ನೀವು ವಿಮೆ ಮಾಡಿಸಿದ್ದೀರಿ ಸರಿ, ಆದರೆ ನೀವು ದಪ್ಪ ಇದ್ದೀರಾ? ಹಾಗಾದರೆ ಇದೆ "ಭಾರಿ" ಸಮಸ್ಯೆ
ಚೆನ್ನೈ, ನ.19: ವಿಮಾ ಪಾಲಿಸಿದಾರ ತೀರಾ ಬೊಜ್ಜು ಹೊಂದಿದ್ದರು ಎಂಬ ಕಾರಣಕ್ಕೆ ಆ ವ್ಯಕ್ತಿಯ ಕುಟುಂಬಕ್ಕೆ ವಿಮಾ ಪರಿಹಾರ ನಿರಾಕರಿಸಿದ ಪ್ರಕರಣ ವರದಿಯಾಗಿದೆ.
ಚೆನ್ನೈ ನಿವಾಸಿ ಎಸ್. ಶಾಂತಿ ಎಂಬವವರ ಮಗ ಸಹಜ ಸಾವನ್ನಪ್ಪಿದರು. ಮಗನ ವಿಮಾ ಪರಿಹಾರ ಪಡೆಯಲು ಸಾವಿಗೀಡಾದ ಮಗ ಅಧಿಕ ಬೊಜ್ಜು ಹೊಂದಿರಲಿಲ್ಲ ಎಂದು ನಿರೂಪಿಸಬೇಕಾದ ಅನಿವಾರ್ಯತೆಗೆ ಈ ಮಹಿಳೆ ಸಿಕ್ಕಿಕೊಂಡರು. ಶ್ರೀರಾಮ್ ಜೀವವಿಮಾ ಕಂಪೆನಿಗೆ ಮಗನ ಭಾವಚಿತ್ರವನ್ನು ಕೂಡಾ ಸಲ್ಲಿಸಬೇಕಾಯಿತು. ಆದರೆ ಅದಕ್ಕೆ ಕೂಡಾ ಕಂಪೆನಿ ಒಪ್ಪದಿದ್ದಾಗ ಆ ಮಹಿಳೆ ವಿಮಾ ಮಧ್ಯಸ್ಥಿಕೆದಾರರ ಮೊರೆ ಹೋಗಬೇಕಾಯಿತು. ಅಂತಿಮವಾಗಿ ಮಧ್ಯಸ್ಥಿಕೆದಾರ ಈಕೆಯ ಪರವಾಗಿ ತೀರ್ಪು ನೀಡಿ, ವಿಮಾದಾರರ ಪರಿಹಾರ ಮೊತ್ತವನ್ನು ಪಾವತಿಸುವಂತೆ ಕಂಪೆನಿಗೆ ಸೂಚಿಸಿದರು.
"ಇಲ್ಲಿ ವಿಚಿತ್ರ ಸಂಗತಿ ಎಂದರೆ ಸಾವಿಗೀಡಾದ ವ್ಯಕ್ತಿ ವಿಮಾ ಸಲಹೆಗಾರರಾಗಿ ಅದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ವಾಸ್ತವವಾಗಿ 70 ಕೆ.ಜಿ. ಭಾರ ಇದ್ದರು. ಆದರೆ ಅವರ ಪಾಲಿಸಿ ದಾಖಲೆಗಳಲ್ಲಿ ಉದ್ದೇಶಪೂರ್ವಕವಾಗಿ 130 ಕೆ.ಜಿ. ಎಂದು ದಾಖಲೆ ಸೃಷ್ಟಿಸಲಾಗಿತ್ತು ಎಂದು ಐಆರ್ಡಿಎಐ ಸದಸ್ಯೆ ಸುಧಾ ರಘುನಾಥನ್ ವಿವರಿಸಿದ್ದಾರೆ.
ಆದರೆ ಈ ಮಹಿಳೆ ಎದುರಿಸಿದ ಆಘಾತಕಾರಿ ಸ್ಥಿತಿ ಹಲವು ಮಂದಿಗೆ ಎದುರಾಗಬಹುದು. ಬೊಜ್ಜಿನ ಕಾರಣ ನೀಡಿ ಇಂಥ ಸಂದರ್ಭಗಳಲ್ಲಿ ವಿಮಾ ಪರಿಹಾರವನ್ನು ನಿರಾಕರಿಸಬಹುದು. ಇದರಿಂದಾಗಿ ಕುಟುಂಬದವರು, ಆ ವ್ಯಕ್ತಿ ಬೊಜ್ಜು ಹೊಂದಿರಲಿಲ್ಲ ಎಂದು ನಿರೂಪಿಸಬೇಕಾದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ.
ಚೆನ್ನೈನಲ್ಲಿ ಸಾಮಾನ್ಯವಾಗಿ ಇಂಥ ವಿಮಾ ಪರಿಹಾರ ವ್ಯಾಜ್ಯಗಳು ಪದೇ ಪದೇ ಕಂಡುಬರುತ್ತಿವೆ. ಈ ಬಹುತೇಕ ವಿವಾದಗಳಿಗೆ ವಿಮಾ ಪಾಲಿಸಿ ಮಾಡಿಸುವ ಸಂದರ್ಭದಲ್ಲಿ ವೈದ್ಯಕೀಯವಾಗಿ ಆರೋಗ್ಯ ಸ್ಥಿತಿಗತಿ ಬಗ್ಗೆ ಮಾಹಿತಿಗಳನ್ನು ನೀಡದಿರುವುದು ಕಾರಣ. ಪಾಲಿಸಿ ಮಾಡಿಸುವ ವೇಳೆ ಮಧುಮೇಹ, ಹೈಪರ್ ಟೆನ್ಷನ್ನಂಥ ಸಮಸ್ಯೆ ಇದ್ದರೆ ಮೊದಲೇ ಬಹಿರಂಗಪಡಿಸಿ, ಹೆಚ್ಚಿನ ವಿಮಾ ಕಂತು ಪಾವತಿಸುವುದು ಸೂಕ್ತ. ವಿಮಾ ಕಂಪೆನಿ, ವಿಮಾ ಪರಿಹಾರ ದಾವೆ ಸಲ್ಲಿಸುವ ಸಂದರ್ಭದಲ್ಲಿ ಇದನ್ನು ಪತ್ತೆ ಮಾಡಿದರೆ ಪಾಲಿಸಿದಾರರಿಗೆ ತೊಂದರೆಯಾಗುತ್ತದೆ ಎಂದು ವಿಮಾ ವ್ಯಾಜ್ಯಗಳ ಮಧ್ಯಸ್ಥಿಕೆದಾರ ಬಿ.ಎನ್.ಮಿಶ್ರಾ ಸಲಹೆ ಮಾಡುತ್ತಾರೆ.