ಸಂಘ ಬಿಜೆಪಿಗೆ ಶರಣಾಗಿದೆ; ಬಿಜೆಪಿ ಪಾಪಗಳನ್ನು ಅದು ಬೆಂಬಲಿಸುತ್ತಿದೆ!
ಬಂಡಾಯ ಆರೆಸ್ಸೆಸ್ ನಾಯಕ ಸುಭಾಷ್
ಹೊಸದಿಲ್ಲಿ, ಜ.18: ಬಿಜೆಪಿ ವಿರುದ್ಧ ಮಾತ್ರವಲ್ಲದೆ ಆರೆಸ್ಸೆಸ್ ಬಗ್ಗೆಯೂ ವಾಗ್ದಾಳಿ ನಡೆಸುವ ಮೂಲಕ ಬಂಡಾಯ ಆರೆಸ್ಸೆಸ್ ನಾಯಕ ಸುಭಾಷ್ ವೆಲಿಂಗ್ಕರ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಂಘ ಪರಿವಾರ ಬಿಜೆಪಿಗೆ ಶರಣಾಗಿದೆ; ಬಿಜೆಪಿ ಪಾಪಗಳನ್ನು ಅದು ಬೆಂಬಲಿಸುತ್ತಿದೆ ಎಂದು ಹೇಳುವ ಮೂಲಕ ಬಿರುಗಾಳಿ ಎಬ್ಬಿಸಿದ್ದಾರೆ.
"ನಾನಿನ್ನೂ ಸಂಘ ತೊರೆದಿಲ್ಲ. ಆದರೆ ಸಂಘವನ್ನು ಮುನ್ನಡೆಸುವ ನಿಯಂತ್ರಣ ವ್ಯವಸ್ಥೆಯಿಂದ ಬಚಾವ್ ಆಗಿದ್ದೇನೆ. ಇಡೀ ಬಿಜೆಪಿ ಇಂದು ದಲ್ಲಾಳಿಗಳ ಕೂಟ. ನಾನು ಸಂಘದಲ್ಲೇ ಇರಬಯಸುತ್ತೇನೆ. ಆದರೆ ನಮಗೆ ದುರ್ಬಲ, ಅಸಹಾಯಕ ನಾಯಕರು ಬೇಡ. ಇಡೀ ಸಂಘ ಪರಿವಾರ ಬಿಜೆಪಿಗೆ ಶರಣಾಗಿದೆ" ಎಂದು ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಚಾಟಿ ಬೀಸಿದ್ದಾರೆ.
ಗೋವಾದಲ್ಲಿ ಬಿಜೆಪಿಯನ್ನು ಸೋಲಿಸುವ ಶಪಥ ಕೈಗೊಂಡಿರುವ ಹಿರಿಯ ಆರೆಸ್ಸೆಸ್ ಮುಖಂಡ ಸ್ವಂತ ಪಕ್ಷ ಸ್ಥಾಪಿಸಿ, ಎಂಜಿಪಿ ಮತ್ತು ಶಿವಸೇನೆ ಜತೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ಹೆಣೆಯಲು ತಂತ್ರ ರೂಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ 21 ವರ್ಷಗಳ ನೀತಿಗೆ ತಿಲಾಂಜಲಿ ನೀಡಿ, ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಲು ಆರಂಭಿಸಿದ 2011ರಲ್ಲಿ ಭಾರತೀಯ ಭಾಷಾ ಸುರಕ್ಷಾ ಮಂಚ್ ಸ್ಥಾಪನೆಯೊಂದಿಗೆ ನಮ್ಮ ಹೋರಾಟ ಆರಂಭವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕೂಡಾ ಕ್ರೈಸ್ತರನ್ನು ಓಲೈಸುವ ನೀತಿಯನ್ನೇ ಮುಂದುವರಿಸಿದೆ. ಕೇವಲ ಭಾರತೀಯ ಭಾಷಾ ಶಾಲೆಗಳಿಗಷ್ಟೇ ಈ ಅನುದಾನ ಸಿಗಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಪರಿಕ್ಕರ್ ಹಾಗೂ ಆರ್ಚ್ ಬಿಷಪ್ ಅವರ ನೀತಿಯಿಂದಾಗಿ ಗೋವಾದಲ್ಲಿ ಕೋಮು ಆಧರಿತ ವಿಭಜನೆ ಆಗುತ್ತಿದೆ. ಆರ್ಚ್ ಬಿಷಪ್, ಬಿಜೆಪಿ ಸರ್ಕಾರವನ್ನು ನಿಯಂತ್ರಿಸುತ್ತಿದ್ದಾರೆ ಎಂದು ಆಪಾದಿಸಿದರು.