ಸಚಿನ್ ಕುರಿತು ಕುತೂಹಲಕಾರಿ ಮಾಹಿತಿಗಳನ್ನು ಬಹಿರಂಗಪಡಿಸಿದ ಗಂಗೂಲಿ
ಕೊಲ್ಕತ್ತಾ, ಅ.1: ಸಚಿನ್ ತೆಂಡೂಲ್ಕರ್ ಅವರ ವಾರ್ಡ್ರೋಬ್ ರಹಸ್ಯಗಳು, ಅಂಗಳದ ಹೊರಗೆ ನವಜೋತ್ ಸಿಂಗ್ ಸಿಧು ಹಾಗೂ ಅಜಯ್ ಜಡೇಜಾ ಅವರ ಯರ್ರಾಬಿರ್ರಿ ಹವ್ಯಾಸಗಳು ಮತ್ತಿತರ ಕುತೂಹಲಕಾರಿ ಮಾಹಿತಿಗಳನ್ನು ಮಾಜಿ ನಾಯಕ ಸೌರವ್ ಗಂಗೂಲಿ ಶುಕ್ರವಾಗಿ ಬಹಿರಂಗಪಡಿಸಿದರು. ತೆಂಡೂಲ್ಕರ್ ಯಾವುದೇ ಪಂದ್ಯದ ವೇಳೆ ಬ್ಯಾಟ್ ಮಾಡುವುದು ಹಾಗೂ ಶಾಪಿಂಗ್ ಬಿಟ್ಟರೆ ಬೇರೇನೂ ಮಾಡುತ್ತಿರಲಿಲ್ಲ ಎಂದಿದ್ದಾರೆ.
"ಟೆಸ್ಟ್ ಶತಕ ಗಳಿಸಿದ ಮರುದಿನ ಅವರು ಶಾಂಪಿಂಗ್ ಮಾಡುತ್ತಿದ್ದರು. ಅವುಗಳನ್ನು ಅವರ ವಾರ್ಡ್ರೋಬ್ನಲ್ಲಿ ಕಾಣಬಹುದು. ಬಟ್ಟೆಬರೆ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು" ಎಂದು ಗಂಗೂಲಿ ನೆನಪಿಸಿಕೊಂಡಿದ್ದಾರೆ.
ಹೈದರಾಬಾದಿ ಬ್ಯಾಟ್ಸ್ಮನ್ ವಿ.ವಿ.ಎಸ್. ಲಕ್ಷ್ಮಣ್ ಸದಾ ತಡವಾಗಿ ಬರುತ್ತಿದ್ದರು. "4 ಮತ್ತು 5ನೆ ಕ್ರಮಾಂಕದ ಬ್ಯಾಟ್ಸ್ಮನ್ಗಳು ಕ್ರೀಸ್ನಲ್ಲಿದ್ದರೂ, ಲಕ್ಷ್ಮಣ್ ಸ್ನಾನ ಮಾಡುತ್ತಿರುತ್ತಿದ್ದರು. ತಂಡದ ಬಸ್ ಏರುವಲ್ಲೂ ಅವರೇ ಕೊನೆಯವರು" ಎಂದು ಟಾಕ್ಶೋದಲ್ಲಿ ಬಹಿರಂಗಪಡಿಸಿದರು.
ಅವರ ತವರು ನೆಲದಲ್ಲಿ ಭಾರತದ 250ನೆ ಟೆಸ್ಟ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಟಾಕ್ ಶೋ ವ್ಯವಸ್ಥೆ ಮಾಡಲಾಗಿತ್ತು.
ಯಾವುದೇ ನೆಲದಲ್ಲಿ ರನ್ ಗಳಿಸುವ ಛಾತಿ ವೀರೂ ಅವರಿಗಿದ್ದರೆ, ಎಂಥದ್ದೇ ಪಿಚ್ನಲ್ಲೂ ವಿಕೆಟ್ ಕಬಳಿಸುವ ಜಾಣ್ಮೆ ಕುಂಬ್ಳೆಯದ್ದು. "ಸ್ಕೋರ್ಬೋರ್ಡ್ನಲ್ಲಿ ಎಷ್ಟು ರನ್ ಇದೆ ಎಂದು ಹೇಳಿ. ಪಂದ್ಯ ಗೆಲ್ಲಿಸಿಕೊಡುವ ಜವಾಬ್ದಾರಿ ನನ್ನದು" ಎಂದು ಹೇಳುತ್ತಿದ್ದರು ಎಂದು ನೆನಪಿಸಿಕೊಂಡರು. ಇವರಿಬ್ಬರು ಹಾಗೂ ಸಚಿನ್, ರಾಹುಲ್, ಹರ್ಭಜನ್ ಇದ್ದ ತಂಡದ ನಾಯಕನ ಹೊಣೆ ನನ್ನ ಹೆಮ್ಮೆ ಎಂದು ಗಂಗೂಲಿ ಬಣ್ಣಿಸಿದರು.
ಕಪಿಲ್ದೇವ್ ಕೂಡಾ ಬಳಿಕ ಟಾಕ್ಶೋದಲ್ಲಿ ಪಾಲ್ಗೊಂಡರು.