ಜನಾರೋಗ್ಯಕ್ಕೆ ಮಾರಕ ವಾಯು ಮಾಲಿನ್ಯ
ದೇಶದಲ್ಲಿ ಜಾಗತೀಕರಣದ ಶಕೆ ಆರಂಭವಾದ ನಂತರ ಅಭಿವೃದ್ಧಿಯ ಹೆಸರಿನಲ್ಲಿ ನಡೆದಿರುವ ಚಟುವಟಿಕೆಗಳ ಬಗ್ಗೆ ವಿಮರ್ಶೆ ನಡೆಯಬೇಕಾಗಿದೆ.ಆರ್ಥಿಕಾಭಿವೃದ್ಧಿ ಪರಿಣಾಮವಾಗಿ ಸಾಕಷ್ಟು ಸವಲತ್ತುಗಳು ಜನರಿಗೆ ಸಿಕ್ಕಿವೆ. ಆಧುನಿಕ ತಂತ್ರಜ್ಞಾನದ ಪರಿಣಾಮವಾಗಿ ಎಲ್ಲವೂ ಜನರ ಕೈಗೆಟಕುವಷ್ಟು ಹತ್ತಿರಕ್ಕೆ ಬಂದಿವೆ. ಆದರೆ ಈ ಅಭಿವೃದ್ಧಿ ಮಾರ್ಗದ ಪರಿಣಾಮವಾಗಿ ಪರಿಸರದ ಮೇಲಾದ ದುಷ್ಪರಿಣಾಮ ಅತ್ಯಂತ ಭೀಕರವಾಗಿದೆ. ದೇಶದಲ್ಲಿ ಸಾವಿಗೀಡಾಗುತ್ತಿರುವ ಎಂಟು ಜನರಲ್ಲಿ ಒಬ್ಬರ ಸಾವಿಗೆ ವಾಯ ಮಾಲಿನ್ಯ ಕಾರಣವೆಂದು ಅಧಿಕೃತ ಮೂಲಗಳು ತಿಳಿಸುತ್ತವೆ. ಉಸಿರಾಡಲು ಶುದ್ಧಗಾಳಿಯೂ ಅಲಭ್ಯವಾಗುತ್ತಿದೆ. ಅಶುದ್ಧ ಗಾಳಿಯಿಂದಾಗಿ ಭಾರತೀಯರ ಸರಾಸರಿ ವಯಸ್ಸು 1.7ವರ್ಷದಷ್ಟು ಕಡಿಮೆಯಾಗುತ್ತಿದೆ ಎಂಬುದು ಜಾಗತಿಕ ಸಂಸ್ಥೆಯೊಂದರ ಸಮೀಕ್ಷೆಯಿಂದ ಗೊತ್ತಾಗಿದೆ. ಶ್ವಾಸಕೋಶದ ಕ್ಯಾನ್ಸರ್, ಹೃದಯಾಘಾತ, ಉಸಿರಾಟದ ತೊಂದರೆ, ಪಾರ್ಶ್ವವಾಯು ಹಾಗೂ ಮಧುಮೇಹದಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ವಾಯುಮಾಲಿನ್ಯವೇ ಕಾರಣ ಎಂದು ಖಚಿತಪಟ್ಟಿದೆ. ವಿಷಕಾರಿ ರಾಸಾಯನಿಕ ಚೆಲ್ಲುವ ಕಾರ್ಖಾನೆಗಳು, ಲಂಗುಲಗಾಮಿಲ್ಲದ ಕಟ್ಟಡ ನಿರ್ಮಾಣ ಕಾಮಗಾರಿ, ರಸ್ತೆಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಏಳುವ ಧೂಳು, ವಾಹನಗಳು ಹೊರಸೂಸುವ ಇಂಗಾಲ ಕಸ ಹಾಗೂ ತ್ಯಾಜ್ಯಕ್ಕೆ ಹಾಕುವ ಬೆಂಕಿಯಿಂದ ಮೇಲೇಳುವ ಹೊಗೆ, ಇವೆಲ್ಲದರ ಪರಿಣಾಮವಾಗಿ ದೇಶದಲ್ಲಿ ವಾಯುಮಾಲಿನ್ಯ ಗಂಡಾಂತರಕಾರಿಯಾಗಿ ಪರಿಣಮಿಸಿದೆ.
ಮಾಲಿನ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಎಚ್ಚರಿಕೆ ನೀಡುತ್ತಲೇ ಇದೆ. ಪರಿಸರ ವಿಜ್ಞಾನಿಗಳು ಹಾಗೂ ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು ಸರಕಾರವನ್ನು ಎಚ್ಚರಿಸುತ್ತಲೇ ಇದ್ದಾರೆ. ಆದರೆ ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತ ಆಡಳಿತಗಾರರು ಸ್ಪಂದಿಸುತ್ತಲೇ ಇಲ್ಲ. ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಉದ್ಯಮಗಳಿಗೆ, ಗಣಿಗಾರಿಕೆಗೆ ಸರಕಾರವೇ ಅನುಮತಿ ನೀಡುತ್ತದೆ. ಇಂತಹ ಅಪಾಯಕಾರಿ ಉದ್ಯಮಗಳ, ಗಣಿಗಾರಿಕೆ ಕಂಪೆನಿಗಳ ಒಡೆತನವನ್ನು ಪ್ರಭಾವಿ ರಾಜಕಾರಣಿಗಳೇ ಹೊಂದಿದ್ದಾರೆ. ಇದರ ದುಷ್ಪರಿಣಾಮ ಎಲ್ಲರ ಮೇಲೆ ಆಗುತ್ತದೆ ಎಂದು ಗೊತ್ತಿದ್ದರೂ ಅಧಿಕಾರದಲ್ಲಿರುವವರು ಕಿವುಡರಂತೆ ಕುಳಿತಿದ್ದಾರೆ. ಅಷ್ಟೇ ಅಲ್ಲ ಇಂತಹ ಮಾರಕ ಉದ್ಯಮಗಳಿಗೆ ರಾಜಕಾರಣಿಗಳು, ಅಧಿಕಾರಶಾಹಿಗಳು ರಕ್ಷಣೆ ನೀಡುತ್ತಿದ್ದಾರೆ.
ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಾಲಿನ್ಯದ ಪರಿಣಾಮ ಕಡಿಮೆ ಇರಬಹುದು, ಆದರೆ ಅತಿ ಹೆಚ್ಚು ಮಾಲಿನ್ಯದಿಂದ ಸಂಕಟಪಡುತ್ತಿರುವ ನಗರಗಳಲ್ಲಿ ಬೆಂಗಳೂರು ಕೂಡಾ ಒಂದು. ದಿಲ್ಲಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಹೆಚ್ಚು ಉದ್ಯಾನಗಳಿವೆ. ಭಾರೀ ಉದ್ಯಮಗಳೂ ಇಲ್ಲಿಲ್ಲ. ಆದರೆ ವಾತಾವರಣವನ್ನು ಹಾಳು ಮಾಡುವ ಎಂಬತ್ತು ಲಕ್ಷಕ್ಕೂ ಹೆಚ್ಚು ವಾಹನಗಳು ಇಲ್ಲಿವೆ, ಈ ವಾಹನಗಳು ಚೆಲ್ಲುವ ಇಂಗಾಲದಿಂದ ವಾತಾವರಣ ಮಲಿನಗೊಳ್ಳುತ್ತಿದೆ. ಈ ಮಾಲಿನ್ಯ ತಡೆಗಟ್ಟಬೇಕೆಂದರೆ ಖಾಸಗಿ ವಾಹನಗಳ ಮೇಲೆ ನಿರ್ಬಂಧ ವಿಧಿಸಬೇಕು. ಬೆಂಗಳೂರಿನಂಥ ನಗರಗಳಲ್ಲಿ ಒಂದು ಮನೆಯಲ್ಲಿ ನಾಲ್ಕು ಜನರಿದ್ದರೆ ನಾಲ್ಕು ಕಾರುಗಳನ್ನಿಟ್ಟುಕೊಂಡಿರುತ್ತಾರೆ. ಇಂತಹ ಮನೋಭಾವದಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಅದಕ್ಕಾಗಿ ಸರಕಾರ ಖಾಸಗಿ ವಾಹನಗಳ ಮೇಲೆ ನಿರ್ಬಂಧ ಹೇರಿ ಸಾಮೂಹಿಕ ವಾಹನ ವ್ಯವಸ್ಥೆಯನ್ನು ಬಲಪಡಿಸಬೇಕು.
ಪರಿಸರ ಮಾಲಿನ್ಯಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಅಡುಗೆ ಮಾಡಲು ಉರುವಲು ಕಟ್ಟಿಗೆ ಬಳಸುವುದೂ ಒಂದು ಕಾರಣವಾಗಿದೆ. ಉತ್ತರ ಭಾರತದಲ್ಲಿ ಇದರ ಪ್ರಮಾಣ ಹೆಚ್ಚು. ಅದಕ್ಕಾಗಿ ಸರಕಾರ ಗ್ರಾಮಾಂತರ ಪ್ರದೇಶದ ಪ್ರತಿ ಮನೆಗೂ ಜೈವಿಕ ಅನಿಲ ಇಲ್ಲವೇ ಸೌರಶಕ್ತಿಯಿಂದ ಉರಿಯುವ ಒಲೆಗಳನ್ನು ಪೂರೈಸಬೇಕು. ಬೆಳೆಗಳ ತ್ಯಾಜ್ಯವನ್ನು ಸುಡುವ ಬದಲು ಭೂಮಿಯಲ್ಲೇ ಕೊಳೆಯಲು ಬಿಟ್ಟರೆ ಒಳ್ಳೆಯ ಗೊಬ್ಬರವಾಗುತ್ತದೆ, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು.ಡೀಸೆಲ್ ಜನರೇಟರ್ಗಳ ಮೇಲೆ ನಿರ್ಬಂಧ ವಿಧಿಸಬೇಕು. ಈ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಪಾತ್ರ ಮುಖ್ಯವಾಗಿದೆ. ಆದರೆ ಅದು ಇದ್ದೂ ಇಲ್ಲದಂತಿದೆ. ಗಾಢ ನಿದ್ರೆಯಲ್ಲಿರುವ ಅದನ್ನು ಬಡಿದೆಬ್ಬಿಸಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪರಿಸರ ಸಂರಕ್ಷಣೆಯು ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿ ಪರಿಗಣಿಸಲ್ಪಡಬೇಕಾಗಿದೆ. ಈ ವಾಯುಮಾಲಿನ್ಯವನ್ನು ಹೀಗೇ ಬಿಟ್ಟು ಆರೋಗ್ಯ ವಲಯಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಪ್ರಯೋಜನವಿಲ್ಲ. ಸರಕಾರ ಮಾತ್ರವಲ್ಲ ಜನರೂ, ಜನಪರ ಸಂಘಟನೆಗಳೂ ವಾಯು ಮಾಲಿನ್ಯ ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರವಹಿಸಬೇಕು
ವಾಯು ಮಾಲಿನ್ಯಕ್ಕೆ ಅತ್ಯಂತ ಮುಖ್ಯ ಕಾರಣವೆಂದರೆ ಗಣಿಗಾರಿಕೆ. ಬಳ್ಳಾರಿಯಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಗಣಿಗಾರಿಕೆಯಿಂದ ರಾಜ್ಯದ ಸಾವಿರಾರು ಕೋಟಿ ರೂಪಾಯಿ ಖನಿಜ ಸಂಪತ್ತು ಕೆಲವೇ ವ್ಯಕ್ತಿಗಳ ಪಾಲಾದುದು ಒತ್ತಟ್ಟಿಗಿರಲಿ ಈ ಗಣಿಗಾರಿಕೆಯಿಂದ ಪರಿಸರದ ಮೇಲಾದ ದುಷ್ಪರಿಣಾಮ ಅತ್ಯಂತ ತೀವ್ರ ಸ್ವರೂಪದ್ದು. ಅಲ್ಲಿ ಅಕ್ರಮ ಸಕ್ರಮ ಎರಡೂ ಗಣಿಗಾರಿಕೆಗಳು ಲಂಗುಲಗಾಮಿಲ್ಲದೆ ನಡೆದವು. ಸರಕಾರದ ಉನ್ನತ ಪ್ರಭಾವಿ ಸ್ಥಾನಗಳಲ್ಲಿರುವವರೇ ಗಣಿದಂಧೆಯಲ್ಲಿ ತೊಡಗಿದ್ದರಿಂದ ಅದನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಕೊನೆಗೆ ಹಿಂದಿನ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ದಿಟ್ಟಕ್ರಮ ಹಾಗೂ ಪರಿಸರವಾದಿ ಎಸ್.ಆರ್. ಹಿರೇಮಠ ಅವರ ನಿರಂತರ ಹೋರಾಟದ ಪರಿಣಾಮವಾಗಿ ಗಣಿಗಾರಿಕೆಗೆ ಕಡಿವಾಣ ಬಿತ್ತು. ಕರ್ನಾಟಕ ಮಾತ್ರವಲ್ಲದೆ ದೇಶದ ಅನೇಕ ಕಡೆ ಇಂತಹ ಗಣಿಗಾರಿಕೆಗಳು ನಡೆಯುತ್ತಿವೆ. ಪ್ರಭಾವಿ ರಾಜಕಾರಣಿಗಳ ಕೈವಾಡ ಇದರಲ್ಲಿದೆ.
ಛತ್ತೀಸ್ಗಡ, ಜಾರ್ಖಂಡ್, ಒಡಿಶಾ ಮುಂತಾದ ರಾಜ್ಯಗಳಲ್ಲಿ ಶತಮಾನಗಳಿಂದ ಪರಿಸರವನ್ನು ಕಾಪಾಡಿದ ಅರಣ್ಯವನ್ನು ನಾಶ ಮಾಡಿ ಅಲ್ಲಿನ ಅಮೂಲ್ಯ ಖನಿಜ ಸಂಪತ್ತನ್ನು ಕೊಳ್ಳೆಹೊಡೆಯಲು ಕೇಂದ್ರಸರಕಾರ ದೇಶ ವಿದೇಶದ ಕಾರ್ಪೊರೇಟ್ ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಅದಕ್ಕಾಗಿ ಅಲ್ಲಿ ಶತಮಾನಗಳಿಂದ ನೆಲೆಸಿದ ಆದಿವಾಸಿಗಳನ್ನು ಅಲ್ಲಿಂದ ಹೊರದಬ್ಬಿ ಬೀದಿಪಾಲು ಮಾಡಲು ಬಲಪ್ರಯೋಗ ಮಾಡಲಾಗುತ್ತಿದೆ. ಇದಕ್ಕೆ ಪ್ರತಿಭಟನೆ ವ್ಯಕ್ತಪಡಿಸುವವರನ್ನು ಗುಂಡಿಕ್ಕಿ ಸಾಯಿಸಲಾಗುತ್ತಿದೆ. ಅದಕ್ಕಾಗಿ ಅರೆ ಸೇನಾಪಡೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸರಕಾರಕ್ಕೆ ಪರಿಸರ ರಕ್ಷಣೆ ಬಗ್ಗೆ ಕಾಳಜಿ ಇದ್ದರೆ ಮೊದಲು ಆದಿವಾಸಿಗಳನ್ನು ಎತ್ತಂಗಡಿ ಮಾಡುವುದನ್ನು ನಿಲ್ಲಿಸಬೇಕು. ವಾಯುಮಾಲಿನ್ಯ ತಡೆಗೆ ಬರೀ ತುಟಿ ಸೇವೆ ಸಾಕಾಗದು. ಅದಕ್ಕಾಗಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.
ವಾಯು ಮಾಲಿನ್ಯ ನಿಯಂತ್ರಣ ಮಾಡಿದರೆ ದೇಶದ ಜನರ ಆರೋಗ್ಯ ಸುಧಾರಿಸುತ್ತದೆ. ಜನಸಮಾನ್ಯರ ಆರೋಗ್ಯ ಸುಧಾರಿಸಿದರೆ ದೇಶ ಬಲಿಷ್ಠವಾಗುತ್ತದೆ. ಈಗಿರುವ ಮೋದಿ ಸರಕಾರಕ್ಕೆ ಸ್ಪಷ್ಟವಾದ ಪರಿಸರ ನೀತಿಯೇ ಇಲ್ಲ. ಬರಲಿರುವ ಲೋಕಸಭಾ ಚುನಾವಣೆಯಲ್ಲಾದರೂ ಪರಿಸರ ರಕ್ಷಣೆ ಚುನಾವಣೆ ವಿಷಯವಾಗುವಂತೆ ನೋಡಿಕೊಳ್ಳಬೇಕು.