ಹಿಮಾಚಲ ಪ್ರದೇಶದಲ್ಲಿ ಎಂಟು ಚಾರಣಿಗರು ನಾಪತ್ತೆ
ಶಿಮ್ಲಾ,ಮ.12: ಶುಕ್ರವಾರ ನಗ್ಗರ್ನಿಂದ ಕುಲು ಜಿಲ್ಲೆಯಲ್ಲಿನ 12,000 ಅಡಿ ಎತ್ತರದ ಚಂದ್ರಖಾನಿ ಪಾಸ್ಗೆ ಚಾರಣ ಆರಂಭಿಸಿದ್ದ ಪಂಜಾಬಿನ ಎಂಜಿನಿಯರಿಂಗ್ ಕಾಲೇಜೊಂದರ ಏಳು ವಿದ್ಯಾರ್ಥಿಗಳು ಸೇರಿದಂತೆ ಎಂಟು ಚಾರಣಿಗರು ನಾಪತ್ತೆಯಾಗಿದ್ದಾರೆ. ರಕ್ಷಣಾ ತಂಡಗಳು ಅವರ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿವೆ.
ಹಿಮಪಾತ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗುತ್ತಿದೆ ಎಂದು ಶನಿವಾರ ಇಲ್ಲಿ ತಿಳಿಸಿದ ಮನಾಲಿಯ ಉಪ ವಿಭಾಗಾಧಿಕಾರಿ ಜ್ಯೋತಿ ರತ್ನಾ ಅವರು,ಚಂದ್ರಖಾನಿ ಪಾಸ್ನಲ್ಲಿ ವಿದ್ಯಾರ್ಥಿಗಳು ಸಿಕ್ಕಿ ಹಾಕಿಕೊಂಡಿದ್ದಾರೆಂಬ ಮಾಹಿತಿ ತಿಳಿದಾಕ್ಷಣ ಮೂರು ದಿಕ್ಕುಗಳಿಂದ ತಲಾ 18ರಿಂದ 20 ಜನರನ್ನೊಳಗೊಂಡ ಮೂರು ರಕ್ಷಣಾ ತಂಡಗಳನ್ನು ರವಾನಿಸಲಾಗಿದೆ. ಆದರೆ ಈ ವರೆಗೂ ಅವರೊಂದಿಗೆ ಸಂಪರ್ಕ ಸಾಧ್ಯವಾಗಿಲ್ಲ ಎಂದರು.
ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲ ಮತ್ತು ಅವರ ಮೊಬೈಲ್ ಫೋನ್ಗಳೂ ಸ್ವಿಚ್ ಆಫ್ ಆಗಿವೆ ಎಂದು ಅವರು ತಿಳಿಸಿದರು.
Next Story