ಸೆಕ್ಸ್ ಟೇಪ್: ಕೇಜ್ರಿ ರಾಜೀನಾಮೆಗೆ ಶೀಲಾ ಆಗ್ರಹ
ವಾರಣಾಸಿ, ಸೆ.4: ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಅವರು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಕೇಜ್ರಿವಾಲ್ ಅವರ ಸಂಪುಟದ ಸಹೋದ್ಯೋಗಿಯಾಗಿದ್ದ ಸಂದೀಪ್ ಕುಮಾರ್ ಸೆಕ್ಸ್ ಟೇಪ್ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿರುವ ಹಿನ್ನೆಲೆಯಲ್ಲಿ, ನೈತಿಕ ಹೊಣೆ ಹೊತ್ತು ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕೇಜ್ರಿವಾಲ್ ಅವರು ಇಡೀ ದೇಶವೇ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಈ ಆಕ್ಷೇಪಾರ್ಹ ಸಿಡಿ ಬೆಳಕಿಗೆ ಬರುತ್ತಿದ್ದಂತೆ ಮಹಿಳೆಯ ಜೊತೆ ಕುಮಾರ್ ರಾಜಿಗೆ ಮುಂದಾಗಿದ್ದಾರೆ ಎಂದು ಆಪಾದಿಸಿದರು. 27 ಸಾಲ್, ಯುಪಿ ಬೆಹಾಲ್ ಘೋಷಣೆಯಡಿ ಪಕ್ಷದ ಪ್ರಚಾರ ಕಾರ್ಯಕ್ಕೆ ಅವರು ನಗರಕ್ಕೆ ಆಗಮಿಸಿದ್ದರು.
ಪಕ್ಷದ ರಾಜ್ಯ ಘಟಕ ಅಧ್ಯಕ್ಷ ರಾಜ್ ಬಬ್ಬರ್ ಹಾಗೂ ಇತರ ಮುಖಂಡರು ಅಜಂಗಡದಿಂದ ಗಾಜಿಯಾಪುರ ಜಿಲ್ಲೆವರೆಗೆ ಪ್ರಚಾರ ಜಾಥಾ ನಡೆಸಿದರು. ಶೀಲಾ ದೀಕ್ಷಿತ್ ಅಜಂಗಡ ಯಾತ್ರೆಯ ನೇತೃತ್ವ ವಹಿಸಿದ್ದರೆ, ರಾಜ್ ಬಬ್ಬರ್ ಗಾಜಿಯಾಪುರ ಜಿಲ್ಲೆ ಯಾತ್ರೆಯ ನೇತೃತ್ವ ವಹಿಸಿದ್ದರು. ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, ಶಾಹೀದ್ ಸ್ಮಾರಕ್ನಲ್ಲಿ 1942ರ ಹುತಾತ್ಮರಿಗೆ ಪುಷ್ಪಾಂಜಲಿ ಸಮರ್ಪಿಸಿದರು.