ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆರ್ಥಿಕ ಭಿಕ್ಕಟ್ಟು; ಪದಾಧಿಕಾರಿಗಳಿಗೆ 1 ಸಾವಿರ ರೂ.ದೇಣಿಗೆ ನೀಡಲು ಸೂಚನೆ
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಮಹಾರಾಷ್ಟ್ರ ಕಾಂಗ್ರೆಸ್ ಪದಾಧಿಕಾರಿಗಳು.
ಮುಂಬೈ, ನ.27: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆರ್ಥಿಕ ಭಿಕ್ಕಟ್ಟು ಎದುರಾಗಿದ್ದು, ಪ್ರತಿ ತಿಂಗಳು ಪಕ್ಷದ ಪದಾಧಿಕಾರಿಗಳು ಒಂದು ಸಾವಿರ ರೂ. ದೇಣಿಗೆ ನೀಡುವಂತೆ ಕಾಂಗ್ರೆಸ್ ಮನವಿ ಮಾಡಿದೆ.
ಮುಂಬರುವ ಸ್ಥಳೀಯಾಡಳಿತ ಚುನಾವಣೆ ಎದುರಿಸಲು ಅನುಕೂಲವಾಗುವಂತೆ ಆರ್ಥಿಕ ಸಂಪನ್ಮೂಲವನ್ನು ಒಟ್ಟುಗೂಡಿಸಲು ಕಾಂಗ್ರೆಸ್ ಪಕ್ಷ ಈ ನಿರ್ಧಾರ ಕೈಗೊಂಡಿದೆ. ಪಕ್ಷದ ಪದಾಧಿಕಾರಿಗಳು ತಮ್ಮ ಉಳಿತಾಯ ಖಾತೆಯಿಂದ ಒಂದು ಸಾವಿರ ರೂ.ಗಳನ್ನು ದೇಣಿಗೆಯಾಗಿ ಪಕ್ಷದ ಖಾತೆಗೆ ವರ್ಗಾಯಿಸುವಂತೆ ಮಹಾರಾಷ್ಟ್ರ ಕಾಂಗ್ರೆಸ್ ಆದೇಶ ಹೊರಡಿಸಿದೆ.
ಕೇಂದ್ರ ಸರಕಾರ ಐನೂರು ಹಾಗೂ ಸಾವಿರ ರೂ. ನೋಟ್ ಚಲಾವಣೆ ನಿಷೇಧಿಸಿದ ಬಳಿಕ ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷಕ್ಕೆ ಹಣಕಾಸಿನ ಸಮಸ್ಯೆ ತೀವ್ರಗೊಂಡಿದೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಣಕಾಸಿನ ಸಮಸ್ಯೆ ಕಳೆದ ವರ್ಷ ಕಾಣಿಸಿಕೊಂಡಾಗ ಪಕ್ಷದ ಸಂಸದರು ಮತ್ತು ಶಾಸಕರಿಗೆ ತಲಾ ಒಂದು ಲಕ್ಷ ರೂ. ದೇಣಿಗೆ ನೀಡುವಂತೆ ಮನವಿ ಮಾಡಿತ್ತು. ಕಳೆದ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯ ಸಮಯದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಹಣಕಾಸಿನ ಸಮಸ್ಯೆ ಎದುರಿಸಿದ್ದರು.