ವಿಶ್ವ ಜಲ ದಿನ ಮತ್ತು ಜಲಕ್ಷಾಮ
ಮುಂದೊಂದು ದಿನ ಜಗತ್ತಿನ ಎಲ್ಲ ದೇಶಗಳೂ ಹನಿ ನೀರಿಗಾಗಿ ಹೊಡೆದಾಡಬಹುದು. ಜಲಕ್ಷಾಮ ಎಂಬುದು ಮನುಕುಲದ ಕ್ಷಯವಾಗುವುದಕ್ಕೆ ದಾರಿಯಾಗಬಹುದು. ಅಂತಹ ದಿನಗಳು ಬರುವ ಮೊದಲೇ ಎಚ್ಚೆತ್ತುಕೊಂಡು, ಕಾರ್ಯತತ್ಪರವಾಗುವುದು ಜಾಣತನವಲ್ಲವೇ?
ಮನುಷ್ಯನು ಊಟ ತಿಂಡಿ ಹಾಗೂ ನಿದ್ರೆಯಿಲ್ಲದೇ ಜೀವಿಸಬಲ್ಲ. ಆದರೆ ಬದುಕಿನ ಅವಿಭಾಜ್ಯ ಅಂಗವಾದ ಗಾಳಿ ಮತ್ತು ನೀರಿಲ್ಲದೇ ಬದುಕುವುದು ಕಷ್ಟಸಾಧ್ಯ. ಪ್ರತೀ ವರ್ಷ ಮಾರ್ಚ್ 22ರಂದು ವಿಶ್ವಾದ್ಯಂತ ‘ವಿಶ್ವ ಜಲ ದಿನ’ವನ್ನು ಆಚರಿಸಲಾಗುತ್ತದೆ. ಆ ಮೂಲಕ ನೀರಿನ ಕೊರತೆಯ ಬಗ್ಗೆ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದೇ ಈ ಆಚರಣೆಯ ಉದ್ದೇಶ. ಆದರೆ ಎಷ್ಟು ಜಾಗೃತಿ ಮೂಡಿಸಿದರೂ ನೀರಿಗೆ ಸಮಸ್ಯೆ ಇಲ್ಲದವರು ನೀರನ್ನು ಬೇಕಾ ಬಿಟ್ಟಿ ವಿನಿಯೋಗಿಸಿ ದುರುಪಯೋಗ ಮಾಡುವ ಪರಿ ಒಂದು ಕಡೆಯಾದರೆ, ಪ್ರತೀ ನಿತ್ಯ ನೀರಿಗಾಗಿ ಹಾಹಾಕಾರ ಪಡುವವರು ಇನ್ನೊಂದು ಕಡೆ ನಮಗೆ ಕಾಣಬಹುದಾಗಿದೆ. ಬಹುತೇಕ ಪ್ರದೇಶಗಳಲ್ಲಿ ಸರಿಯಾಗಿ ಮಳೆಯಾಗದೆ, ನೀರಾವರಿ ವ್ಯವಸ್ಥೆ ಇಲ್ಲದೇ ಜಲಕ್ಷಾಮ ತಲೆದೋರುತ್ತದೆ. ಕೆಲವೆಡೆ ನೀರನ್ನು ಅತಿಯಾಗಿ ಬಳಕೆ ಮಾಡುವುದರಿಂದ ಜಲವನ್ನು ದುರ್ಬಳಕೆ ಮಾಡಲಾಗುತ್ತದೆ. ಮತ್ತೊಂದೆಡೆ ನೀರಿಗಾಗಿ ಹಾಹಾಕಾರ ತಲೆದೋರಿದ್ದನ್ನು ಕಾಣಬಹುದಾಗಿದೆ. ಜಲ ಸಂಬಂಧಿತ ಸಂಗತಿಗಳನ್ನು ಮತ್ತು ಅದರ ವಾಸ್ತವ ಚಿತ್ರಣಗಳನ್ನು ಅರಿಯುವುದಕ್ಕೆ ಅವಕಾಶ ಮಾಡಿಕೊಡುವ ದಿನವೇ ‘ವಿಶ್ವ ಜಲದಿನ’. ವಿಶ್ವ ಸಂಸ್ಥೆಯು 1992ರ ಹವಾಮಾನ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ ‘ಜಲ ದಿನ’ ಆಚರಿಸುವ ಕುರಿತು ಪ್ರಸ್ತಾವನೆಯಾದ ಬಳಿಕ 1993ರ ಮಾರ್ಚ್ 22ರಂದು ಮೊದಲ ಜಲ ದಿನ ಆಚರಿಸಲಾಯಿತು. ಅಂದಿನಿಂದ ವಿಶ್ವ ಸಂಸ್ಥೆ ಗುರುತಿಸುವ ನಿರ್ದಿಷ್ಟ ಥೀಮ್ ಅಡಿಯಲ್ಲಿ ಪ್ರತೀವರ್ಷ ಜಲದಿನ ಆಚರಿಸಿಕೊಂಡು ಬರಲಾಗುತ್ತಿದೆ. 2016ರಲ್ಲಿ ‘ಶುದ್ಧ ನೀರು ಮತ್ತು ಉದ್ಯೋಗ’ ಎಂಬ ಘೋಷಣೆಯೊಂದಿಗೆ ಆಚರಿಸಿದರೆ ಈ ವರ್ಷ ಅಂದರೆ 2017ರಲ್ಲಿ ‘ತ್ಯಾಜ್ಯನೀರು’ (waste water) ಎಂಬ ಘೋಷಣೆಯೊಂದಿಗೆ ಆಚರಿಸಲಾಗುತ್ತದೆ.
ನಮ್ಮಲ್ಲಿ ಕಳೆದ ಹಲವು ವರ್ಷಗಳಿಂದ ಮಳೆ ಕಡಿಮೆ ಬೀಳುತ್ತಿರುವುದರಿಂದ ಬೆಳೆಗಳು ಬರುತ್ತಿಲ್ಲ. ಕುಡಿಯಲು ನೀರು ಲಭ್ಯವಾಗುತ್ತಿಲ್ಲ. ಹಾಗಾಗಿ, ಜನ, ಜಾನುವಾರುಗಳು ಇನ್ನಿಲ್ಲದಂತೆ ಸಂಕಷ್ಟ ಎದುರಿಸುವಂತಾಗಿದೆ. ಸುಮಾರು 700 ಕೋಟಿ ಮನುಷ್ಯರು ಮತ್ತು ಅದೆಷ್ಟೋ ಲೆಕ್ಕವಿರದ ಸಂಖ್ಯೆಯ ಮಾನವೇತರ ಜೀವಿಗಳಿಗೆ ನೀರು ಜೀವನಾಧಾರ. ಮಾನವನ ದೇಹದ ಒಟ್ಟ್ಟು ತೂಕದಲ್ಲಿ ಶೇ. 60-65 ಭಾಗ ನೀರೇ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಮಾನವ, ಪ್ರಾಣಿ ಪಕ್ಷಿಗಳು ಅಥವಾ ಸಸ್ಯಗಳಿರಬಹುದು ಇವೆಲ್ಲವುಗಳಿಗೂ ನೀರು ಅತೀ ಅಗತ್ಯವೆಂಬುದರಲ್ಲಿ ಯಾವುದೇ ತರ್ಕವಿಲ್ಲ. ವರ್ತಮಾನದಲ್ಲಿ ಮಾನವನಿಗೆ ಭೂಮಿ ಮಾತ್ರ ವಾಸಯೋಗ್ಯ ಸ್ಥಳ. ನೀರನ್ನು ಬಳಸುವಾಗ ಮಿತವಾಗಿ ಬಳಸಿದರೆ ಮಾತ್ರ ಇತರ ಜೀವಜಾಲಗಳು ಉಳಿಯಲು ಸಾಧ್ಯ. ನೀರು ಮನುಷ್ಯ ಮಾತ್ರ ಉಪಯೋಗಿಸಬೇಕಾದ ವಸ್ತುವಲ್ಲ. ಅದರಲ್ಲಿ ಇತರ ನೈಸರ್ಗಿಕ ಜೀವಜಾಲಗಳಿಗೂ ಹಕ್ಕಿದೆ. ಆದರೆ ಇದನ್ನು ಅರ್ಥೈಸಿಕೊಳ್ಳದ ನಾವು ನೀರನ್ನು ಯಥೇಚ್ಛವಾಗಿ ಬಳಸಿ ನೈಸರ್ಗಿಕ ಸಂಪತ್ತನ್ನು ಹಾಳುಗೆಡವುತ್ತಿದ್ದೇವೆ.
ಸರಕಾರ ಎಷ್ಟೇ ಬೊಬ್ಬಿರಿದರೂ, ಎಷ್ಟೇ ಯೋಜನೆಗಳನ್ನು ಜಾರಿಗೆ ತಂದರೂ ನಾವು ಮಾತ್ರ ಕಿವುಡರಾಗಿ ಕುಳಿತಿದ್ದೇವೆ. ಕೃಷಿ, ಕೈಗಾರಿಕೆ, ಹೈನುಗಾರಿಕೆ, ಮತ್ತು ನಮ್ಮ ದಿನನಿತ್ಯದ ಬಳಕೆಗಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ, ದಿನವೊಂದಕ್ಕೆ ಸಾವಿರಾರು ಲೀಟರ್ ನೀರು ನಮ್ಮಿಂದ ವ್ಯಯಿಸಲ್ಪಡುತ್ತಿದೆ.
ಹಾಗಾದರೆ ನೀರನ್ನು ಬಳಸದೆ ಬದುಕುವುದು ಹೇಗೆ? ಎಂಬ ಪ್ರಶ್ನೆ ಉದ್ಭವಿಸಬಹುದು. ಹೌದು, ಜಲವಿರದೆ ಈ ಜೀವವಿರದು ಎಂಬುದು ಪ್ರತ್ಯಕ್ಷ ಸತ್ಯ. ಆದರೆ ಅದರ ಬಳಕೆಗೆ ಒಂದು ಇತಿ ಮಿತಿಯನ್ನು ಹೊಂದಬೇಕಾಗಿರುವುದು ಅತ್ಯಗತ್ಯ. ನೀರನ್ನು ವಿನಾಕಾರಣ ಪೋಲು ಮಾಡುವ ಬದಲು ಅದನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕೆಂಬುದೇ ನಮ್ಮ ಉದ್ದೇಶವಾಗಬಾರದೇಕೆ?.
ಭೂಮಿಯ ಅಂತರಾಳದಲ್ಲಿರುವ ಜಲಮೂಲ ಖಾಲಿಯಾದರೆ ಉಳಿಯುವುದು ಸಾಗರದ ಉಪ್ಪುನೀರು ಮಾತ್ರ. ಅದು ಹೇರಳವಾಗಿ ಇದೆಯಾದರೂ, ಅದನ್ನು ಸಂಸ್ಕರಿಸಿ, ಶುದ್ಧಗೊಳಿಸಿ, ಸಿಹಿನೀರಾಗಿ ಪರಿವರ್ತಿಸುವುದು ಅಷ್ಟೇನೂ ಸುಲಭವಲ್ಲ ಮತ್ತು ವೆಚ್ಚದಾಯಕವೂ ಹೌದು. ಅಂತಹ ಪರಿಸ್ಥಿತಿ ಬಂದರೆ 1 ಲೀಟರ್ ನೀರಿನ ಬೆಲೆ 1 ಲೀಟರ್ ಪೆಟ್ರೋಲ್ ಬೆಲೆಗಿಂತ ಜಾಸ್ತಿಯಾದೀತು!!.
ಇದೆಲ್ಲವುದರ ಅರಿವುಗಳ ನಡುವೆ, ಮತ್ತದೇ ಸದ್ದುಗದ್ದಲಗಳ ನಡುವೆ, ಇನ್ನೊಂದು ವಿಶ್ವ ಜಲ ದಿನ ಸದ್ದಿಲ್ಲದೇ ಆಗಮಿಸಿ, ಸರಿದು ಹೋಗುತ್ತಿದೆ. ನಿಜವಾದ ಅರ್ಥದಲ್ಲಿ ಪ್ರತೀಯೊಬ್ಬ ನಾಗರಿಕನಿಗೂ ಈ ದಿನದ ಮಹತ್ವವನ್ನು ಸಾರಿ ಹೇಳುವ, ಅರ್ಥಮಾಡಿಸುವ ಅಗತ್ಯವಿದೆ. ಈ ನೈಸರ್ಗಿಕ ಸಂಪತ್ತುಗಳು ನಮ್ಮ ಭವಿಷ್ಯದ ನಾಗರಿಕತೆಯ ಸೊತ್ತು ಎನ್ನುವುದನ್ನೂ ತಿಳಿಸಬೇಕಿದೆ. ಒಬ್ಬ ಸಾಧಾರಣ ನಾಗರಿಕನಾಗಿ ಜಲ ಸಂಪತ್ತನ್ನು ಉಳಿಸಲು ನಾವೇನು ಮಾಡಬಹುದೆಂದು ಅರಿಯುವ ಕಾರ್ಯವಾಗಬೇಕಿದೆ. ಮುಂದೊಂದು ದಿನ ಜಗತ್ತಿನ ಎಲ್ಲ ದೇಶಗಳೂ ಹನಿ ನೀರಿಗಾಗಿ ಹೊಡೆದಾಡಬಹುದು. ಜಲಕ್ಷಾಮ ಎಂಬುದು ಮನುಕುಲದ ಕ್ಷಯವಾಗುವುದಕ್ಕೆ ದಾರಿಯಾಗಬಹುದು. ಅಂತಹ ದಿನಗಳು ಬರುವ ಮೊದಲೇ ಎಚ್ಚೆತ್ತುಕೊಂಡು, ಕಾರ್ಯತತ್ಪರವಾಗುವುದು ಜಾಣತನವಲ್ಲವೇ?
ಪ್ರತೀ ಕುಟುಂಬಕ್ಕೆ ನೀರನ್ನು ಮಿತವಾಗಿ ಬಳಸುವುದಾದರೆ ದಿನವೊಂದಕ್ಕೆ ಸರಾಸರಿ 400-500ಲೀ. ನೀರು ಬೇಕಾಗಬಹುದು. ಆದರೆ ಇಂದು ಪ್ರತೀ ಮನೆಯಲ್ಲೂ 800-1,000 ಲೀ. ಮತ್ತು ಅದಕ್ಕಿಂತಲೂ ಹೆಚ್ಚು ನೀರನ್ನು ಬಳಸುವುದರ ಮೂಲಕ ನೀರನ್ನು ಅಪವ್ಯಯ ಮಾಡುತ್ತಿರುವುದು ಕಂಡು ಬರುತ್ತದೆ. ನೀರು ನೈಸರ್ಗಿಕವಾಗಿ ದೊರೆಯುವ ಸಾರ್ವಜನಿಕ ಸ್ವತ್ತು. ಅದನ್ನು ದುರುಪಯೋಗಪಡಿಸುವುದು ಖಂಡಿತ ಸಲ್ಲದು. ಜಾಗತಿಕ ನೆಲೆಯಲ್ಲಿ ಅತ್ಯಂತ ಬಡ ರಾಷ್ಟ್ರವಾದ ಸೊಮಾಲಿಯಾದ ಪರಿಸ್ಥಿತಿಯನ್ನು ನಾವೊಮ್ಮೆ ಗಮನಿಸಿದರೆ, ಅಲ್ಲಿ ಶುದ್ಧ ನೀರು ಇತರ ದಿನಸಿ ಸಾಮಗ್ರಿಗಳು ಪಡೆಯುವಂತೆ ಪಡಿತರ ಚೀಟಿಯಲ್ಲಿ ಲಭ್ಯವಾಗುತ್ತದೆ. ಮಾತ್ರವಲ್ಲ ದಿನನಿತ್ಯ ಕುಡಿಯಲು ನೀರಿಲ್ಲದೇ ಮನುಷ್ಯರು ಮತ್ತು ಪ್ರಾಣಿಗಳು ಪ್ರಾಣ ಬಿಡುವುದು ನಿತ್ಯದೃಶ್ಯವಾಗಿವೆ. ಹೀಗಿರುವಾಗ ನಾವು ಕೂಡಾ ನೀರು ಪೋಲಾಗುವುದರ ಬಗ್ಗೆ ಈಗಲೇ ಎಚ್ಚರವಹಿಸಬೇಕಾಗಿದೆ.
ಭಾರತದ ಬರಪೀಡಿತ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಒಂದು ಅಂದಾಜಿನಂತೆ ಸುಮಾರು 8 ಕೋಟಿ ಜನರು ಹಾಗೂ 400 ಪ್ರಮುಖ ಕೈಗಾರಿಕೆಗಳು ಇಂದು ಕಾವೇರಿ ನೀರನ್ನೇ ಆಶ್ರಯಿಸಿವೆೆ. ಕಾವೇರಿ ನೀರಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವುದಕ್ಕೆ ಕಾವೇರಿ ಜನಿಸುವ ಕೊಡಗಿನಲ್ಲಿ ಅವ್ಯಾಹತ ಅರಣ್ಯ ನಾಶವೇ ಬಹುಮುಖ್ಯ ಕಾರಣ. ಈ ಬಗೆಯ ಅವ್ಯಾಹತ ಅರಣ್ಯ ನಾಶದಿಂದಾಗಿ, ಮಳೆ ಬೀಳುವ ಪ್ರಮಾಣ ಕಡಿಮೆಯಾಗಿ, ಕಾವೇರಿ ಕಣಿವೆ ಪ್ರದೇಶದ ಜಲಾಶಯಗಳಲ್ಲಿ ನೀರಿನ ಕೊರತೆ ಬಾಧಿಸಿದೆ. ಕೊಡಗಿನ 2,800 ಎಕರೆಯಷ್ಟು ಕೃಷಿ ಮತ್ತು ಅರಣ್ಯಭೂಮಿಯನ್ನು ಕಳೆದ 10 ವರ್ಷಗಳಲ್ಲಿ ವಿವಿಧ ವಾಣಿಜ್ಯ ಉದ್ದೇಶಗಳಿಗಾಗಿ ಪರಿವರ್ತಿಸುವುದು ಕಾನೂನುಬಾಹಿರ, ಸಂವಿಧಾನ-ವಿರೋಧಿ ಕೃತ್ಯ. ಆದರೆ ಸರಕಾರವೂ ಸೇರಿದಂತೆ, ದುರಾಸೆಯ ಉದ್ಯಮಿಗಳಿಗೆ ಹಾಗೂ ಸ್ವಾರ್ಥ ಹಿತಾಸಕ್ತಿಗಳಿಗೆ ಹೇಗಾದರೂ ಮಾಡಿ ಹಣ ಸಂಪಾದಿಸಬೇಕೆಂಬ ತಳಮಳ. ಮರವಿದ್ದರೆ ಮಳೆ. ಮಳೆಯಿದ್ದರೆ ನೀರು. ನೀರಿದ್ದರೆ ಬೆಳೆ. ನೀರು, ಬೆಳೆ ಇದ್ದರೆ ನದಿ, ಜನಜೀವನ. ನದಿ ತುಂಬಿ ಹರಿದರೆ ಜನಜೀವನ ಹಸನುಗೊಳ್ಳಬಹುದು. ಜಲಮೂಲಗಳನ್ನು ಸಂರಕ್ಷಿಸೋಣ. ಪ್ರಕೃತಿನಾಶವನ್ನು ಇನ್ನಾದರೂ ನಿಲ್ಲಿಸೋಣ.