ಉಗ್ರರ ದಾಳಿಗೆ ಬಲಿಯಾದ ಮೇಜರ್ ಅಕ್ಷಯ್ ಪಾರ್ಥಿವ ಶರೀರ ಬೆಂಗಳೂರಿಗೆ
ಬೆಂಗಳೂರು, ನ.30: ಸೇನೆಯ 16-ಕೋರ್ ವಿಭಾಗದ ಜಮ್ಮು ವಲಯದ ಕೇಂದ್ರ ಕಾರ್ಯಾಲಯಕ್ಕೆ ಸಮೀಪದಲ್ಲಿರುವ ನಗರೋಟಾ ಸೇನಾ ಘಟಕದ ಮೇಲೆ ಮಂಗಳವಾರ ಮುಂಜಾನೆ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಅಕ್ಷಯ್ಗಿರೀಶ್ಕುಮಾರ್(31) ಅವರ ಪಾರ್ಥಿವ ಶರೀರ ಇಂದು(ಡಿ.1) ಬೆಂಗಳೂರಿಗೆ ತರಲಾಗುವುದೆಂದು ಮೂಲಗಳು ತಿಳಿಸಿವೆ.
ನಗರದ ಯಲಹಂಕದ ಸಾದಹಳ್ಳಿ ಬಳಿಯ ಜೇಡ್ ಗಾರ್ಡ್ನಲ್ಲಿರುವ ಅವರ ನಿವಾಸಕ್ಕೆ ಪಾರ್ಥಿವ ಶರೀರವನ್ನು ತರಲಾಗುವುದೆಂದು ಕುಟುಂಬಸ್ಥರು ತಿಳಿಸಿದ್ದು, ಬಳಿಕ ಸಕಲ ಸರಕಾರಿ ಗೌರವಗಳೊಂದಿಗೆ ಮೇಜರ್ ಅಕ್ಷಯ್ ಅವರ ಅಂತ್ಯಕ್ರಿಯೆ ನಡೆಯಲಿದೆ.
ಅಕ್ಷಯ್ ತಂದೆ ಗಿರೀಶ್ ಮತ್ತು ತಾಯಿ ನಗರದ ಯಲಹಂಕದಲ್ಲಿ ನೆಲೆಸಿದ್ದರು. ಹುತಾತ್ಮ ಅಕ್ಷಯ್ ಅವರಿಗೆ ಪತ್ನಿ ಸಂಗೀತಾ ರವೀಂದ್ರನ್, ಮೂರು ವರ್ಷದ ಮಗುವಿದೆ ಎಂದು ತಿಳಿದುಬಂದಿದ್ದು, ಅಕ್ಷಯ್ ಹುತಾತ್ಮರಾದ ಬಗ್ಗೆ ರಕ್ಷಣಾ ಇಲಾಖೆಯಿಂದ ನಿನ್ನ ಸಂಜೆ ಮಾಹಿತಿ ಲಭಿಸಿದ ನಂತರ ಅವರ ಪೋಷಕರು,ಜಮ್ಮು ರಕ್ಷಣಾ ಇಲಾಖೆ ಕಚೇರಿಗೆ ತೆರಳಿದ್ದಾರೆ ಎನ್ನಲಾಗಿದೆ.
ಅಕ್ಷಯ್ ಬಗ್ಗೆ ಒಂದಿಷ್ಟು:
ನಿವೃತ್ತ ಐಎಎಫ್ ಫೈಲಟ್ ಗಿರೀಶ್ ಕುಮಾರ್ ಹಾಗೂ ಮೇಘನಾ ಗಿರೀಶ್ ದಂಪತಿಯ ಪುತ್ರ ಮೇಜರ್ ಅಕ್ಷಯ್ ನವದಿಲ್ಲಿಯ ಜವಹರ್ಲಾಲ್ ನೆಹರು ವಿವಿ ಪದವೀಧರ ಆಗಿದ್ದು, ಡಿಫೆನ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ನಾಲ್ಕು ವರ್ಷದ ಹಿಂದೆ ಅಕ್ಷಯ್ ತಮ್ಮ ಸ್ನೇಹಿತೆ ಸಂಗೀತಾ ರವೀಂದ್ರನ್ ಅವರನ್ನು ವಿವಾಹವಾಗಿದ್ದರು.
ಜಮ್ಮು ಕಾಶ್ಮೀರಕ್ಕೆ ನೇಮಕಾತಿ ಆಗುವ ಮುನ್ನ ಅಕ್ಷಯ್ ಮತ್ತು ಪತ್ನಿ ಸಂಗೀತಾ ಪುಣೆ ಮತ್ತು ಕೊಲ್ಕೊತಾದಲ್ಲಿ ನೆಲೆಸಿದ್ದರು. ನಿನ್ನೆ ದಾಳಿ ನಡೆದಾಗ ಅಕ್ಷಯ್ ಪತ್ನಿ ಹಾಗೂ ಮಗಳು ನಗ್ರೋಟಾದಲ್ಲೇ ಇದ್ದರು. ಕೊಲೆಯಾದ ಮೇಜರ್ ಸುಶಿಲ್ ಚಿಕ್ವಾರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಅಕ್ಷಯ್ ಕುಮಾರ್ ಹರ್ಯಾಣ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು.
ಮಂಗಳವಾರ 16-ಕೋರ್ ವಿಭಾಗದ ಜಮ್ಮು ವಲಯದ ಕೇಂದ್ರ ಕಾರ್ಯಾಲಯಕ್ಕೆ ಸಮೀಪದಲ್ಲಿರುವ ನಗರೋಟಾ ಸೇನಾ ಘಟಕದ ಮೇಲೆ ಭಾರಿ ಪ್ರಮಾಣದಲ್ಲಿ ಶಸ್ತ್ರಸಜ್ಜಿತರಾಗಿದ್ದ, ಪೊಲೀಸ್ ಸಮವಸ್ತ್ರದಲ್ಲಿದ್ದ ಆರು ಉಗ್ರರು ನಗರೋಟಾದಲ್ಲಿನ ಸೇನಾ ಘಟಕದ ಮೇಲೆ ಬೆಳಿಗ್ಗೆ 5:30ರ ಸುಮಾರಿಗೆ ದಾಳಿ ನಡೆಸಿದ್ದರು.
ಉಗ್ರರು ಮೊದಲು ಗ್ರೆನೇಡ್ ದಾಳಿ ನಡೆಸಿದ್ದು, ಕಾವಲಿಗೆ ನಿಂತಿದ್ದ ಸೈನಿಕರ ಮೇಲೆ ಗುಂಡು ಹಾರಿಸಿದರು. ತಕ್ಷಣ ಯೋಧರು ಪ್ರತಿ ದಾಳಿ ನಡೆಸಿದರು. ಈ ಗುಂಡಿನ ಚಕಮಕಿಯಲ್ಲಿ ಯೋಧರು ಹುತಾತ್ಮರಾಗಿದ್ದರು.