ಯಾರ ಪಾದವನ್ನು ಯಾರು ತೊಳೆಯಬೇಕು?
ಈ ದೇಶದಲ್ಲಿ ಜಾತಿಯನ್ನು ಆಚರಿಸುತ್ತಿರುವವರು ಯಾರು? ದಲಿತರೋ ಅಥವಾ ಮೇಲ್ವರ್ಣೀಯರೋ? ಮೇಲ್ವರ್ಣೀಯರು ಎಂದಾದರೆ ನಾವು ಜಾತೀಯ ವಿರುದ್ಧ ಉಪದೇಶಗಳನ್ನು ಮೇಲ್ವವರ್ಣೀಯರ ಮನೆಗಳಿಗೆ, ಕೇರಿಗಳಿಗೆ, ಅಗ್ರಹಾರಗಳಿಗೆ ಮುಖಮಾಡಿ ನೀಡಬೇಕಲ್ಲವೆ? ದುರದೃಷ್ಟವಶಾತ್ ಇಂದು ಜಾತೀಯತೆಯನ್ನು ನಿವಾರಿಸುತ್ತೇನೆ ಎಂದು ಪೇಜಾವರಶ್ರೀಗಳು ಹೊರಡುವುದು ದಲಿತರ ಕೇರಿಗೆ.
ರಾಜಕಾರಣಿಗಳು ದಲಿತರ ಕೇರಿಗೆ ಹೋಗಿ ಉಂಡು ತಾವೆಷ್ಟು ಜಾತ್ಯತೀತರು ಎನ್ನುವುದನ್ನು ಜಗತ್ತಿಗೆ ಸಾಬೀತು ಪಡಿಸುತ್ತಾರೆ. ರಾಜಕಾರಣಿಗಳು ‘ಮೇಲೆ ಬನ್ನಿ’ ಎಂದು ದಲಿತರಿಗೆ ಕರೆಕೊಡುತ್ತಾರೆಯೇ ಹೊರತು, ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ‘ದಲಿತರಿಗೆ ಮೇಲೆ ಬರಲು ಅವಕಾಶ ಕೊಡಿ’ ಎಂದು ಮೇಲ್ಜಾತಿಯ ಜನರಿಗೆ ಕರೆಕೊಟ್ಟ ಉದಾಹರಣೆಯಿಲ್ಲ. ಸಾಧಾರಣವಾಗಿ, ಯಾವುದೇ ಮನೆಗೆ ಹೋಗಿ ಒಬ್ಬ ಊಟ ಮಾಡಿದರೆ, ಅವನಿಗೆ ಊಟ ಹಾಕಿದ ವ್ಯಕ್ತಿ ದೊಡ್ಡವನಾಗುತ್ತಾನೆ. ಆದರೆ ದಲಿತರ ಮನೆಗೆ ಒಬ್ಬ ತೆರಳಿ ಊಟ ಮಾಡಿದರೆ, ಊಟ ಹಾಕಿದವನು ಬದಿಗೆ ಸರಿದು, ಊಟ ಮಾಡಿದವನೇ ದೊಡ್ಡವನೆಂದು ಮಾಧ್ಯಮಗಳಲ್ಲಿ ಬಿಂಬಿತನಾಗುತ್ತಾನೆ.
ಇತ್ತೀಚೆಗೆ ತುಮಕೂರಿನಲ್ಲಿ ದಲಿತರ ಮನೆಗೆ ತೆರಳಿ ಊಟ ಮಾಡಿದ ಯಡಿಯೂರಪ್ಪರ ರಾಜಕೀಯ ನಾಟಕ ಇಂತಹದೇ ಇನ್ನೊಂದು ಪ್ರಹಸನ. ತುಮಕೂರಿನ ಒಬ್ಬ ದಲಿತನ ಮನೆಯಲ್ಲಿ ಊಟ ಮಾಡಿದ ಯಡಿಯೂರಪ್ಪ ಬಳಗಕ್ಕೆ ಕನಿಷ್ಠ ಅವರ ಕೈಯ ಅಡುಗೆಯನ್ನು ಉಣ್ಣುವಷ್ಟೂ ಪ್ರಾಮಾಣಿಕತೆ ಇರಲಿಲ್ಲ. ಹೊಟೇಲಿನಿಂದ ತರಿಸಿದ ಅಡುಗೆಯನ್ನು ಉಂಡು ‘ನಾವು ದಲಿತರ ಮನೆಯಲ್ಲಿ ಉಂಡು ಅವರಿಗೆ ಉಪಕಾರ ಮಾಡಿದೆವು’ ಎಂಬಂತೆ ಮಾಧ್ಯಮಗಳಲ್ಲಿ ಸುದ್ದಿಯಾದರು. ಇಂದು ‘ದಲಿತರ ಮನೆಯಲ್ಲಿ ವಾಸ್ತವ್ಯ’ ‘ದಲಿತರ ಮನೆಯಲ್ಲಿ ಸಹಪಂಕ್ತಿ ಊಟ’ ಎಂಬಿತ್ಯಾದಿ ನಾಟಕಗಳು ದಲಿತರನ್ನು ಹೇಗೆ ಇನ್ನಷ್ಟು ಅವಮಾನಿಸುತ್ತಿದೆ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ.
ಮೇಲ್ವರ್ಣೀಯರು ತಮ್ಮ ಕೇರಿಗೆ ಕಾಲಿಟ್ಟರೆ ದಲಿತರೇಕೆ ಅದನ್ನು ‘ಮಹಾ ಉಪಕಾರ’ ಎಂದು ಸಂಭ್ರಮ ಪಡಬೇಕು? ತಮ್ಮ ಮನೆಗೆ ಕರೆದು ಅವರಿಗೆ ಊಟ ಹಾಕಿ, ಆ ಮೂಲಕ ಮೇಲ್ವರ್ಣೀಯರನ್ನು ದೊಡ್ಡವನನ್ನಾಗಿಸುವುದು ಎಂದರೆ, ದಲಿತರು ತಮ್ಮ ಕೀಳನ್ನು ತಾವೇ ಒಪ್ಪಿಕೊಂಡಂತೆ. ಈ ದೇಶದಲ್ಲಿ ಅಸ್ಪಶ್ಯತೆ ಆಚರಿಸುತ್ತಿರುವವರು ದಲಿತರಲ್ಲ, ಮೇಲ್ವರ್ಣೀಯರು. ಆದುದರಿಂದ ಜಾತೀಯತೆಯನ್ನು ನಿವಾರಿಸುವ ಕೆಲಸ ಅಗ್ರಹಾರದಿಂದ ಆರಂಭವಾಗಬೇಕೇ ಹೊರತು, ದಲಿತ ಕೇರಿಯಿಂದಲ್ಲ. ಈ ನಿಟ್ಟಿನಲ್ಲಿ ಈ ದೇಶದ ಸ್ವಾಮೀಜಿಗಳು, ರಾಜಕಾರಣಿಗಳು, ಸಂಘಪರಿವಾರದ ಮುಖಂಡರು ಜಾತೀಯತೆಯನ್ನು ಅಳಿಸಲು ಅಗ್ರಹಾರದ ಕಡೆಗೆ ಪಾದಯಾತ್ರೆ ಮಾಡಬೇಕಾಗಿದೆ. ಇಷ್ಟೇ ಅಲ್ಲ, ಜಾತೀಯತೆಯನ್ನು ನಿವಾರಿಸಲು ದಲಿತರು ಅಗ್ರಹಾರದ ಕಡೆಗೆ ನಡೆಯಬೇಕಾಗಿದೆ.
ಒಂದು ಸಂದರ್ಭದಲ್ಲಿ ದೇವನೂರ ಮಹಾದೇವ ಅವರು ಹೇಳಿದ ಹಾಗೆ ದಲಿತ ನಾಯಕರು, ಚಿಂತಕರು ಅಗ್ರಹಾರದ ಕೇರಿಯೆಡೆಗೆ ನಡೆದು ಅಲ್ಲಿನ ಜನರಿಗೆ ‘ದಲಿತ ದೀಕ್ಷೆ’ಯನ್ನು ನೀಡಬೇಕು. ‘ತಾವು ಜಾತೀಯವಾದಿಗಳಲ್ಲ’ ಎನ್ನುವುದನ್ನು ನಿರೂಪಿಸಲು ರಾಜಕಾರಣಿಗಳು ದಲಿತರ ಕೇರಿಗೆ ಹೋಗಿ ಊಟ ಮಾಡುವುದಲ್ಲ. ದಲಿತರನ್ನು ತಮ್ಮ ಅಗ್ರಹಾರಕ್ಕೆ ಕರೆಸಿಕೊಂಡು, ತಮ್ಮ ಮನೆಬಾಗಿಲನ್ನು ಅವರಿಗೆ ತೆರೆದು ಅವರ ಜೊತೆಗೆ ಜೊತೆಯಾಗಿ ಉಣ್ಣಬೇಕು. ಜಾತೀಯತೆಯನ್ನು ನಿವಾರಿಸಿ, ಜಾತ್ಯತೀತತೆಯನ್ನು ಪಸರಿಸುವ ಯೋಗ್ಯವಾದ ಮಾರ್ಗ ಇದು.
ಪೇಜಾವರಶ್ರೀಗಳು ದಲಿತ ಕೇರಿಗೆ ಹೋಗಿ, ಅಲ್ಲಿ ದಲಿತರ ಕೈಯಿಂದ ತಮ್ಮ ಪಾದವನ್ನು ತೊಳೆಸಿದಾಕ್ಷಣ ದಲಿತರಿಗೆ ಸಮಾನತೆ ಸಿಗುವುದಿಲ್ಲ. ಪೇಜಾವರ ಶ್ರೀಗಳು ದಲಿತರ ಪಾದ ತೊಳೆಯುವುದರಿಂದಷ್ಟೇ ಅದು ಸಾಧ್ಯವಾಗಬಹುದು. ತನ್ನ ಧರ್ಮೀಯರು ಶತಶತಮಾನಗಳಿಂದ ದಲಿತರಿಗೆ ಮಾಡಿದ ಅನ್ಯಾಯ, ಶೋಷಣೆಯ ಪಾಪ ಆ ಮೂಲಕ ಒಂದಿಷ್ಟು ತೊಳೆದು ಹೋಗಬಹುದು. ‘ಈವರೆಗೆ ನೀವು ನಮ್ಮ ಪಾದ ತೊಳೆದಿರಿ, ಇಂದು ನಿಮ್ಮ ಪಾದ ನಾನು ತೊಳೆಯುವೆ’ ಎನ್ನುವ ಅದ್ಭುತ ಸಂದೇಶವನ್ನು ಪೇಜಾವರಶ್ರೀಗಳು ಈ ಮೂಲಕ ಶೋಷಿತ ವರ್ಗಕ್ಕೆ ನೀಡಿದಂತಾಗುತ್ತದೆ. ಈಗಾಗಲೇ ಶತಶತಮಾನಗಳಿಂದ ಪಾದ ತೊಳೆಯುವ ಕೆಲಸವನ್ನೇ ಮಾಡಿಕೊಂಡು ಬಂದಿರುವ ದಲಿತರ ಕೈಯಲ್ಲಿ ಪೇಜಾವರಶ್ರೀಗಳು ಮತ್ತೆ ಪಾದ ತೊಳೆಸಿದರೆ ಅದು ‘ಜಾತ್ಯತೀತತೆ’ ಹೇಗಾಗುತ್ತದೆ?. ಸ್ವಾಮೀಜಿಗಳು ಶ್ರೀಸಾಮಾನ್ಯನ ಪಾದ ತೊಳೆಯುವುದೇ? ಎಂದು ಅವರು ಕೀಳರಿಮೆ ಮಾಡಿಕೊಳ್ಳಬೇಕಾಗಿಲ್ಲ.
ಸಾಕ್ಷಾತ್ ಶ್ರೀ ಕೃಷ್ಣ ಪರಮಾತ್ಮನೇ ತನ್ನ ಭಕ್ತರ ಪಾದವನ್ನು ತೊಳೆದ ಉದಾಹರಣೆ ಪುರಾಣದಲ್ಲಿದೆ. ಜೀಸಸ್ ಸಾಯುವ ಮುನ್ನ ತನ್ನ ಅನುಯಾಯಿಗಳ ಪಾದವನ್ನು ತೊಳೆದ ಕತೆ ಬೈಬಲ್ನಲ್ಲಿ ಬರುತ್ತದೆ. ಅದನ್ನೇ ಮಾದರಿಯಾಗಿಟ್ಟುಕೊಂಡು ಇಂದಿಗೂ ಕ್ರೈಸ್ತರ ಪರಮೋಚ್ಚ ಗುರು ಪೋಪ್, ವರ್ಷಕ್ಕೊಮ್ಮೆ ಕ್ರೈಸ್ತ ಧರ್ಮೀಯರ ಪಾದವನ್ನು ತೊಳೆಯುತ್ತಾರೆ. ಎಲ್ಲ ಚರ್ಚುಗಳಲ್ಲೂ ಇದನ್ನು ಅನುಸರಿಸುತ್ತಾರೆ. ಅದನ್ನು ಶ್ರೇಷ್ಠವೆಂದು ಬಗೆಯುತ್ತಾರೆ. ಹೀಗಿರುವಾಗ, ಶತಶತಮಾನಗಳಿಂದ ತಮ್ಮಿಂದ ಶೋಷಿತರಾಗಿರುವ ದಲಿತ ಅನುಯಾಯಿಗಳ ಪಾದವನ್ನು ಪೇಜಾವರಶ್ರೀಗಳು ತೊಳೆದರೆ ಅವರು ಶ್ರೇಷ್ಠರಾಗುತ್ತಾರೆಯೇ ಹೊರತು ಕೀಳಾಗುವುದಿಲ್ಲ. ಮಾತ್ರವಲ್ಲ, ಆ ಮೂಲಕ ದಲಿತರನ್ನು ತಮ್ಮವರನ್ನಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ ಮತ್ತು ಇತರ ಮೇಲ್ವರ್ಣೀಯರಿಗೆ ಅದು ಮಾದರಿಯಾಗುತ್ತದೆ. ತಮ್ಮ ಮನೆಗೆ ಬಂದು ಉಂಡು, ತಿಂದು ಹೋಗಿ ಮಾಧ್ಯಮಗಳಲ್ಲಿ ಸುದ್ದಿಯಾಗುವ ಮೇಲ್ವರ್ಣೀಯ ರಾಜಕಾರಣಿಗಳ ಬಗ್ಗೆ ಮೊತ್ತ ಮೊದಲು ದಲಿತರು ಜಾಗೃತರಾಗಬೇಕಾಗಿದೆ.
ಅಂತಹ ಆತಿಥ್ಯ ‘ಕೀಳುಜಾತಿ ಮನೆಯಲ್ಲಿ ಉಂಡ ರಾಜಕಾರಣಿ’ ಎಂದು ರಾಜಕಾರಣಿಯನ್ನು ಶ್ರೇಷ್ಠನಾಗಿಸುತ್ತದೆಯೇ ಹೊರತು, ದಲಿತನನ್ನು ಯಾವ ರೀತಿಯಲ್ಲೂ ಮೇಲೆತ್ತುವುದಿಲ್ಲ. ಬದಲಿಗೆ ಅಂತಹ ಘಟನೆ, ದಲಿತನನ್ನು ಕೀಳುಜಾತಿ ಎಂದು ಬಹಿರಂಗವಾಗಿ ಸಾರುತ್ತದೆ. ಆದುದರಿಂದ, ದಲಿತರ ಮನೆಯಲ್ಲಿ ವಾಸ್ತವ್ಯದ ಹೆಸರಲ್ಲಿ ದಾವಿಸಿ ಬರುವ ರಾಜಕಾರಣಿಗಳನ್ನು ದಲಿತರು ಸಂಘಟಿತರಾಗಿ ಒದ್ದೋಡಿಸಬೇಕು. ಇಂದು ಜಾತೀಯ ಹೊಲಸು ಇರುವುದು ಮೇಲ್ವರ್ಣೀಯರ ಕೇರಿಗಳಲ್ಲಿ, ಅವರ ಮನೆಯ ಡೈನಿಂಗ್ ಹಾಲ್ಗಳಲ್ಲಿ, ಅಡುಗೆ ಮನೆಗಳಲ್ಲಿ. ಆದುದರಿಂದ ದಲಿತರನ್ನು ತಮ್ಮ ಅಗ್ರಹಾರಕ್ಕೆ, ಮನೆಗೆ ಕರೆದು ಅವರಿಗೆ ಆತಿಥ್ಯ ನೀಡಿ ತಮ್ಮ ಜಾತೀಯ ಹೊಲಸನ್ನು ತೊಳೆದುಕೊಂಡು ಮೇಲ್ವರ್ಣೀಯರು ಕಳಂಕದಿಂದ ಮುಕ್ತರಾಗಬೇಕು.
ಇದೇ ಸಂದರ್ಭದಲ್ಲಿ ದೇವಾಲಯ ಪ್ರವೇಶಕ್ಕೂ ಇದು ಅನ್ವಯಿಸುತ್ತದೆ. ಜಗತ್ತಿನ ಎಲ್ಲ ಧರ್ಮಗಳು ತಮ್ಮ ತಮ್ಮ ಧರ್ಮೀಯರನ್ನು ಮಸೀದಿ, ಇಗರ್ಜಿ, ಆಲಯಗಳಿಗೆ ಕೈ ಬೀಸಿ ಕರೆಯುತ್ತಿದ್ದರೆ, ವೈದಿಕ ಧರ್ಮ ಮಾತ್ರ, ದಲಿತರನ್ನು ದೇವಸ್ಥಾನದೊಳಗೆ ಪ್ರವೇಶಿಸಬೇಡಿ ಎಂದು ಹೇಳುತ್ತದೆ. ದೇವಸ್ಥಾನದೊಳಗೆ ಪ್ರವೇಶ ನಿರಾಕರಣೆಯ ಅರ್ಥವೇ, ‘ನೀವು ನಮ್ಮ ಧರ್ಮೀಯರಲ್ಲ’ ಎನ್ನುವುದು. ‘ಎಲ್ಲಿ ತಮ್ಮ ಸ್ವಾಭೀಮಾನಕ್ಕೆ ಧಕ್ಕೆಯಿದೆಯೋ ಅಲ್ಲಿ ತಮ್ಮ ಚಪ್ಪಲಿಯನ್ನೂ ಬಿಡಬಾರದು’ ಎಂದು ಅಂಬೇಡ್ಕರ್ ಹೇಳಿರುವಾಗ, ಗೋಗರೆದು, ಒತ್ತಾಯಿಸಿ ತಮ್ಮದಲ್ಲದ, ತಮ್ಮ ಹಿತಾಸಕ್ತಿಯನ್ನು ಕಾಪಾಡದ ಒಂದು ಸಿದ್ಧಾಂತವನ್ನು ಅಪ್ಪಿಕೊಳ್ಳುವುದೆಂದರೆ ಆತ್ಮಹತ್ಯೆಯೆಡೆಗೆ ಸಾಗಿದಂತೆ.
ಆದುದರಿಂದ ಮೇಲ್ವರ್ಣೀಯರ ‘ಜಾತಿ ವಿರೋಧಿ ಪ್ರಹಸನವೂ’ ಪರೋಕ್ಷವಾಗಿ ಜಾತೀಯತೆಯನ್ನು ವೈಭವೀಕರಿಸುವ ಸಂಚು ಎನ್ನುವುದನ್ನು ದಲಿತರು ಅರ್ಥ ಮಾಡಿಕೊಂಡು ಅಂತಹ ಯಾವುದೇ ಪ್ರಹಸನಗಳನ್ನು ಬಹಿರಂಗವಾಗಿ ವಿರೋಧಿಸಬೇಕು. ಈ ದೇಶದ ದಲಿತರಿಗೆ ಬಿಡುಗಡೆಯನ್ನು ಶಿಕ್ಷಣವಷ್ಟೇ ನೀಡಬಹುದೇ ಹೊರತು, ಯಾವುದೇ ವೈದಿಕ ದೇವಾಲಯಗಳು ನೀಡಲಾರದು ಎನ್ನುವುದನ್ನು ಇನ್ನಾದರೂ ಅರ್ಥಮಾಡಿಕೊಳ್ಳಬೇಕು.