ಆಸ್ಪತ್ರೆಗಳ ಅವ್ಯವಸ್ಥೆ ಕೊನೆಯಾಗಲಿ
ಮಾನ್ಯರೆ,
ಜನತೆ ತಮ್ಮ ಆರೋಗ್ಯದ ಸುಧಾರಣೆಗಾಗಿ ಆಸ್ಪತ್ರೆಗಳನ್ನು ಆಶ್ರಯಿಸಿಕೊಂಡಿದ್ದಾರೆ. ಆಸ್ಪತ್ರೆಯ ಡಾಕ್ಟರ್ ನೀಡುವ ಯಾವುದೇ ಔಷಧೋಪಚಾರಗಳನ್ನು ಅಮೃತವೆಂದು ಸ್ವೀಕರಿಸುತ್ತಾರೆ. ಡಾಕ್ಟರ್ ಹೇಳಿದ ಯಾವುದೇ ಪರೀಕ್ಷೆಗಳನ್ನು ಮಾಡಿಕೊಳ್ಳಲು ಹಿಂಜರಿಯುವುದಿಲ್ಲ! ಕೊನೆಗೆ ದುಬಾರಿ ಬಿಲ್ಲು ಬಂದಾಗ ಒಮ್ಮೆಗೆ ದಿಗಿಲುಗೊಂಡರೂ ಹೇಗಾದರೂ ಮಾಡಿ ಹಣ ಹೊಂದಿಸಿ ಪಾವತಿಸುತ್ತಾರೆ. ಆಸ್ಪತ್ರೆಗಳು ದಿನದಿಂದ ದಿನಕ್ಕೆ ಮೇಲಕ್ಕೆ ಹೋದರೆ, ರೋಗಿಗಳ ಕಡೆಯವರು ಆಸ್ಪತ್ರೆ ಬಿಲ್ಲು ಪಾವತಿಗಾಗಿ ತಮ್ಮ ಆಸ್ತಿಪಾಸ್ತಿ ಮಾರಿದಂತಹ ಅದೆಷ್ಟೋ ಉದಾಹರಣೆ ನಮ್ಮ ಮುಂದಿದೆ.
ಅಲ್ಲದೆ ಕೆಲವು ಆಸ್ಪತ್ರೆಗಳಲ್ಲಿ ಇಲಿ ಜ್ವರ, ಡೆಂಗ್ ಜ್ವರ, ಮಲೇರಿಯಾ, ಮತ್ತು ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ ಮತ್ತಿತರ ರೋಗಿಗಳನ್ನು ಒಂದೇ ವಾರ್ಡ್ನಲ್ಲಿ ಶುಶ್ರೂಷೆ ಮಾಡಲಾಗುತ್ತದೆ. ಇಲ್ಲಿ ಸಾಂಕ್ರಾಮಿಕ ಜ್ವರ ಪೀಡಿತನಿಗೆ ಕಚ್ಚಿಸಿಕೊಂಡ ಸೊಳ್ಳೆ ಅದೇ ವಾರ್ಡ್ನಲ್ಲಿ ಇತರ ರೋಗಿಗಳಿಗೆ ಕಚ್ಚುವ ಸಾಧ್ಯತೆ ಇದ್ದು, ಈ ಬಗ್ಗೆ ಆಸ್ಪತ್ರೆ ಡಾಕ್ಟರ್ಗಳ ಗಮನವಿರುವುದಿಲ್ಲ.
ಆದ್ದರಿಂದ ಸಂಬಂಧಪಟ್ಟ ಇಲಾಖಾಧಿಕಾರಿಗಳು ಇಂತಹ ಆಸ್ಪತ್ರೆಗಳಲ್ಲಿ ಖುದ್ದು ಪರಿಶೀಲನೆ ನಡೆಸಿ, ಅಮಾಯಕ ರೋಗಿಗಳು ಮಾರಕ ರೋಗಕ್ಕೆ ಸುಲಭದ ತುತ್ತಾಗದಂತೆ ನೋಡಿಕೊಳ್ಳಲಿ.