ಮಧ್ಯವರ್ತಿಗಳು ಬದುಕಿಲ್ಲವೆಂದು ಸುಳ್ಳು ಹೇಳಿದ ಅಭ್ಯರ್ಥಿಗಳು
ವ್ಯಾಪಂ ಹಗರಣಕ್ಕೆ ಹೊಸ ತಿರುವು
ಹೊಸದಿಲ್ಲಿ, ಫೆ.26: ವ್ಯಾಪಮ್ ಹಗರಣದಲ್ಲಿ ವಿಚಾರಣೆಗೊಳಗಾದ ಅಭ್ಯರ್ಥಿಗಳು, ತಮ್ಮ ಪರವಾಗಿ ಪರೀಕ್ಷೆಗೆ ಬರೆಯಲು ನಕಲಿ ಪರೀಕ್ಷಾರ್ಥಿಗಳನ್ನು ಒದಗಿಸಿಕೊಟ್ಟಿದ್ದ ಮಧ್ಯವರ್ತಿಗಳು ಸಾವನ್ನಪ್ಪಿದ್ದಾರೆಂದು ತನಿಖಾಧಿಕಾರಿಗಳ ಮುಂದೆ ಸುಳ್ಳು ಹೇಳಿದ 90 ಅಧಿಕ ಪ್ರಕರಣಗಳನ್ನು ತಾನು ಪತ್ತೆಹಚ್ಚಿರುವುದಾಗಿ ಸಿಬಿಐ ಹೇಳಿದೆ.
ಮಧ್ಯಪ್ರದೇಶದ ವೃತ್ತಿಪರ ಪರೀಕ್ಷಾ ಮಂಡಳಿ (ವ್ಯಾಪಂ) ಆಯೋಜಿಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದ ಕೆಲವು ಅಭ್ಯರ್ಥಿಗಳು ತಮ್ಮ ಪರವಾಗಿ ಬರೆಯಲು ಮಧ್ಯವರ್ತಿಗಳ ಮೂಲಕ ದೊಡ್ಡ ಸಂಖ್ಯೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೊತ್ತುಪಡಿಸಿಕೊಂಡಿದ್ದರು. ಈ ಅಭ್ಯರ್ಥಿಗಳು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೊತ್ತುಪಡಿಸಲು ಮಧ್ಯವರ್ತಿಗಳನ್ನು ಸಂಪರ್ಕಿಸುತ್ತಿದ್ದರು. ಈ ಮಧ್ಯವರ್ತಿಗಳು ಇತರ ದಲ್ಲಾಳಿಗಳನ್ನು ಸಂಪರ್ಕಿಸಿ, ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರ, ದಿಲ್ಲಿ ಹಾಗೂ ರಾಜಸ್ಥಾನಗಳಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೊತ್ತುಪಡಿಸಿಕೊಳ್ಳುತ್ತಿದ್ದರು. ಈ ಪ್ರತಿಭಾವಂತ ವಿದ್ಯಾರ್ಥಿಗಳು ಅಧಿಕೃತ ಅಭ್ಯರ್ಥಿಗಳ ಸೋಗಿನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಬರೆದುಕೊಡುತ್ತಿದ್ದರು.
ಈ ಜಾಲವು ಎಷ್ಟೊಂದು ಸುವ್ಯವಸ್ಥಿತವಾಗಿತ್ತೆಂದರೆ, ಅಧಿಕೃತ ಅಭ್ಯರ್ಥಿಗೆ ಎರಡನೆ ಮಧ್ಯವರ್ತಿಯ ಬಗೆಯಾಗಲಿ ಅಥವಾ ತನ್ನ ಸೋಗಿನಲ್ಲಿ ಪರೀಕ್ಷೆ ಬರೆದವನ ಕುರಿತು ಯಾವುದೇ ಮಾಹಿತಿ ದೊರೆಯುತ್ತಿರಲಿಲ್ಲ.
ಬಹುತೇಕ ಪ್ರಕರಣಗಳಲ್ಲಿ, ಆನ್ಲೈನ್ ಅರ್ಜಿಗಳಲ್ಲಿ ಸಲ್ಲಿಕೆಯಾದ ಛಾಯಾಚಿತ್ರಗಳನ್ನು ತಿರುಚಿ, ನಕಲಿ ಅಭ್ಯರ್ಥಿಯ ಭಾವಚಿತ್ರವನ್ನು ಹೊಂದಿಸಲಾಗುತ್ತಿತ್ತು. ಹಗರಣ ಬಯಲಾಗುತ್ತಿದ್ದಂತೆಯೇ, ಮೃತಪಟ್ಟಿರುವ ಕೆಲವು ಅಮಾಯಕರ ಹೆಸರುಗಳನ್ನು ನೀಡಿ, ಅವರನ್ನು ತಾವು ಸಂಪರ್ಕಿಸಿದ್ದ ಮಧ್ಯವರ್ತಿಗಳೆಂದು ತನಿಖಾಧಿಕಾರಿಗಳ ಮುಂದೆ ತಿಳಿಸುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿತ್ತು ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸರಿಗೆ ಹಾಗೂ ತನಿಖಾಧಿಕಾರಿಗಳಿಗೆ ನಿಜವಾದ ಮಧ್ಯವರ್ತಿಯನ್ನು ಅಥವಾ ಪರೀಕ್ಷೆಗೆ ಬರೆದ ನಕಲಿ ಅಭ್ಯರ್ಥಿಯನ್ನು ಪತ್ತೆಹಚ್ಚಲು ಸಾಧ್ಯವಾಗದಂತೆ ಮಾಡುವುದೇ ಇದರ ಉದ್ದೇಶವಾಗಿತ್ತು ಎಂದು ಸಿಬಿಐ ಮೂಲಗಳು ತಿಳಿಸಿವೆ. ವ್ಯಾಪಂ ಹಗರಣಕ್ಕೆ ಸಂಬಂಧಿಸಿದ ಸುಮಾರು 96 ಪ್ರಕರಣಗಳಲ್ಲಿ ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳು ಸುಳ್ಳುಹೇಳಿದ್ದಾರೆಂಬ ಶಂಕೆಯ ಹಿನ್ನೆಲೆಯಲ್ಲಿ ಅವರನ್ನು ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆಯೆಂದು ಅವು ಹೇಳಿವೆ.ಸುಳ್ಳುತಪಾಸಣೆ ಪರೀಕ್ಷೆಗೆ ಒಪ್ಪಲು ನಿರಾಕರಿಸಿದ ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳನ್ನು ಮಾನಸಿಕ ವೌಲ್ಯಮಾಪನ ಪರೀಕ್ಷೆಗೆ ಒಳಪಡಿಸಲಾಗುವುದು ಹಾಗೂ ಅದಕ್ಕೆ ನ್ಯಾಯಾಲಯದ ಅನುಮತಿಯ ಅಗತ್ಯವಿಲ್ಲವೆಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.