ಈಗ ನ್ಯಾ.ಕಾಟ್ಜು ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು!
ಪಾಟ್ನಾ, ಸೆ.28: ಬಿಹಾರದ ಕುರಿತು ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಮಾಡಿರುವ ಟೀಕೆಯ ಬಗ್ಗೆ ವಿವಾದ ತೀವ್ರಗೊಂಡಿದೆ. ಜೆಡಿಯು ಶಾಸಕರೊಬ್ಬರ ದೂರಿನನ್ವಯ ಕಾಟ್ಜು ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿದೆ.
ಬಿಹಾರವನ್ನೂ ತೆಗೆದುಕೊಳ್ಳಬೇಕೆಂಬ ಶರ್ತದಲ್ಲಿ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಒಪ್ಪಿಸಬೇಕೆಂಬ ಕಾಟ್ಜು ಅವರ ಆನ್ಲೈನ್ ಪೋಸ್ಟ್ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಕಾಟ್ಜು ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ಇಂದು ಇನ್ನೊಂದು ದೂರು ದಾಖಲಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾಡಿರುವ ತೀಕ್ಷ್ಣ ಟೀಕೆಗಳಿಗೆ ಅವರು ಇನ್ನಷ್ಟು ಲೇವಡಿಯ ಪೋಸ್ಟ್ಗಳಿಂದ ತಿರುಗೇಟು ನೀಡಿದ್ದಾರೆ. ಕಾಟ್ಜು ವಿರುದ್ಧ ಐಪಿಸಿಯ ಸೆ.124-ಎ(ದೇಶದ್ರೋಹ) ಹಾಗು ಇತರ ಸೆಕ್ಷನ್ಗಳನ್ವಯ ಪ್ರಕರಣ ದಾಖಲಾಗಿಸಿದೆಯೆಂದು ಶಾಸ್ತ್ರಿನಗರ ಪೊಲೀಸ್ ಠಾಣೆಯ ಅಧಿಕಾರಿ ಬೀರೇಂದ್ರ ಪ್ರತಾಪ್ ತಿಳಿಸಿದ್ದಾರೆ.
ಜೆಡಿಯು ವಿಧಾನ ಪರಿಷತ್ ಸದಸ್ಯ ಹಾಗೂ ಪಕ್ಷದ ರಾಜ್ಯ ವಕ್ತಾರ ನೀರಜ್ ಕುಮಾರ್, ದೇಶದ್ರೋಹ ಆರೋಪದಲ್ಲಿ ಕಾಟ್ಜು ವಿರುದ್ಧ ಮೊಕದ್ದಮೆ ದಾಖಲಿಸುವಂತೆ ನಿನ್ನೆ ಸಂಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದೇ ವೇಳೆ, ವಕೀಲ ಅರವಿಂದ ಕುಮಾರ್ ಎಂಬವರು ಕಾಟ್ಜು ವಿರುದ್ಧ ಪಾಟ್ನಾದ ಮುಖ್ಯ ನ್ಯಾಯಾಂಗ ದಂಡಾಧಿಕಾರಿ ಓಂ ಪ್ರಕಾಶ್ರ ನ್ಯಾಯಾಲಯದಲ್ಲಿ ದೂರೊಂದನ್ನು ದಾಖಲಿಸಿದ್ದಾರೆ.