ಉನ್ನಾವೊ ಸಂತ್ರಸ್ತೆ ತಂದೆಯ ಹತ್ಯೆ: ಕುಲದೀಪ್ ಸೆಂಗರ್ ವಿರುದ್ಧ ದೂರು ದಾಖಲು
ಹೊಸದಿಲ್ಲಿ, ಆ.13: ಉತ್ತರ ಪ್ರದೇಶದ ಉನ್ನಾವೊದ ಅತ್ಯಾಚಾರ ಸಂತ್ರಸ್ತೆಯ ತಂದೆಯನ್ನು ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಸುಳ್ಳು ಆರೋಪ ಹೊರಿಸಿ ನಂತರ ಜೈಲಿನಲ್ಲಿ ಅವರ ಹತ್ಯೆಗೆ ಕಾರಣವಾದ ಹಿನ್ನೆಲೆಯಲ್ಲಿ ಬಿಜೆಪಿಯ ಉಚ್ಛಾಟಿತ ಶಾಸಕ ಕುಲದೀಪ್ ಸೆಂಗರ್, ಅವರ ಸಹೋದರ ಅತುಲ್ ಸೆಂಗರ್ ಹಾಗೂ ಉತ್ತರ ಪ್ರದೇಶದ ಮೂವರು ಪೊಲೀಸ್ ಸಿಬ್ಬಂದಿ ಮತ್ತು ಇತರ ಐದು ಮಂದಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ದಿಲ್ಲಿ ನ್ಯಾಯಾಲಯ ಮಂಗಳವಾರ ಆದೇಶ ನೀಡಿದೆ.
ಈ ಆದೇಶ ನೀಡಿದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಧರ್ಮೇಶ್ ಶರ್ಮಾ, ಸಂತ್ರಸ್ತೆಯ ತಂದೆಯನ್ನು ಸುಳ್ಳು ಆರೋಪದಲ್ಲಿ ಬಂಧಿಸಲಾಯಿತು ನಂತರ ಅವರು ನ್ಯಾಯಾಂಗ ಬಂಧನದಲ್ಲಿರುವಾಗ ಸಾವನ್ನಪ್ಪಿದ್ದರು. ಇದರಲ್ಲಿ ಏನೋ ಉದ್ದೇಶವಿತ್ತೇ ಎನ್ನುವ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಉಚ್ಛಾಟಿತ ಶಾಸಕ ಕಳೆದ 14 ತಿಂಗಳುಗಳಿಂದ ಜೈಲಿನಲ್ಲಿ ಬಂಧಿಯಾಗಿದ್ದಾರೆ. ಆಗಸ್ಟ್ 1ರಂದು ಅತ್ಯಾಚಾರ ಸಂತ್ರಸ್ತೆ ರಸ್ತೆ ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಈ ಪ್ರಕರಣವನ್ನು ಉತ್ತರ ಪ್ರದೇಶದಿಂದ ದಿಲ್ಲಿ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.