ಫೆ.1ರಂದೇ ಬಜೆಟ್ , ಮುಂದೂಡಿಕೆ ಇಲ್ಲ : ಸುಪ್ರೀಂ
ಹೊಸದಿಲ್ಲಿ, ಜ.23: ಕೇಂದ್ರ ಸರಕಾರದ ಬಜೆಟ್ ಫೆ.1ರಂದೇ ಮಂಡಿಸಲಾಗುತ್ತದೆ. ಪಂಚರಾಜ್ಯಗಳ ಚುನಾವಣೆವರೆಗೆ ಮುಂದೂಡಲಾಗದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಫೆ.1ರಂದು ಕೇಂದ್ರ ಸರಕಾರ ಬಜೆಟ್ ಮಂಡಿಸಿದರೆ ಪಂಚರಾಜ್ಯಗಳ ಚುನಾವಣೆ ಮೇಲೆ ಪ್ರಭಾವ ಬೀರುವ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಎಂ.ಎಲ್.ಶರ್ಮ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶರು, ಕೇಂದ್ರದ ಬಜೆಟ್ ಮಂಡನೆಗೂ ರಾಜ್ಯಗಳಿಗೂ ಸಂಬಂಧವಿಲ್ಲ. ರಾಜ್ಯಗಳಲ್ಲಿ ಚುನಾವಣೆ ಆಗಿಂದಾಗ್ಗೆ ನಡೆಯುತ್ತಿರುವ ಕಾರಣ ಇದರಿಂದ ಕೇಂದ್ರ ಸರಕಾರದ ಕಾರ್ಯಕ್ಕೆ ಅಡಚಣೆಯಾಗಬಾರದು. ವರ್ಷವಿಡೀ ವಿವಿಧ ರಾಜ್ಯಗಳಲ್ಲಿ ಚುನಾವಣೆ ನಡೆಯಬಹುದು. ಹಾಗೆಂದ ಮಾತ್ರಕ್ಕೆ ಕೇಂದ್ರ ಸರಕಾರ ಬಜೆಟ್ ಮಂಡಿಸುವುದು ಬೇಡವೇ ಎಂದು ಪ್ರಶ್ನಿಸಿದರು.
ಬಜೆಟ್ ದಾಖಲೆಗಳ ಮುದ್ರಣ ಕಾರ್ಯಕ್ಕೆ ವಿತ್ತ ಸಚಿವಾಲಯ ಕಳೆದ ವಾರ ಚಾಲನೆ ನೀಡಿತ್ತು.ಈ ಬಾರಿ ವಾರ್ಷಿಕ ಬಜೆಟ್ ಜೊತೆ ರೈಲ್ವೇ ಬಜೆಟ್ ಅನ್ನು ವಿಲೀನಗೊಳಿಸಲು ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಕೇಂದ್ರ ಸರಕಾರ ನಿರ್ಧರಿಸಿದ್ದು ಇದರಿಂದ ಶತಮಾನಗಳಿಂದ ನಡೆದು ಬರುತ್ತಿದ್ದ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿದಂತಾಗಿದೆ. ಅಲ್ಲದೆ ಈ ವರ್ಷದಿಂದ ಜನವರಿ ತಿಂಗಳಲ್ಲೇ ಬಜೆಟ್ ಮಂಡಿಸಲು ಸರಕಾರ ತೀರ್ಮಾನಿಸಿತ್ತು. ಇದುವರೆಗೆ ಫೆಬ್ರವರಿ ತಿಂಗಳ ಕಡೆಯ ದಿನದಂದು ಕೇಂದ್ರ ಸರಕಾರದ ಬಜೆಟ್ ಮಂಡನೆಯಾಗುತ್ತಿತ್ತು.
ಜನವರಿ 31ರಂದು ಬಜೆಟ್ ಅಧಿವೇಶನ ಆರಂಭವಾಗಲಿದ್ದು ಅಂದು ಸರಕಾರ ಆರ್ಥಿಕ ಸಮೀಕ್ಷೆಯ ವರದಿಯ ವಿವರ ನೀಡುವ ನಿರೀಕ್ಷೆಯಿದೆ.