ದೇಶದ್ರೋಹಿಗಳ ತಲೆಗೆ ಹುತಾತ್ಮರೆಂಬ ಕಿರೀಟ
ದೇಶದೊಳಗಿರುವ ಬಿಂದ್ರನ್ವಾಲೆ, ನಾಥೂರಾಂ ಗೋಡ್ಸೆಯಂತಹ ಉಗ್ರರನ್ನು ಹಿಂಬಾಲಿಸುತ್ತಿರುವ ದೇಶದ್ರೋಹಿಗಳ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ, ದೇಶದ್ರೋಹ-ದೇಶಪ್ರೇಮದ ಪರದೆ ತೆಳುವಾಗುತ್ತಾ, ನಾಥೂರಾಂನಂತಹ ನೀಚರೇ ದೇಶಪ್ರೇಮಿಗಳಾಗಿ ಯುವಜನರಿಂದ ಪೂಜೆಗೊಳಗಾಗುವ ಸನ್ನಿವೇಶ ನಿರ್ಮಾಣವಾಗಬಹುದು. ಅದು ಈ ದೇಶವನ್ನು ಹಿಂಸೆ ಮತ್ತು ಸರ್ವನಾಶದತ್ತ ಕೊಂಡೊಯ್ಯಬಹುದು.
ಪುರಾಣ, ಇತಿಹಾಸ, ವರ್ತಮಾನ ಎಲ್ಲೇ ಇರಲಿ. ಎಲ್ಲಿ ನಾಯಕನಿರುತ್ತಾನೋ ಅವನಿಗೊಬ್ಬ ಪ್ರತಿನಾಯಕನಿರುತ್ತಾನೆ. ಖಳ ನಾಯಕ ಬೇರೆ ಪ್ರತಿನಾಯಕ ಬೇರೆ. ಯಾಕೆಂದರೆ ಖಳನಾಯಕ ಯಾವತ್ತೂ ಒಬ್ಬಂಟಿ. ಆದರೆ ಪ್ರತಿನಾಯಕನಿಗೆ ಅವನದೇ ಆದ ಹಿಂಬಾಲಕರು, ಅವನದೇ ಆದ ಪ್ರತಿ ಆಲೋಚನೆಗಳಿರುತ್ತವೆ. ರಾಮನ ವಿರುದ್ಧ ರಾವಣ ಖಳನಾಯಕನಾಗದೆ, ಪ್ರತಿನಾಯಕನಾಗಿ ವಿಜೃಂಭಿಸುವುದು ಇದೇ ಕಾರಣಕ್ಕೆ. ಪಾಂಡವರ ವಿರುದ್ಧ ದುರ್ಯೋಧನ ಖಳನಾಯಕನಾಗದೆ ಪ್ರತಿನಾಯಕನಾಗಿ ಚರ್ಚೆಗೊಳಗಾಗುತ್ತಾನೆ. ಇದು ಇತಿಹಾಸದಲ್ಲೂ ಮರುಕಳಿಸುತ್ತದೆ. ಇತಿಹಾಸದ ಹಲವು ವ್ಯಕ್ತಿಗಳು ಹಲವರಿಗೆ ಖಳನಾಯಕನಾಗಿ ಕಂಡರೆ, ಇನ್ನು ಕೆಲವರಿಗೆ ನಾಯಕನಾಗಿ ಕಾಣಿಸುತ್ತಾರೆ. ಭಗತ್ ಸಿಂಗ್ನನ್ನು ಬ್ರಿಟಿಷರು ಉಗ್ರಗಾಮಿ ಎಂದು ಕರೆದರೆ, ಭಾರತೀಯರು ದೇಶಭಕ್ತ ಎಂದು ಕರೆದರು. ಒಂದು ದೊಡ್ಡ ಬಂಡಾಯವನ್ನು ಬ್ರಿಟಿಷರುಸಿಪಾಯಿ ದಂಗೆ ಎಂದು ಕರೆದರೆ, ಭಾರತೀಯರು ಮೊದಲ ಸ್ವಾತಂತ್ರ ಹೋರಾಟ ಎಂದು ಗುರುತಿಸುತ್ತಾರೆ. ಇವೆಲ್ಲ ಪುರಾಣ, ಇತಿಹಾಸದಲ್ಲೇ ಮುಗಿದರೆ ನಮಗೆ ಸಮಸ್ಯೆಗಳಿಲ್ಲ. ಆದರೆ ಅದು ವರ್ತಮಾನವನ್ನೂ ಕಲಕುವಾಗ ಮಾತ್ರ ನಾವು ಎಚ್ಚರಿಕೆಯಿಂದಿರಬೇಕಾಗುತ್ತದೆ. ಇಲ್ಲವಾದರೆ, ಅದು ನಮ್ಮ ಅಳಿದುಳಿದ ನೆಮ್ಮದಿಯನ್ನೂ ಕೆಡಿಸುವುದರಲ್ಲಿ ಸಂಶಯವಿಲ್ಲ. ಹೊಸದಿಲ್ಲಿಯಲ್ಲಿ ಗುರುದ್ವಾರವೊಂದು ಇಂದಿರಾಗಾಂಧಿ ಹಂತಕರನ್ನು ಹುತಾತ್ಮರು ಎಂದು ಶ್ಲಾಘಿಸಿ ಅವರ ಕುಟುಂಬದವರನ್ನು ಗೌರವಿಸಿದೆ. ಸಿಖ್ಖ್ ವಿದ್ಯಾರ್ಥಿಗಳ ಒಕ್ಕೂಟದ ಆಶ್ರಯದಲ್ಲಿ ಮೋತಿಭಾಗ್ನ ಗುರುದ್ವಾರದಲ್ಲಿ ಅಕಾಲಿ ದಳದ ಮುಖಂಡರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಿತು. ಇಂದಿರಾ ಹತ್ಯೆ ಮಾಡಿದ ಖೇಹರ್ ಸಿಂಗ್, ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಅವರಿಗೆ ಈ ಸಂಘಟನೆ ಹುತಾತ್ಮ ಬಿರುದನ್ನು ನೀಡಿತು. ಸಾರ್ವಜನಿಕವಾಗಿ ಈ ಕಾರ್ಯಕ್ರಮ ನಡೆದಿದೆ.
ಆದರೆ ಈವರೆಗೆ ಯಾರ ಮೇಲೂ ದೇಶದ್ರೋಹದ ಪ್ರಕರಣ ದಾಖಲಾಗಿಲ್ಲ. ಮೇಲಿನ ಮೂವರು ಇಂದಿರಾಗಾಂಧಿಯವರನ್ನು ಯಾಕೆ ಕೊಂದರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಬಿಂದ್ರನ್ ವಾಲೇಯನ್ನು ಹುತಾತ್ಮ ಮಾಡುವ ಹುನ್ನಾರದ ಮೊದಲ ಹಂತವಾಗಿದೆ ಇಂದಿರಾಹಂತಕರನ್ನು ಸನ್ಮಾನಿಸಿರುವುದು. ಈಗಾಗಲೇ ಪಂಜಾಬ್ನಲ್ಲಿ ಬಿಂದ್ರನ್ವಾಲೆಯ ಪ್ರತಿಮೆ ಸ್ಥಾಪನೆ ಮಾಡುವ ಪ್ರಯತ್ನವೂ ನಡೆದಿದೆ. ಕೇಂದ್ರ ಸರಕಾರ ಈ ಬೆಳವಣಿಗೆಗಳ ಕುರಿತಂತೆ ನಿಗೂಢ ವೌನವನ್ನು ತಾಳಿದೆ. ಬಹುಶಃ ಇಂದಿರಾಗಾಂಧಿ ತಮ್ಮ ರಾಜಕೀಯ ವೈರಿಯಾಗಿರುವುದರಿಂದ ಮತ್ತು ಸಿಖ್ಖರ ಒಲವನ್ನು ಗಳಿಸುವ ಉದ್ದೇಶದಿಂದ ಸರಕಾರ ವೌನವಾಗಿರಬೇಕು. ಪಂಜಾಬ್ನಲ್ಲಿ ತನ್ನ ಬೇರನ್ನು ಊರುವುದಕ್ಕೆ ಯತ್ನಿಸುತ್ತಿರುವ ಕೇಜ್ರಿವಾಲ್ ಸರಕಾರಕ್ಕೂ ಇದೊಂದು ಅತಿರೇಕ ಅನ್ನಿಸಿಲ್ಲ. ಈ ವೌನ ಸಿಖ್ಖ್ ವಿದ್ಯಾರ್ಥಿಗಳಿಗೆ, ಯುವಕರಿಗೆ ಸರಕಾರದಿಂದ ಸಿಕ್ಕಿದ ಕುಮ್ಮಕ್ಕು ಅಥವಾ ಪರವಾನಿಗೆಯಾಗಿದೆ. ಬಹುಶಃ ಈ ವೌನ ಅವರಿಗೆ ನೀಡಿರುವ ಧೈರ್ಯ ಮುಂದಿನ ದಿನಗಳಲ್ಲಿ ಇನ್ನಷ್ಟು ಅನಾಹುತಗಳಿಗೆ ಕಾರಣವಾಗಬಹುದು. ಬಿಂದ್ರನ್ ವಾಲೆ ಅವರ ಪಾಲಿನ ಆದರ್ಶವಾಗುವ ಸಾಧ್ಯತೆಯಿದೆ. ಹಾಗಾದಲ್ಲಿ, ಅದು ಅವರನ್ನು ಯಾವ ದಿಕ್ಕಿಗೆ ಮುನ್ನಡೆಸಬಹುದು ಎನ್ನುವುದನ್ನು ನಾವು ಊಹಿಸಬಹುದು.
ಇದು ಕೇವಲ ಸಿಖ್ಖರಿಗೆ ಮಾತ್ರ ಸೀಮಿತವಾಗಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಸಂಘಪರಿವಾರದ ಒಂದು ಸಂಘಟನೆ, ನಾಥೂರಾಂ ಗೋಡ್ಸೆಯನ್ನು ಹುತಾತ್ಮನಾಗಿಸುವ ಪ್ರಯತ್ನದಲ್ಲಿದೆ. ಹಲವೆಡೆ ಆತನ ಪ್ರತಿಮೆಯನ್ನು ಸ್ಥಾಪಿಸುವುದಕ್ಕೆ ಯೋಜನೆಯನ್ನು ಹಾಕಿಕೊಂಡಿದೆ. ಬಹಿರಂಗವಾಗಿ ಈ ಕುರಿತಂತೆ ಪತ್ರಿಕಾಗೋಷ್ಠಿಯನ್ನೂ ಕರೆದಿದೆ. ನಾಥೂರಾಂ ಗೋಡ್ಸೆ ಹುತಾತ್ಮ ಎಂದಾದರೆ, ಗಾಂಧಿಯ ಹತ್ಯೆಯನ್ನು ನೇರವಾಗಿ ಸಮರ್ಥಿಸಿದಂತಾಗುತ್ತದೆ. ಸಂವಿಧಾನ ವಿರೋಧಿಯಾಗಿರುವ ನಾಥೂರಾಂ ಗೋಡ್ಸೆಯನ್ನು ಸಾರ್ವಜನಿಕವಾಗಿ ಬೆಂಬಲಿಸುವ ಹೇಳಿಕೆಯನ್ನು ನೀಡಿದರೂ ಅವರ ವಿರುದ್ಧ ಯಾವುದೇ ದೇಶದ್ರೋಹದ ಪ್ರಕರಣವನ್ನು ಸರಕಾರ ಈವರೆಗೆ ದಾಖಲಿಸಿಲ್ಲ. ಈ ಮೂಲಕ ಸರಕಾರ ಜನರಿಗೆ ಯಾವ ಸಂದೇಶವನ್ನು ನೀಡಲು ಹೊರಟಿದೆ? ಗಾಂಧಿಯ ಹತ್ಯೆ ಸರಿಯೆಂದೇ? ಬಿಂದ್ರನ್ ವಾಲೆಯ ಪ್ರಕರಣದಲ್ಲಿ ಸಿಖ್ ಸಮುದಾಯದ ತೀವ್ರ ನಿಷ್ಠುರ ಕಟ್ಟಿಕೊಂಡಿದ್ದರೂ, ಇಂದಿರಾಗಾಂಧಿ ತನ್ನ ಅಂಗರಕ್ಷಕರಾಗಿ ಸಿಖ್ಖರನ್ನೇ ನೇಮಕಗೊಳಿಸಿದ್ದರು. ಅದು ಅವರ ರಾಜಕೀಯ ಹಿರಿತನಕ್ಕೆ ಸಾಕ್ಷಿಯಾಗಿದೆ. ಸಿಖ್ಖರನ್ನು ದೇಶದ ಮುಖ್ಯವಾಹಿನಿಯಲ್ಲಿ ಕೊಂಡೊಯ್ಯುವ ಭಾಗವಾಗಿ ಅವರನ್ನು ಇಂದಿರಾಗಾಂಧಿ ನಂಬಿದ್ದರು. ಆ ನಂಬಿಕೆಯನ್ನು ಉಳಿಸಿಕೊಳ್ಳುವುದು ಆ ಮೂವರು ಅಂಗರಕ್ಷಕರ ಕರ್ತವ್ಯವಾಗಿತ್ತು. ಅವರು ತಾವು ನಂಬಿದ ಧರ್ಮಕ್ಕೂ, ತಮ್ಮ ವೃತ್ತಿ ಧರ್ಮಕ್ಕೂ ಏಕಕಾಲದಲ್ಲಿ ದ್ರೋಹ ಎಸಗಿದರು. ಒಬ್ಬ ಒಂಟಿ ಮಹಿಳೆಯೆನ್ನುವ ಕಾರಣಕ್ಕಾಗಿಯಾದರೂ ಅವರದನ್ನು ಮಾಡದೇ ಇರಬಹುದಾಗಿತ್ತು. ಅವರು ಅಂದು ಮೆರೆದಿರುವುದು ಕ್ರೌರ್ಯದ ಪರಮಾವಧಿ. ಇಂತಹ ವಿದ್ರೋಹಿಗಳನ್ನು ಹುತಾತ್ಮರೆಂದು ಕರೆದು, ಅವರಿಗೆ ಸನ್ಮಾನಿಸುವುದು ಇಡೀ ಯುವ ಸಮುದಾಯವನ್ನು ತಪ್ಪುದಾರಿಗೆಳೆದಂತೆ. ಇತ್ತ ನಾಥೂರಾಂ ಗೋಡ್ಸೆ ಮಾಡಿರುವುದು ಅದಕ್ಕಿಂತಲೂ ದೊಡ್ಡ ನೀಚತನ. ಗಾಂಧಿ ಯಾವುದೇ ಅಂಗರಕ್ಷಕರ ನಡುವೆ ಇದ್ದಿರಲಿಲ್ಲ. ಸತ್ಯ, ಅಹಿಂಸೆ ಅವರ ಗುರಿಯಾಗಿತ್ತು. ಎಲ್ಲ ಧರ್ಮೀಯರನ್ನು ಒಂದೇ ತೆಕ್ಕೆಯಲ್ಲಿ ತೆಗೆದುಕೊಂಡು ದೇಶವನ್ನು ಉಳಿಸಿಕೊಳ್ಳುವುದು ಅವರ ಗುರಿಯಾಗಿತ್ತು. ಗಾಂಧಿಯನ್ನು ಕೊಲ್ಲುವ ಸಂದರ್ಭದಲ್ಲಿ ನಾಥೂರಾಂ ಮನದಲ್ಲಿದ್ದುದು ಈ ದೇಶವನ್ನು ವಿಚ್ಛಿದ್ರಗೊಳಿಸುವುದಾಗಿತ್ತು. ಅಂಥವನನ್ನು ಆದರ್ಶವಾಗಿ ತೆಗೆದುಕೊಂಡವರು ಈ ದೇಶವನ್ನು ವಿಚ್ಛಿದ್ರಗೊಳಿಸುತ್ತಾರೆಯೇ ಹೊರತು, ಒಂದಾಗಿಸಲಾರರು.
ಒಂದೆಡೆ ಬಿಂದ್ರನ್ ವಾಲೆ, ನಾಥೂರಾಂ ಹುತಾತ್ಮರಾದರೆ, ಕಾಶ್ಮೀರದ ಜನರು ಅಫ್ಝಲ್ ಗುರುವನ್ನು ಹುತಾತ್ಮ ಎಂದು ಸ್ವೀಕರಿಸಿದರೆ ಅದರಲ್ಲಿ ಅಚ್ಚರಿಯೇನು ಬಂತು? ಗಾಂಧೀಜಿ, ಇಂದಿರಾ ಹಂತಕರನ್ನು ಹುತಾತ್ಮರು ಎಂದು ಕರೆಯುವುದು ಅಪರಾಧವಾಗದೇ ಇದ್ದರೆ, ಕಾಶ್ಮೀರಿ ಪ್ರತ್ಯೇಕತಾವಾದಿಗಳು ಅಫ್ಝಲ್ಗುರುವನ್ನು ಹುತಾತ್ಮ ಎಂದು ಕರೆಯುವುದೂ ತಪ್ಪಾಗುವುದಿಲ್ಲ. ಪರೋಕ್ಷವಾಗಿ, ಅಫ್ಝಲ್ ಗುರುವನ್ನು ಒಬ್ಬ ಹುತಾತ್ಮನನ್ನಾಗಿಸಲು ಸರಕಾರವೇ ಈ ಮೂಲಕ ಅವಕಾಶ ಕೊಟ್ಟಂತಾಗಿದೆ. ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಸರಕಾರ ದೇಶದ್ರೋಹಿಗಳು ಎಂದು ಕರೆಯುವ ಮುನ್ನ, ದೇಶದೊಳಗಿರುವ ಬಿಂದ್ರನ್ವಾಲೆ, ನಾಥೂರಾಂ ಗೋಡ್ಸೆಯಂತಹ ಉಗ್ರರನ್ನು ಹಿಂಬಾಲಿಸುತ್ತಿರುವ ದೇಶದ್ರೋಹಿಗಳ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ, ದೇಶದ್ರೋಹ-ದೇಶಪ್ರೇಮದ ಪರದೆ ತೆಳುವಾಗುತ್ತಾ, ನಾಥೂರಾಂನಂತಹ ನೀಚರೇ ದೇಶಪ್ರೇಮಿಗಳಾಗಿ ಯುವಜನರಿಂದ ಪೂಜೆಗೊಳಗಾಗುವ ಸನ್ನಿವೇಶ ನಿರ್ಮಾಣವಾಗಬಹುದು. ಅದು ಈ ದೇಶವನ್ನು ಹಿಂಸೆ ಮತ್ತು ಸರ್ವನಾಶದತ್ತ ಕೊಂಡೊಯ್ಯಬಹುದು.