ರಾಮಮಂದಿರ ನಿರ್ಮಾಣದ ಪ್ರಯತ್ನ ಅಪಾಯಕಾರಿ: ಪಿಎಫ್ಐ
ಹೊಸದಿಲ್ಲಿ, ಡಿ.31: ಬಾಬರಿ ಮಸೀದಿ ಧ್ವಂಸ ನಡೆದ ಪರಿಸರದಲ್ಲಿ ರಾಮಮಂದಿರ ನಿರ್ಮಾಣದ ಹೇಳಿಕೆಗಳು ಮತ್ತು ಕಾರ್ಯಯೋಜನೆಗಳ ಅಪಾಯಗಳ ಬಗ್ಗೆ ದೇಶದ ಜನತೆ ಜಾಗೃತರಾಗಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಸೆಕ್ರಟಿರಿಯೇಟ್ ಸಭೆಯು ಆಗ್ರಹಿಸಿದೆ.
ವರದಿಗಳ ಪ್ರಕಾರ, ಮಂದಿರ ನಿರ್ಮಾಣ ಕಾರ್ಯಕ್ಕಾಗಿ ಇಟ್ಟಿಗೆಗಳು ಈಗಾಗಲೇ ಸ್ಥಳಕ್ಕೆ ತಲುಪಿವೆ. ಯಥಾಸ್ಥಿತಿಯನ್ನು ಕಾಪಾಡಬೇಕೆಂಬ ನ್ಯಾಯಾಲಯದ ಆದೇಶದ ಹೊರತಾಗಿಯೂ ಆರೆಸ್ಸೆಸ್ ಮತ್ತು ವಿಎಚ್ಪಿ ಸಂಘಟನೆಗಳು ಮತ್ತೊಮ್ಮೆ ಅಯೋಧ್ಯೆಯ ವಿಷಯಗಳನ್ನೆತ್ತಿ ಪ್ರಚೋದನೆಗಿಳಿದಿವೆ. ಕೋಮು ಧ್ರುವೀಕರಿಸಿ ರಾಜ್ಯದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದ್ದು, ಕಾನೂನು ಉಲ್ಲಂಘನೆಯ ಪ್ರಕ್ರಿಯೆಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕಾಗಿದೆ. ಕೋಮುವಾದಿ ಶಕ್ತಿಗಳ ಈ ಪ್ರಯತ್ನವನ್ನು ತಡೆಯುವುದು ಮತ್ತು ಬಾಬರಿ ಮಸೀದಿಗೆ ನ್ಯಾಯ ಸಿಗುವವರೆಗೆ ಸೂಕ್ತ ಭದ್ರತೆ ನೀಡಬೇಕೆಂದು ಪಿಎಫ್ಐ ಉತ್ತರ ಪ್ರದೇಶ ಸರಕಾರವನ್ನು ಆಗ್ರಹಿಸುತ್ತದೆ. ಸಭೆಯಲ್ಲಿ ಅಧ್ಯಕ್ಷ ಕೆ.ಎಂ ಶರೀಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದಲಿ ಜಿನ್ನಾ, ಅಬ್ದುಲ್ ವಾಹಿದ್ ಸೇಠ್, ಇ.ಎಮ್ ಅಬ್ದುರ್ರಹ್ಮಾನ್, ಮುಹಮ್ಮದ್ ರೋಶನ್ ಉಪಸ್ಥಿತರಿದ್ದರು.