ಝಾಕಿರ್ ನಾಯ್ಕ್ ವಿರುದ್ಧ ಪ್ರಕರಣಕ್ಕೆ ಸಾಕ್ಷ್ಯ ಸಾಲದು : ಗೃಹ ಸಚಿವಾಲಯಕ್ಕೆ ಕಾನೂನು ಸಲಹೆ
ವಿದೇಶಿ ದೇಣಿಗೆ ವ್ಯವಹಾರದಲ್ಲಿ ಕ್ಲೀನ್ ಚಿಟ್
ಹೊಸದಿಲ್ಲಿ, ಸೆ.1: ತಮ್ಮ ಪೀಸ್ ಟಿವಿ ಮೂಲಕ ಪ್ರಚೋದನಕಾರಿ ಭಾಷಣ ನೀಡುತ್ತಿದ್ದಾರೆಂಬ ಆರೋಪವನ್ನು ಖ್ಯಾತ ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ಎದುರಿಸುತ್ತಿದ್ದರೂ ಪ್ರಸಕ್ತ ಗೃಹ ಸಚಿವಾಲಯದ ಬಳಿ ಅವರ ವಿರುದ್ಧವಿರುವ ಸಾಕ್ಷ್ಯ ಆರೋಪ ಸಾಬೀತು ಪಡಿಸಲು ಸಾಲದು ಎಂದು ತಿಳಿದು ಬಂದಿದೆ. ಝಾಕಿರ್ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುವ ಮೊದಲು ಅವರ ವಿರುದ್ಧ ಗುಪ್ತಚರ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾ ಏಜನ್ಸಿ ಇನ್ನಷ್ಟು ಸಾಕ್ಷ್ಯ ಸಂಗ್ರಹಿಸಬೇಕಿದೆಯೆಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ತಾನು ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂದು ಝಾಕಿರ್ ಈಗಾಗಲೇ ಹೇಳಿದ್ದಾರೆ, ಆದರೆ ಇದೀಗ ಅವರ ವಿರುದ್ಧ ಹೆಚ್ಚಿನ ಸಾಕ್ಷ್ಯ ಸಂಗ್ರಹಿಸಬೇಕಾದರೆ ಸಚಿವಾಲಯ ಹಾಗೂ ತನಿಖಾ ಏಜನ್ಸಿಗಳು ಅವರು ಕಳೆದ ಒಂದೂವರೆ ದಶಕಗಳಿಂದೀಚೆಗೆ ಪೀಸ್ ಟಿವಿ ಮೂಲಕ ನೀಡಿರುವ ಇನ್ನಷ್ಟು ಭಾಷಣಗಳನ್ನು ಮತ್ತೆ ತಪಾಸಣೆಗೆ ಒಳಪಡಿಸಬೇಕಾಗುತ್ತದೆ.
ಇತ್ತೀಚೆಗಷ್ಟೇ ರಾಷ್ಟ್ರೀಯ ತನಿಖಾ ಏಜನ್ಸಿ ನಾಯ್ಕ್ ನೀಡಿದ ನೂರಾರು ಭಾಷಣಗಳ ಸಾವಿರಾರು ಗಂಟೆಗಳ ಟೇಪನ್ನು ಪರೀಕ್ಷಿಸಿ ತನ್ನ ವರದಿ ಸಲ್ಲಿಸಿತ್ತು..
ಜುಲೈ ಒಂದರಂದು ಢಾಕಾದ ರೆಸ್ಟೋರೆಂಟ್ ಒಂದರ ಮೇಲೆ ನಡೆದ ದಾಳಿಯ ಆರೋಪಿಗಳು ತಾವು ಝಾಕಿರ್ ಭಾಷಣಗಳಿಂದ ಪ್ರಭಾವಿತರಾಗಿದ್ದೇವೆ ಎಂದು ಹೇಳಿದ ನಂತರ ಝಾಕಿರ್ ಮೇಲೆ ತನಿಖಾ ಏಜನ್ಸಿಗಳು ಕಣ್ಣಿಡಲು ಆರಂಭಿಸಿವೆ.
ಝಾಕಿರ್ ಅವರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘನೆ ಆರೋಪದಿಂದ ಹೊರಬರಬಹುದಾದರೂ ಈ ಸಂಘಟನೆ ಅಕ್ರಮ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯನ್ವಯ ನಿಷೇಧ ಎದುರಿಸಬೇಕಾಗಬಹುದು, ಎಂದು ಗೃಹ ಸಚಿವಾಲಯಕ್ಕೆ ಸೊಲಿಸಿಟರ್ ಜನರಲ್ ರಂಜಿತ್ ಕುಮಾರ್ ಪತ್ರ ಬರೆದಿದ್ದಾರೆಂದು ಹೇಳಲಾಗಿದ್ದು ಝಾಕಿರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಸರಕಾರಕ್ಕೆ ನಿರ್ದೇಶನ ನೀಡಿದ್ದಾರೆ.