ಸಾಲ ಮರುಪಾವತಿ ಮಾಡುತ್ತೇನೆಂದು ಮಲ್ಯ ತಿಳಿಸಿಲ್ಲ: ಎಸ್ಬಿಐ ಅಧ್ಯಕ್ಷ ರಜನೀಶ್
ಮುಂಬೈ, ಡಿ.12: ಬ್ಯಾಂಕ್ಗಳಿಗೆ ಪಾವತಿಸಬೇಕಿರುವ 9 ಸಾವಿರ ಕೋಟಿ ರೂ. ಸಾಲವನ್ನು ಮರುಪಾವತಿ ಮಾಡುವೆನೆಂದು ವಿಜಯ್ ಮಲ್ಯ ನೇರವಾಗಿ ಬ್ಯಾಂಕ್ಗಳಿಗೆ ತಿಳಿಸಿಲ್ಲ ಎಂದು ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ.
ಬ್ಯಾಂಕ್ಗಳಿಗೆ ಪಾವತಿಸಬೇಕಿರುವ ಅಸಲು ಹಣವನ್ನು ಸಂಪೂರ್ಣ ಪಾವತಿಸಲು ಸಿದ್ಧನಿದ್ದೇನೆ. ಈ ಹಣವನ್ನು ಸ್ವೀಕರಿಸಬೇಕೆಂದು ಬ್ಯಾಂಕ್ಗಳಿಗೆ ಹಾಗೂ ಸರಕಾರಕ್ಕೆ ವಿನಮ್ರ ಕೋರಿಕೆ ಸಲ್ಲಿಸುತ್ತಿದ್ದೇನೆ ಎಂದು ಕಳೆದ ವಾರ ವಿಜಯ್ ಮಲ್ಯ ಟ್ವೀಟ್ ಮಾಡಿದ್ದರು. ಆದರೆ ಮಲ್ಯರಿಂದ ಸಾಲ ಮರುಪಾವತಿಯ ಯಾವುದೇ ಕೊಡುಗೆ ಬ್ಯಾಂಕ್ಗಳಿಗೆ ಲಭಿಸಿಲ್ಲ ಎಂದು ರಜನೀಶ್ ಕುಮಾರ್ ತಿಳಿಸಿದ್ದಾರೆ.
ಇದೀಗ ಮಲ್ಯರ ಗಡೀಪಾರಿಗೆ ನ್ಯಾಯಾಲಯ ಆದೇಶ ನೀಡಿರುವುದರಿಂದ ಸಾಲ ವಸೂಲಿ ಮಾಡುವ ಬಗ್ಗೆ ಬ್ಯಾಂಕ್ಗಳಿಗೆ ವಿಶ್ವಾಸ ಮೂಡಿದೆ. ಹಣ ವಂಚಿಸಿ ಇನ್ನೊಂದು ದೇಶಕ್ಕೆ ಓಡಿ ಹೋಗಲಾಗದು ಎಂಬ ಸಂದೇಶ ಈ ಆದೇಶದಿಂದ ಸ್ಪಷ್ಟವಾಗಿದೆ .ವಿಜಯ್ ಮಲ್ಯ ಪ್ರಕರಣದಲ್ಲಿ ಸರಕಾರದ ಪ್ರಯತ್ನ ಪ್ರಶಂಸನೀಯವಾಗಿದೆ ಎಂದವರು ಹೇಳಿದ್ದಾರೆ.
Next Story