ಜಾಹೀರಾತಿನ ಹಾವಳಿಯಿಂದ ಪ್ರಯಾಣಿಕರನ್ನು ರಕ್ಷಿಸಿ
ಮಾನ್ಯರೆ,
ದೂರದ ಊರಿನಿಂದ ಉದ್ಯಾನ ನಗರಿ ಬೆಂಗಳೂರನ್ನು ವೀಕ್ಷಿಸಲೆಂದೇ ಬಂದವರಿಗೆ ನಗರವನ್ನು ಕಣ್ತುಂಬಾ ನೋಡಿ ಆನಂದಿಸಬೇಕೆಂಬ ಬಯಕೆ ಇರುತ್ತದೆ. ಹೀಗಾಗಿ ಪರ ಊರಿಗರು ನಗರ ವೀಕ್ಷಣೆಗೆ ಹೆಚ್ಚಾಗಿ ಇಲ್ಲಿಯ ಬಿಎಂಟಿಸಿ ಬಸ್ಗಳನ್ನು ಅವಲಂಬಿಸುತ್ತಾರೆ.
ಆದರೆ ಇಂದು ಈ ಬಿಎಂಟಿಸಿ ಬಸ್ಗಳು ಜಾಹೀರಾತಿನ ಡಬ್ಬಿಗಳಾಗಿ ಮಾರ್ಪಟ್ಟು, ಬಸ್ಸಲ್ಲಿ ಕುಳಿತು ಹೊರಗೆ ಇಣುಕಲೂ ಸಾಕಷ್ಟು ಜಾಗವಿರುವುದಿಲ್ಲ. ಈ ಬಸ್ಗಳಲ್ಲಿ ಮೊದಲೇ ತೀರಾ ಚಿಕ್ಕದಾಗಿರುವ ಕಿಟಕಿಗಳನ್ನು ಇನ್ನಷ್ಟು ಚಿಕ್ಕದಾಗಿಸಿ ಇಡೀ ಮೇಲ್ಭಾಗವನ್ನು ಜಾಹೀರಾತಿಗೆ ಮೀಸಲಿಟ್ಟಿರುತ್ತಾರೆ. ಹೀಗಾಗಿ ಪ್ರಯಾಣಿಕರು ನಗರದ ಸೌಂದರ್ಯವನ್ನು ನೋಡಿ ಆನಂದಿಸುವುದು ಬಿಡಿ, ಬಸ್ಸಿನೊಳಗೆ ಉಸಿರುಗಟ್ಟುವ ವಾತಾವರಣದಲ್ಲಿಯೇ ಪ್ರಯಾಣಿಸಬೇಕಾಗುತ್ತದೆ. ಬೇಸಿಗೆಯ ಸಮಯದಲ್ಲಂತೂ ಈ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ.
ಆದ್ದರಿಂದ ಸಂಬಂಧಪಟ್ಟವರು ಈ ಸಮಸ್ಯೆಯ ಬಗ್ಗೆ ಗಮನಹರಿಸಿ, ಜಾಹೀರಾತುಗಳ ಹಾವಳಿಯಿಂದ ಪ್ರಯಾಣಿಕರು ಬಸವಳಿಯದಂತೆ ಇನ್ನಾದರೂ ಕ್ರಮಕೈಗೊಳ್ಳಬೇಕಾಗಿದೆ.
Next Story