ಜಲ್ಲಿ ಕಟ್ಟು :ಅನುಮತಿ ಆಗ್ರಹಿಸಿ ತಮಿಳುನಾಡು ಸಿಎಂ ಪ್ರಧಾನಿ ಮೋದಿ ಭೇಟಿ
ಚೆನ್ನೈ, ಜ.19: ತಮಿಳುನಾಡಿನಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಿರುವ ಜಲ್ಲಿ ಕಟ್ಟು ಸ್ಪರ್ಧೆಗೆ ಅನುಮತಿ ನೀಡುವಂತೆ ಮುಖ್ಯ ಮಂತ್ರಿ ಪನ್ವೀರ್ ಸೆಲ್ವಂ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಮಾಡಲಿದ್ದಾರೆ.
ಬೆಳಗ್ಗೆ 10:30ಕ್ಕೆ ಮುಖ್ಯ ಮಂತ್ರಿ ಪನ್ವೀರ್ ಸೆಲ್ವಂ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಗೆ ಸಮಯ ನಿಗದಿಯಾಗಿದೆ.
ಜಲ್ಲಿಕಟ್ಟು ಕ್ರೀಡೆಗೆ ಸುಗ್ರೀವಾಜ್ಞೆ ಮೂಲಕ ಅವಕಾಶ ನೀಡುವಂತೆ ಮುಖ್ಯ ಮಂತ್ರಿ ಪನ್ವೀರ್ ಸೆಲ್ವಂ ಅವರು ಪ್ರಧಾನಿಗೆ ಮನವಿ ಅರ್ಪಿಸಲಿದ್ದಾರೆ.
ಜಲ್ಲಿ ಕಟ್ಟು ಕ್ರೀಡೆಯ ನಿಷೇಧದ ವಿರುದ್ಧ ಚೆನ್ನೈನ ಮರೀನಾ ಬೀಚ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ತಮಿಳುಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಸತತ ಮೂರನೇ ದಿನವೂ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಇದೇ ವೇಳೆ ಕೇಂದ್ರ ಸರ್ಕಾರ ಹಾಗೂ ಪೇಟಾ ಸಂಘಟನೆಯ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗುತ್ತಿದ್ದು, ಪೇಟಾ ಸಂಘಟನೆಯನ್ನು ದೇಶದಿಂದ ನಿಷೇಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.