ಕೇಂದ್ರ-ನ್ಯಾಯಾಂಗದ ಮಧ್ಯೆ ಜಟಾಪಟಿ
ನೇರ ದಾಳಿ ಮಾಡಿದ ಕೇಂದ್ರ ಸಚಿವರಿಂದ ಸುಪ್ರೀಂಕೋರ್ಟ್ ವಿರುದ್ಧ ಗಂಭೀರ ಆರೋಪ
ಹೊಸದಿಲ್ಲಿ, ನ.27: ಕೇಂದ್ರ ಹಾಗೂ ಸುಪ್ರೀಂಕೋರ್ಟ್ ನಡುವಿನ ಸಮರ ತಾರಕಕ್ಕೇರಿದ್ದು, ಎರಡೂ ಪಕ್ಷಗಳು ಲಕ್ಷ್ಮಣರೇಖೆ ದಾಟುತ್ತಿರುವುದಾಗಿ ಪರಸ್ಪರರ ವಿರುದ್ಧ ದೂರಿವೆ. ತುರ್ತು ಪರಿಸ್ಥಿತಿ ವೇಳೆ ಸುಪ್ರೀಂಕೋರ್ಟ್ ಸಂಪೂರ್ಣ ವಿಫಲವಾದರೆ, ಹೈಕೋರ್ಟ್ಗಳು ಧೈರ್ಯದಿಂದ ಕಾರ್ಯ ನಿರ್ವಹಿಸಿದ್ದವು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಹೈಕೋರ್ಟ್ ಮತ್ತು ನ್ಯಾಯಮಂಡಳಿಗಳಲ್ಲಿ ನ್ಯಾಯಮೂರ್ತಿಗಳ ಕೊರತೆ ತೀವ್ರವಾಗಿದ್ದು, ತಕ್ಷಣ ಸರ್ಕಾರ ಮಧ್ಯಪ್ರವೇಶ ಮಾಡುವುದು ಅನಿವಾರ್ಯ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹೇಳುವುದರೊಂದಿಗೆ ಬಿಕ್ಕಟ್ಟು ತಾರಕಕ್ಕೇರಿದೆ. ಆದರೆ ಪ್ರಸಾದ್ ಇದನ್ನು ಅಲ್ಲಗಳೆದಿದ್ದಾರೆ.
ಬಳಿಕ ಸುಪ್ರೀಂಕೋರ್ಟ್ ಆವರಣದಲ್ಲಿ ನಡೆದ ಸಮಾರಂಭವೊಂದರಲ್ಲಿ ಮುಖ್ಯ ನ್ಯಾಯಮೂರ್ತಿಗಳು, ಸರ್ಕಾರದ ಯಾವ ಅಂಗವೂ ಲಕ್ಷ್ಮಣ ರೇಖೆಯನ್ನು ಮೀರುವಂತಿಲ್ಲ. ನ್ಯಾಯಾಂಗಕ್ಕೆ ಇವೆಲ್ಲದರ ಬಗ್ಗೆಯೂ ತನ್ನ ಮಿತಿಯಲ್ಲಿ ನಿಗಾ ಇಡುವ ಅಧಿಕಾರವಿದೆ ಎಂದು ಹೇಳಿದರು.
ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ, ತುರ್ತು ಪರಿಸ್ಥಿತಿ ಮತ್ತು ಇತರ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಉಲ್ಲೇಖಿಸಿ, ಇಂಥ ಸಂದರ್ಭದಲ್ಲಿ ಸಂವಿಧಾನದ ಸಮತೋಲನ ತಪ್ಪಿತ್ತು. ಅದನ್ನು ಸರಿಪಡಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಕ್ಕೆ ಪ್ರತಿಯಾಗಿ ಮುಖ್ಯ ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದರು.