ಗುಣಮಟ್ಟಕ್ಕೆ ಅಪಾಯವಾಗುವ ಕಲಿಕಾ ಫಲಿತಾಂಶ ಮಾನದಂಡ
ಶಿಕ್ಷಣ ಹಕ್ಕು ಕಾಯ್ದೆಯ ವಿರುದ್ಧದ ಮುಖ್ಯ ಟೀಕೆ ಎಂದರೆ, ಇದು ಗುಣಮಟ್ಟದ ಬಗ್ಗೆ ಏನನ್ನೂ ನಿರ್ದಿಷ್ಟವಾಗಿ ಹೇಳಿಲ್ಲ ಎನ್ನುವುದು. ಶಾಲೆಗಳು ಅನುಸರಿಸಬೇಕಾದ ಎಲ್ಲ ಗುಣಮಟ್ಟವನ್ನು ಇದು ಸೂಚಿಸಿದೆ. ಅಂದರೆ ಗರಿಷ್ಠ ವಿದ್ಯಾರ್ಥಿ ಶಿಕ್ಷಕ ಅನುಪಾತ, ವಿದ್ಯಾರ್ಥಿ- ಕೊಠಡಿ ಅನುಪಾತ, ಕನಿಷ್ಠ ಕೆಲಸದ ದಿನಗಳು, ಸರ್ವಋತು ಕಟ್ಟಡ, ಕುಡಿಯುವ ನೀರಿನ ವ್ಯವಸ್ಥೆ, ಆವರಣಗೋಡೆ, ಆಟದ ಮೈದಾನ ಹೀಗೆ ಎಲ್ಲ ಅಂಶಗಳನ್ನು ಸ್ಪಷ್ಟಪಡಿಸಿದೆ. ಆದರೆ ಕಲಿಕಾ ಫಲಿತಾಂಶದ ಬಗ್ಗೆ ಇದರಲ್ಲಿ ಏನನ್ನೂ ಸೂಚಿಸಿಲ್ಲ.
ಶಾಲೆಗಳಲ್ಲಿ ಕಲಿಕಾ ಫಲಿತಾಂಶವನ್ನು ವಾರ್ಷಿಕವಾಗಿ ಅಳೆಯುವ ಹೊಸ ವ್ಯವಸ್ಥೆ ಆರಂಭಿಸುವುದಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ. ‘‘ತರಗತಿ ಹಾಗೂ ವಿಷಯವಾರು ಕನಿಷ್ಠ ಕಲಿಕಾ ಮಾನದಂಡದ ಆಧಾರದಲ್ಲಿ ಫಲಿತಾಂಶವನ್ನು ಅಳೆಯುವುದು ಕೇಂದ್ರದ ಉದ್ದೇಶ’’ ಎಂದು ಸ್ಪಷ್ಟಪಡಿಸಿದ್ದಾರೆ. ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯ್ದೆ-2009ರ ಅನ್ವಯ ರೂಪಿಸಿದ ಕೇಂದ್ರೀಯ ನಿಯಮಾವಳಿ ಅನ್ವಯ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ, ಆದರೆ ಮೌಲ್ಯಮಾಪನ ಪರೀಕ್ಷೆ ಆಧರಿತ ಇಂಥ ವ್ಯವಸ್ಥೆಗೆ ಹೆಚ್ಚು ಒತ್ತು ನೀಡುವುದು, ಶಿಕ್ಷಣ ಗುಣಮಟ್ಟ ಸುಧಾರಣೆಗೆ ನೆರವಾಗದು ಎನ್ನುವುದು ಶಿಕ್ಷಣ ತಜ್ಞರು ಹಾಗೂ ಕಾರ್ಯಕರ್ತರ ಅಭಿಪ್ರಾಯ.
ಜನವರಿ 16ರಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಕಲಿಕಾ ಫಲಿತಾಂಶ ಅಳೆಯುವ ಬಗ್ಗೆ ಕರಡು ಸಿದ್ಧಪಡಿಸಿದೆ. ಇದು 1ರಿಂದ 8ನೆ ತರಗತಿವರೆಗಿನ ಮಕ್ಕಳ ಕನಿಷ್ಠ ಸಾಧನೆಗೆ ಮಾನದಂಡವನ್ನು ನಿಗದಿಪಡಿಸಲಾಗಿದೆ. ದೇಶದಲ್ಲಿ ಕಲಿಕಾ ಗುಣಮಟ್ಟ ಗಣನೀಯವಾಗಿ ಕುಸಿಯುತ್ತಿರುವ ಬಗೆಗಿನ ಸಮೀಕ್ಷಾ ವರದಿಗಳ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ ಈ ಕರಡು ಸಿದ್ಧಪಡಿಸಿದೆ. ಇದು ಮುಖ್ಯವಾಗಿ ಹಿಂದಿ, ಇಂಗ್ಲಿಷ್ ಹಾಗೂ ಉರ್ದು ಭಾಷೆಯನ್ನು ಒಳಗೊಂಡಿದೆ. ಗಣಿತ, ಪರಿಸರ ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ಹೀಗೆ ನಾಲ್ಕು ವಿಷಯಗಳು ಸೇರಿವೆ. ಜನವರಿ 31ರೊಳಗೆ ಈ ಬಗ್ಗೆ ಅಭಿಪ್ರಾಯ ನೀಡುವಂತೆ ಮನವಿ ಮಾಡಿದೆ. ಹೀಗೆ ಸ್ವೀಕರಿಸಿದ ಅಭಿಪ್ರಾಯದ ಆಧಾರದಲ್ಲಿ, ಈ ಕರಡು ದಾಖಲೆಯನ್ನು ಅಂತಿಮಪಡಿಸಿ, ಕೇಂದ್ರೀಯ ಕಾಯ್ದೆಯ ನಿಯಮಾವಳಿಯಲ್ಲಿ ಸೇರಿಸಲಾಗುತ್ತದೆ.
ಇಲ್ಲಿ ಸಂಶಯಕ್ಕೆ ಕಾರಣವಾಗಿರುವ ಅಂಶವೆಂದರೆ, ಫಲಿತಾಂಶವನ್ನು ಹೇಗೆ ಅಳೆಯಲಾಗುತ್ತದೆ ಎನ್ನುವುದು. ಈ ಕರಡು ದಾಖಲೆಯಲ್ಲಿ ಕೆಲ ಧನಾತ್ಮಕ ಅಂಶಗಳನ್ನೂ ಶಿಕ್ಷಣ ತಜ್ಞರು ಗುರುತಿಸಿದ್ದಾರೆ. ಉದಾಹರಣೆಗೆ ಕಲಿಕಾ ಪ್ರಕ್ರಿಯೆಯನ್ನು ಶಿಕ್ಷಕ ಕೇಂದ್ರೀಕೃತ ವ್ಯವಸ್ಥೆಯಾಗಿ ರೂಪಿಸಲಾಗಿದೆ.
ಕಲಿಕಾ ವಿಧಾನ
ಕರಡು ದಾಖಲೆಯ ಅನ್ವಯ ಪ್ರತೀ ತರಗತಿಗೆ ವಿದ್ಯಾರ್ಥಿಗಳ ಕೌಶಲವನ್ನು ಪರಿಗಣಿಸಲಾಗುತ್ತದೆ. ಇದರ ಜತೆಗೆ ಶಿಕ್ಷಕರ ಬೋಧನಾ ವಿಧಾನವನ್ನೂ ಕಲಿಕಾ ಫಲಿತಾಂಶ ಅಳೆಯಲು ಬಳಸಲಾಗುತ್ತದೆ. ಉದಾಹರಣೆಗೆ ಐದನೆ ತರಗತಿ ವಿದ್ಯಾರ್ಥಿಯೊಬ್ಬನಿಗೆ ಮುಂಜಾನೆಯ ಅಸೆಂಬ್ಲಿಗೆ ಆಯ್ದ ವಿಷಯಗಳ ಬಗ್ಗೆ ಭಾಷಣ ಸಿದ್ಧಪಡಿಸಲು ಅಥವಾ ಚರ್ಚೆಯಲ್ಲಿ ಭಾಗವಹಿಸಲು ಸೂಚಿಸುವುದು. ಇಲ್ಲದಿದ್ದರೆ, ಇಂಗ್ಲಿಷ್ ಕಥಾಪುಸ್ತಕವನ್ನು, ಸುದ್ದಿ ಅಥವಾ ಶೀರ್ಷಿಕೆ, ಜಾಹೀರಾತುಗಳನ್ನು ಓದಲು ಹೇಳುವುದು ಇಲ್ಲವೇ ಆ ಬಗ್ಗೆ ಮಾತನಾಡಲು ಸೂಚಿಸುವುದು ಮತ್ತು ಕಿರು ಪ್ಯಾರಾ ಬರೆಯಲು ಹೇಳುವುದು.
‘‘ಪಠ್ಯದ ನಿರೀಕ್ಷೆಯು, ಮಗು ಏನನ್ನು ಕಲಿಯಬೇಕು ಎನ್ನುವುದನ್ನು ವ್ಯಾಖ್ಯಾನಿಸುತ್ತದೆ. ಕಲಿಕಾ ಅವಧಿಯಲ್ಲಿ ಮಗು ಈ ಕೌಶಲವನ್ನು ಹೇಗೆ ರೂಢಿಸಿಕೊಂಡಿದೆ ಎನ್ನುವುದನ್ನು ಇದು ವಿವರಿಸುತ್ತದೆ. ಪಠ್ಯದ ನಿರೀಕ್ಷೆಯ ಮಾನದಂಡದಿಂದ ಕಲಿಕಾ ಫಲಿತಾಂಶವನ್ನು ಅಳೆಯುವುದು ನಿರ್ದಿಷ್ಟ ಗುರಿಯನ್ನು ಸಾಧಿಸಲಾಗಿದೆಯೇ ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇದನ್ನು ಗುಣಮಟ್ಟದ ಮೌಲ್ಯಮಾಪನದ ಮಾನದಂಡ ಎಂದು ಪರಿಗಣಿಸಲಾಗುತ್ತದೆ.
ಇದು ಅಶಕ್ತತೆ ಹಾಗೂ ಅಂಗವೈಕಲ್ಯ ಕಾರಣದಿಂದ ವಿಶೇಷ ಶೈಕ್ಷಣಿಕ ಅಗತ್ಯತೆ ಇರುವ ಮಕ್ಕಳಿಗೆ ಸೂಕ್ತ ಸಲಹೆಗಳನ್ನು ಕೂಡಾ ಒಳಗೊಂಡಿದೆ.
ಗುಣಮಟ್ಟ ಮತ್ತು ಫಲಿತಾಂಶ
ಶಿಕ್ಷಣ ಹಕ್ಕು ಕಾಯ್ದೆಯ ವಿರುದ್ಧದ ಮುಖ್ಯ ಟೀಕೆ ಎಂದರೆ, ಇದು ಗುಣಮಟ್ಟದ ಬಗ್ಗೆ ಏನನ್ನೂ ನಿರ್ದಿಷ್ಟವಾಗಿ ಹೇಳಿಲ್ಲ ಎನ್ನುವುದು. ಶಾಲೆಗಳು ಅನುಸರಿಸಬೇಕಾದ ಎಲ್ಲ ಗುಣಮಟ್ಟವನ್ನು ಇದು ಸೂಚಿಸಿದೆ. ಅಂದರೆ ಗರಿಷ್ಠ ವಿದ್ಯಾರ್ಥಿ ಶಿಕ್ಷಕ ಅನುಪಾತ, ವಿದ್ಯಾರ್ಥಿ- ಕೊಠಡಿ ಅನುಪಾತ, ಕನಿಷ್ಠ ಕೆಲಸದ ದಿನಗಳು, ಸರ್ವಋತು ಕಟ್ಟಡ, ಕುಡಿಯುವ ನೀರಿನ ವ್ಯವಸ್ಥೆ, ಆವರಣಗೋಡೆ, ಆಟದ ಮೈದಾನ ಹೀಗೆ ಎಲ್ಲ ಅಂಶಗಳನ್ನು ಸ್ಪಷ್ಟಪಡಿಸಿದೆ. ಆದರೆ ಕಲಿಕಾ ಫಲಿತಾಂಶದ ಬಗ್ಗೆ ಇದರಲ್ಲಿ ಏನನ್ನೂ ಸೂಚಿಸಿಲ್ಲ.
ಖಾಸಗಿ ಶಾಲೆಗಳು, ಅದರಲ್ಲೂ ಮುಖ್ಯವಾಗಿ ಕಾಯ್ದೆಯ ಅನ್ವಯ ಮೂಲಸೌಕರ್ಯ ಹಾಗೂ ಶಿಕ್ಷಕರ ಅರ್ಹತೆ ಮಾನದಂಡವನ್ನು ಅನುಸರಿಸದ ಸಂಸ್ಥೆಗಳಲ್ಲಿ ಕಲಿಕಾ ಫಲಿತಾಂಶವನ್ನು ಸೇರಿಸುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗಿಂತ ಉತ್ತಮ ಸಾಧನೆಯನ್ನು ಅವರು ತೋರುತ್ತಾರೆ ಎನ್ನುವುದು ದೊಡ್ಡ ಮಟ್ಟದ ಸಮೀಕ್ಷೆಗಳ ಮೌಲ್ಯಮಾಪನದಿಂದ ತಿಳಿಯುತ್ತದೆ. ಶಾಲೆಗಳಲ್ಲಿ ಮೂಲಸೌಕರ್ಯದ ಲಭ್ಯತೆಗಿಂತ ಫಲಿತಾಂಶವೇ ಮುಖ್ಯ ಎನ್ನುವುದು ಅವರ ವಾದ.
ಆದರೆ ಶಿಕ್ಷಣ ತಜ್ಞೆ ಅನಿತಾ ರಾಮ್ಪಾಲ್ ಹೇಳುವಂತೆ, ‘‘ಶಾಲೆಗಳಲ್ಲಿ ಕಲಿಕೆ ಮುಖ್ಯವಾಗಿ ಲಭ್ಯವಿರುವ ಕಲಿಕಾ ಅವಕಾಶಗಳನ್ನು ಅವಲಂಬಿಸಿರುತ್ತದೆ. ಶಿಕ್ಷಣ ಹಕ್ಕು ಕಾಯ್ದೆಯ 5ನೆ ಅಧ್ಯಾಯದಲ್ಲಿ ಮಕ್ಕಳಿಗೆ ಯಾವ ಬಗೆಯಲ್ಲಿ ಬೋಧನೆ ಮಾಡಬೇಕು ಹಾಗೂ ಕಲಿಕೆಗೆ ಎಂಥ ವಾತಾವರಣ ನಿರ್ಮಿಸಿಕೊಡಬೇಕು ಎನ್ನುವುದನ್ನು ವಿವರಿಸಲಾಗಿದೆ. ಈ ಕಲಿಕೆಯಲ್ಲಿ ಮೂಲಸೌಕರ್ಯ ಪ್ರಮುಖ ಸಾಧನವಾಗುತ್ತದೆ.’’
ದೇಶದ ವಿವಿಧ ಶಿಕ್ಷಣ ಜಾಲ, ಶಿಕ್ಷಕ ಸಂಘಗಳು, ಜನ ಚಳವಳಿಗಳು ಹಾಗೂ ಶಿಕ್ಷಣ ತಜ್ಞರನ್ನು ಒಳಗೊಂಡ ‘ಶಿಕ್ಷಣ ಹಕ್ಕಿನ ವೇದಿಕೆ’ ಎಂಬ ಸಂಘಟನೆಯ ಅಂಬರೀಷ್ ರಾಯ್, ‘‘ಬೋಧನೆ ಮತ್ತು ತರಬೇತಿ, ಲಭ್ಯವಿರುವ ಸ್ಥಳಾವಕಾಶ ಮತ್ತು ಇತರ ಸೌಲಭ್ಯಗಳು ಹಾಗೂ ಮೂಲಸೌಕರ್ಯಗಳು ಎಲ್ಲವನ್ನೂ ಸಂಪರ್ಕಿಸಬೇಕು ಹಾಗೂ ಇವೆಲ್ಲವೂ ಗುಣಮಟ್ಟಕ್ಕೆ ಪೂರಕವಾಗುತ್ತವೆ’’ ಎಂದು ಅಭಿಪ್ರಾಯಪಡುತ್ತಾರೆ.
‘‘ಶಿಕ್ಷಣ ಹಕ್ಕು ಕಾಯ್ದೆಯ ಅನ್ವಯ ಕಲಿಕಾ ಫಲಿತಾಂಶವನ್ನು ನಿಯಮಾವಳಿಯಾಗಿ ರೂಪಿಸಿದರೆ ಅದು ದೊಡ್ಡ ಪ್ರಮಾಣದ ಪರೀಕ್ಷಾ ವ್ಯವಸ್ಥೆಗೆ ಕಾರಣವಾಗುತ್ತದೆ ಹಾಗೂ ಶಿಕ್ಷಕರು ಆ ಮಾನದಂಡಕ್ಕೆ ಅನುಗುಣವಾಗಿ ಬೋಧಿಸುತ್ತಾರೆ ಹಾಗೂ ಪರೀಕ್ಷಿಸುತ್ತಾರೆ. 1992ರಲ್ಲಿ ಆರಂಭಿಸಿದ ಕನಿಷ್ಠ ಕಲಿಕಾ ಮಟ್ಟದಿಂದ ಆಗಿರುವುದು ಇದೇ ಸಾಧನೆ’’ ಎನ್ನುವುದು ರಾಮ್ಪಾಲ್ ಅವರ ವಿಶ್ಲೇಷಣೆ.
ಪ್ರಕ್ರಿಯೆಯೂ ಪ್ರಮುಖ
ಶಿಕ್ಷಕರು ಹಾಗೂ ಚಳವಳಿಗಾರರು ಸ್ವಲ್ಪಮಟ್ಟಿಗೆ ಇಂಥ ಕಳವಳ ವ್ಯಕ್ತಪಡಿಸುತ್ತಿರುವ ನಡುವೆಯೇ, ಈ ಕರಡು ದಾಖಲೆಯು ಮುಖ್ಯವಾಗಿ ಕಲಿಕಾ ಪ್ರಕ್ರಿಯೆಗೆ ಒತ್ತು ನೀಡುತ್ತದೆ. ಹಾಗೂ ಮಕ್ಕಳ ನಿರೀಕ್ಷಿತ ಫಲಿತಾಂಶಕ್ಕೆ ಶಿಕ್ಷಕರು ನೆರವಾಗುವಂತೆ ಮಾಡಲು ಶಿಕ್ಷಕರಿಗೂ ಅಗತ್ಯ ಚಟುವಟಿಕೆಗಳಿಗೆ ಗಮನ ಹರಿಸಿದೆ.
‘‘ಕಲಿಕೆ ಪ್ರಕ್ರಿಯೆಯನ್ನು ವಿವರಿಸದೆ ನಾವು ಕಲಿಕೆ ಬಗ್ಗೆ ಮಾತನಾಡಲಾಗದು’’ ಎಂದು ರಾಮ್ಪಾಲ್ ಸ್ಪಷ್ಟಪಡಿಸುತ್ತಾರೆ. ‘‘ಮಕ್ಕಳು ವಿವಿಧ ಚಟುವಟಿಕೆಗಳು, ಸಂಶೋಧನೆ ಹಾಗೂ ಶೋಧನೆಗಳ ಮೂಲಕ ಕಲಿಯಬೇಕಾದರೆ, ಅದಕ್ಕೆ ಪೂರಕವಾದ ಮತ್ತು ಸೂಕ್ತ ಮೌಲ್ಯಮಾಪನದ ವಾತಾವರಣ ಇರಬೇಕು.ಕರಡು ದಾಖಲೆಯ ಒಂದು ಧನಾತ್ಮಕ ಅಂಶವೆಂದರೆ, ಇಂಥ ಕಲಿಕಾ ಪ್ರಕ್ರಿಯೆಗಳನ್ನು ವಿವರಿಸಿರುವುದು. ಆದರೆ ಇವು ತೀರಾ ಸಾಂಪ್ರದಾಯಿಕ ಹಾಗೂ ಸೂಕ್ತವಾಗಿ ಕಾರ್ಯ ನಿರ್ವಹಿಸಲಾರದವು’’ ಎಂದು ಅವರು ಅಭಿಪ್ರಾಯಪಡುತ್ತಾರೆ. ಇಷ್ಟಾಗಿಯೂ ಪ್ರಕ್ರಿಯೆ ಆಧರಿತ ಫಲಿತಾಂಶವನ್ನು ಅಳೆಯಲು ಮುಂದಾಗಿರುವುದು ಸಂತೋಷದ ವಿಚಾರ ಎಂದು ಹೇಳುತ್ತಾರೆ.
ವಿವಿಧ ಅಧ್ಯಯನಗಳಿಂದ ಸ್ಪಷ್ಟವಾಗಿ ತಿಳಿದುಬರುವಂತೆ, ದೇಶದಲ್ಲಿ ಶಾಲಾಮಕ್ಕಳ ಕಲಿಕಾ ಗುಣಮಟ್ಟ ಕುಸಿಯುತ್ತಿದೆ ಅಥವಾ ಸುಧಾರಣೆಯ ಲಕ್ಷಣಗಳು ಕಾಣಿಸುತ್ತಿಲ್ಲ. ಸರಕಾರಿ ಶಾಲೆಗಳ 3ನೆ ತರಗತಿ ವಿದ್ಯಾರ್ಥಿಗಳಲ್ಲಿ ಶೇ. 19ರಷ್ಟು ಮಕ್ಕಳು ಮಾತ್ರ 2ನೆ ತರಗತಿಯ ಪಠ್ಯವನ್ನು ಓದಲು ಸಮರ್ಥರಾಗಿದ್ದಾರೆ ಎನ್ನುವುದು ಲಾಭರಹಿತ ಶಿಕ್ಷಣ ಸೇವಾ ಸಂಸ್ಥೆಯಾದ ‘ಪ್ರಥಮ್’ ಸಂಘಟನೆ ಜನವರಿ 18ರಂದು ಬಿಡುಗಡೆ ಮಾಡಿದ ಇತ್ತೀಚಿನ ವಾರ್ಷಿಕ ಶಿಕ್ಷಣ ವರದಿಯಲ್ಲಿ ವಿವರಿಸಲಾಗಿತ್ತು. ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಮಂಡಳಿಯ ರಾಷ್ಟ್ರೀಯ ಸಾಧನಾ ಸಮೀಕ್ಷೆಯಲ್ಲಿ ಕಂಡುಬಂದ ಅಂಶಗಳಿಗೆ ಪ್ರಥಮ್ ವರದಿಯ ಅಂಶಗಳು ಕೂಡಾ ಬಹುತೇಕ ತಾಳೆಯಾಗುತ್ತಿವೆ.
ಶಿಕ್ಷಣ ಸ್ಥಿತಿಗತಿ ಕುರಿತ ವಾರ್ಷಿಕ ವರದಿಯಿಂದ ತಿಳಿದುಬಂದಿರುವ ಇನ್ನೊಂದು ಮಹತ್ವದ ವಿಚಾರವೆಂದರೆ, ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಸರಕಾರಿ ಶಾಲಾ ವಿದ್ಯಾರ್ಥಿಗಳಿಗಿಂತ ಉತ್ತಮ ಕಲಿಕಾ ಸಾಧನೆ ಮಾಡುತ್ತಿದ್ದಾರೆ. ಇದಕ್ಕೆ ಆರ್ಥಿಕ- ಸಾಮಾಜಿಕ ಭಿನ್ನತೆಗಳು ಕಾರಣವಾಗುತ್ತಿದೆ, ಕಲಿಕಾ ವಾತಾವರಣದ ಮೇಲೆ ಸಾಮಾಜಿಕ, ಆರ್ಥಿಕ ಅಂಶಗಳು ಪ್ರಭಾವ ಬೀರುತ್ತವೆ ಎನು್ನವುದಕ್ಕೆ ಇದು ಸ್ಪಷ್ಟ ನಿದರ್ಶನ.
‘‘ಈ ಮಾನದಂಡಗಳು ಹೇಗೆ ಬೋಧನೆಯ ಮಾಧ್ಯಮ ಅಥವಾ ಭಾಷೆಯನ್ನೇ ಅರ್ಥಮಾಡಿಕೊಳ್ಳಲಾಗದ ವಲಸೆ ಕಾರ್ಮಿಕರ ಮಕ್ಕಳ ಕಲಿಕೆಗೆ ನೆರವಾಗಬಲ್ಲವು?’’ ಎಂದು ‘ಯಂಗ್ ಲೈವ್ಸ್ ಇಂಡಿಯಾ’ ಸಂಘಟನೆಯ ರೇಣು ಸಿಂಗ್ ಪ್ರಶ್ನಿಸುತ್ತಾರೆ. ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ 2002ರಿಂದೀಚೆಗೆ ಈ ಸಂಸ್ಥೆ ಶೈಕ್ಷಣಿಕ ಪ್ರಗತಿಯ ಬಗ್ಗೆ ಅಧ್ಯಯನ ನಡೆಸುತ್ತಿದೆ.
ದೀರ್ಘಕಾಲದಲ್ಲಿ ಕಲಿಕೆಯಿಂದ ಯಾವ ಪ್ರಯೋಜನ ಆಗಿದೆ ಎಂದು ಮೌಲ್ಯಮಾಪನ ಮಾಡುವುದು ಮುಖ್ಯವೇ ವಿನಃ ಒಂದು ನಿರ್ದಿಷ್ಟ ಪರೀಕ್ಷೆಯನ್ನು ಎಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎನ್ನುವುದು ಸೂಕ್ತ ಮಾನದಂಡವಲ್ಲ.