಯಾರಿ ಭಾಷೆಗೆ ಅನುವಾದಗೊಂಡಿರುವುದು ಬ್ಯಾರಿ ಭಾಷೆಯ ಪರಿಧಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಮೈಲುಗಲ್ಲು ಎಂದು ನಾನು ಭಾವಿಸಿದ್ದೇನೆ. ಇತ್ತೀಚಿನ ದಶಕಗಳಲ್ಲಿ ಗರಿಬಿಚ್ಚಿ ತೆರೆದುಕೊಳ್ಳುತ್ತಿರುವ ಒಂದು ಭಾಷೆಗೆ ತನ್ನ ಸ್ವತಂತ್ರ ಕಥನ ಕಾವ್ಯಗಳ ಜೊತೆಯಲ್ಲಿ ಇತರ ಭಾಷೆಗಳ ಸಾಹಿತ್ಯ ಅನುವಾದಗೊಂಡರೆ ಅದು ಮೂಲಭಾಷೆಗಳಿಗಿಂತಲೂ ಸ್ವೀಕರಿಸುವ ಭಾಷೆಗೆ ಹೆಚ್ಚು ಪ್ರಯೋಜನಕಾರಿ.
ಮೂಲ ಸಾಹಿತ್ಯ ರಚನೆ ಒಂದು ಬಗೆಯ ಸ್ವಂತಿಕೆ, ಸೃಜನಶೀಲತೆಯ ಪರೀಕ್ಷೆಯಾದರೆ ಅನುವಾದ ಎನ್ನುವುದು ಪದಶೋಧನೆ, ಪದಸಂಯೋಜನೆಯ ಸವಾಲಾಗಿದೆ. ಅದರಲ್ಲೂ ನೆರೆಹೊರೆಯ ಭಾಷೆಗಳ ಗಾಢ ಪ್ರಭಾವವನ್ನು ಹೊಂದಿರುವ ಬ್ಯಾರಿ ಭಾಷೆಗೆ ವಿಶಾಲಪದ ಪ್ರಯೋಗವುಳ್ಳ ಕನ್ನಡದಿಂದ ಒಂದು ಕೃತಿಯನ್ನು ಅನುವಾದ ಮಾಡುವಾಗ ಅನುವಾದಕನಿಗೆ ಎದುರಾಗುವ ಸವಾಲುಗಳು, ಓರ್ವ ಭಾಷಾ ವಿಜ್ಞಾನಿಗೆ ಎದುರಾಗುವ ಸವಾಲುಗಳೇ ಆಗಿವೆ.
ಇಂತಹ ಸವಾಲನ್ನು ಸ್ವೀಕರಿಸಿ ಪಂಚತಂತ್ರವನ್ನು ಬ್ಯಾರಿ ಭಾಷೆಗೆ ಅನುವಾದಿಸಿ ಬ್ಯಾರಿ ಭಾಷೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ ಅನುವಾದಕ ಅಬ್ದುಲ್ ರಹಮಾನ್ ಕುತ್ತೆತ್ತೂರು. ಬ್ಯಾರಿ, ಕನ್ನಡ, ತುಳು ಈ ತ್ರಿಭಾಷೆಗಳಲ್ಲಿ ನೂರಾರು ಕತೆ, ಕವನ, ಲೇಖನ, ಅಧ್ಯಯನ ಪ್ರಕಾರಗಳನ್ನು ಬರೆದಿರುವ ಕುತ್ತೆತ್ತೂರು ಶುದ್ಧ ಬ್ಯಾರಿ ಪದ ಪ್ರಯೋಗಗಳಿಗೆ ಹೆಸರುವಾಸಿಯಾದವರು. ಬ್ಯಾರಿ ಪಂಚತಂತ್ರ ಬ್ಯಾರಿ ಭಾಷೆಗೆ ಒಂದು ಗರಿಯಾಗಿ ಅನುವಾದಿತವಾಗಿದೆ.
ಐದು ತಂತ್ರಗಳನ್ನು ಬೋಧಿಸುವ ನೀತಿಕತೆಗಳನ್ನು ಬಹುತೇಕ ಮೂಲ ಬ್ಯಾರಿ ಪದಗಳನ್ನು ಬಳಸಿಕೊಂಡು ಅನುವಾದಿಸಿರುವುದು ಗಮನಾರ್ಹ ವಿಚಾರ. ಮೂಲಕತೆಗಳಿಗೆ ಚ್ಯುತಿಬಾರದಂತೆ ಅನುವಾದಿಸಿ ಬ್ಯಾರಿ ಭಾಷೆಯ ಗರಿಮೆಯನ್ನು ಹೆಚ್ಚುಮಾಡುವಲ್ಲಿ ಅನುವಾದಕ ಅಬ್ದುಲ್ ರಹಮಾನ್ ಕುತ್ತೆತ್ತೂರು ಯಶಸ್ವಿಯಾಗಿದ್ದಾರೆ.
ಕತೆಯ ಮೂಲಕ ಪಾಠ ಹೇಳುವ ವಿಧಾನ ಬಲು ಪ್ರಾಚೀನವಾದುದು ಮತ್ತು ಇಂದಿಗೂ ಕೂಡಾ ಅಷ್ಟೇ ಜನಪ್ರಿಯವಾದುದು. ಪಂಚತಂತ್ರದ ಕತೆೆಗಳು ಆಕರ್ಷಕ ಪಾಠೋಪಕರಣಗಳಂತಿವೆೆ. ಮುಂದೊಂದು ದಿನ ಶಾಲಾ ಕಾಲೇಜುಗಳಲ್ಲಿ ಬ್ಯಾರಿ ಭಾಷಾ ಕಲಿಕೆ ಆರಂಭವಾದರೆ ಆ ದಿನಗಳಲ್ಲಿ ಬ್ಯಾರಿ ಭಾಷಾ ಪಠ್ಯರಚನೆಗಾಗಿ ಈ ಪಂಚತಂತ್ರ ಕತೆೆಗಳು ಕೈಯಲ್ಲಿ ಸಿದ್ಧ ಪರಿಹಾರವಾಗಿ ಕಾಣಲು ಸಾಧ್ಯ. ಕನ್ನಡ ಮತ್ತು ಇತರ ಸಹೋದರ ಭಾಷೆಗಳಿಂದ ಬ್ಯಾರಿ ಭಾಷೆಗೆ ಇನ್ನಷ್ಟು ಕತೆ, ಕವನಗಳು ಅನುವಾದಗೊಳ್ಳಬೇಕಾದ ಜರೂರತ್ತು ಇದೆ.