ಇಟಲಿಯ ವೆನಿಸ್ ಕೇರಳದಲ್ಲೇ ಇದೆ. ನೀವಿನ್ನೂ ಹೋಗಿಲ್ಲವೆ?

ಅಲೆಪಿಯಲ್ಲಿ ಭೇಟಿ ನೀಡಲು ಸಿಗುವ ಸ್ಥಳಗಳ ಪಟ್ಟಿಯೇ ಇದೆ. ಪ್ರವಾಸಿಗರು ಆಶಿಸಿದ್ದಕ್ಕಿಂತಲೂ ಹೆಚ್ಚು ಉತ್ತಮ ಸ್ಥಳಗಳು ಇಲ್ಲಿವೆ. ಪ್ರಕೃತಿ ಇಷ್ಟಪಡುವವರಿಗೆ ಅಲೆಪಿ ಕಡಲ ತೀರ, ವೆಂಬಣಡ್ ಸರೋವರ ಸೇರಿದಂತೆ ಪುರಾತನ ಪಟ್ಟಣದ ಚರ್ಚ್ ಮತ್ತು ಮನ್ನರಸಾಲ ದೇವಾಲಯವು ಸಾಂಸ್ಕೃತಿಕವಾಗಿ ಮಹತ್ವ ಪಡೆದಿದೆ.ಒಟ್ಟಾರೆ ಅಲೆಪಿ ಪ್ರವಾಸಿಗರ ಸ್ವರ್ಗ. ಪ್ರಸಿದ್ಧ ಸ್ಥಳ ಬೇಡವೆಂದಾದಲ್ಲಿ ಕುಟ್ಟನಾಡ್ ಹೊಲಗಳಲ್ಲಿ ಸುತ್ತಾಡಬಹುದು. ಅಲ್ಲದೆ ವಿಶ್ವಪ್ರಸಿದ್ಧ ಹಿನ್ನೀರು ಇಲ್ಲಿದೆ. ಇದೇ ಕಾರಣದಿಂದ ಅಲೆಪಿಯನ್ನು ಲಾರ್ಡ್ ಕರ್ಜನ್ ಪೂರ್ವದ ವೆನಿಸ್ ಎಂದಿದ್ದರು.
ಅಲೆಪಿ ಕಡಲತೀರ

ಕೋವಳಂ ಮತ್ತು ವರ್ಕಲದಂತಹ ಪ್ರಸಿದ್ಧ ಕಡಲತೀರಗಳನ್ನು ಸುತ್ತುವರಿದಿರುವ ಅಲೆಪಿ ಕಡಲತೀರ ಶಾಂತ ಪ್ರದೇಶ. ಪಟ್ಟಣದಿಂದ 30 ನಿಮಿಷದೊಳಗೆ ಇಲ್ಲಿಗೆ ಬರಬಹುದು. ಸೂರ್ಯಾಸ್ತ ನೋಡಲು ಉತ್ತಮ ಸ್ಥಳ. ಇಲ್ಲೊಂದು ಲೈಟ್ ಹೌಸ್ ಕೂಡ ಇದೆ. ಕಡಲತೀರದಲ್ಲಿ 137 ವರ್ಷ ಹಳೇ ಸೇತುವೆಯೂ ಇದೆ. ಕೇರಳದ ಪ್ರಸಿದ್ಧ ಸಮುದ್ರ ಬಂದರಾಗಿದ್ದ ದಿನಗಳ ಕುರುಹುಗಳಿವು. ಈಗ ಸಮುದ್ರ ಸೇತುವೆ ಪಾಳು ಬಿದ್ದಿದೆ.
ವೆಂಬನಡ್ ಸರೋವರ

ಭಾರತದ ಧೀರ್ಘ ಮತ್ತು ಅತೀ ಸುಂದರ ಸರೋವರಗಳಲ್ಲಿ ಒಂದು ಇದು. ಈ ಸರೋವರ ಕೊಟ್ಟಾಯಂ, ಎರ್ನಾಕುಲಂ ಮತ್ತು ಅಲೆಪಿ ಜಿಲ್ಲೆಗಳನ್ನು ಸಂಪರ್ಕಿಸುವಷ್ಟು ದೊಡ್ಡದಾಗಿದೆ. ಫೋಟೋಗ್ರಾಫರುಗಳ ಸ್ವರ್ಗವಿದು. ಹೌಸ್ ಬೋಟುಗಳು ಈ ಸರೋವರದಲ್ಲಿ ತೇಲುತ್ತದೆ. ಕುಮಾರಕಂ ಪಕ್ಷಿಧಾಮವೂ ಸರೋವರದ ತಟದಲ್ಲಿರುವ ಕಾರಣ ಪಕ್ಷಿಪ್ರೇಮಿಗಳಿಗೂ ಇಷ್ಟದ ತಾಣ. ಹಿನ್ನೀರು ಮತ್ತು ಪಕ್ಷಿ ಧಾಮ ಎರಡನ್ನೂ ನೋಡಲು ಹೌಸ್ ಬೋಟ್ ತೆಗೆದುಕೊಳ್ಳಬಹುದು. ಬೈನಾಕುಲರ್ ಇದ್ದರೆ ಇನ್ನೂ ಹೆಚ್ಚಿನ ಪಕ್ಷಿಗಳನ್ನು ನೋಡಬಹುದು.
ಸೇಂಟ್ ಮೇರಿಸ್ ಸೈರೊ

ಕ್ರಿಸ್ತ ಪೂರ್ವ 427ರಲ್ಲಿ ಸ್ಥಾಪಿಸಲಾದ ಹಳೇ ಚರ್ಚುಗಳಲ್ಲಿ ಒಂದು ಇದು. ಪೆರಿಯಾರ್ ನದಿಯ ಬದಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ದೋಣಿ ಅಥವಾ ಹೌಸ್ ಬೋಟ್ ಮೂಲಕ ಇಲ್ಲಿಗೆ ತಲುಪಬಹುದು. ಬಹಳಷ್ಟು ಹಿನ್ನೂರು ದೋಣಿಯಾನದಲ್ಲಿ ಇದನ್ನೂ ಸೇರಿಸಲಾಗುತ್ತದೆ. ಇದು ಪರ್ಶಿಯನ್, ಪೋರ್ಚುಗೀಸ್ ಮತ್ತು ಭಾರತೀಯ ವಾಸ್ತುಶಿಲ್ಪದ ಮಿಶ್ರಣ. ಪುರಾತನ ಪೈಂಟಿಂಗ್ ಮತ್ತು ವಾಸ್ತುಶಿಲ್ಪವೂ ಇಲ್ಲಿದೆ. ಒಳಗಿರುವ ಬಂಡೆಗಳ ಕೆತ್ತನೆ ಓದಲು ಮರೆಯಬೇಡಿ.
ಪಾತಿರಾಮನಲ್ ದ್ವೀಪ

ಪಾತಿರಾಮನಲ್ ದ್ವೀಪ ಪಕ್ಷಿ ಪ್ರೇಮಿಗಳಿಗೆ ಉತ್ತಮ ತಾಣ. ಹಿನ್ನೀರಿನ ನಡುವೆ ವಿಶ್ವದ ಮೂಲೆ ಮೂಲೆಗಳಿಂದ ವಲಸೆ ಹಕ್ಕಿಗಳು ಇಲ್ಲಿಗೆ ಬರುತ್ತವೆ. ಅಲೆಪಿ ಹಿನ್ನೀರಲ್ಲಿ ಹೌಸ್ ಬೋಟ್ ಪಡೆದುಕೊಂಡಿದ್ದರೆ ಇಲ್ಲಿಗೆ ಭೇಟಿ ನೀಡಲೇಬೇಕು.
ಕುಟ್ಟನಾಡ್

ಕುಟ್ಟನಾಡ್ ಅನ್ನು ಕೇರಳದ ಅಕ್ಕಿಯ ಕಣಜ ಎಂದೂ ಕರೆಯುತ್ತಾರೆ. ಅಲೆಪಿಯ ವಿಭಿನ್ನ ಆಕರ್ಷಣೆ ಇದು. ಇಲ್ಲಿನ ಹಸಿರು ಹೊಲಗಳು ಮತ್ತು ರೈತರ ಪುರಾತನ ಕೆಲಸದ ವಿಧಿ ವಿಧಾನಗಳನ್ನು ನೋಡಬಹುದು.
ಅಲೆಪಿಯ ಹಿನ್ನೀರು

ದಕ್ಷಿಣ ಭಾರತದ ಸ್ವರ್ಗ ಎಂದು ಹೇಳುವ ಒಂದು ಜಾಗ ಈ ಹಿನ್ನೀರು. ಅರೆಬಿಯನ್ ಸಮುದ್ರಕ್ಕೆ ಸಮಾಂತರವಾಗಿರುವ ಈ ಹಿನ್ನೀರು ಫೋಟೋಗ್ರಾಫರುಗಳ ಆಕರ್ಷಣೆಯ ಸ್ಥಳ. ಹೌಸ್ ಬೋಟ್ ಅಥವಾ ಸ್ಪೀಡ್ ಬೋಟ್ ಮೂಲಕ ಇದನ್ನು ವೀಕ್ಷಿಸಬಹುದು. ಶಾಲಾ ಮಕ್ಕಳು ತಮ್ಮ ದೋಣಿಗಳಲ್ಲಿ ಮನೆಗೆ ಹೋಗುವುದು, ಗ್ರಾಮಸ್ಥರು ತಮ್ಮದೇ ದೋಣಿಯನ್ನು ಸಾರಿಗೆಯಾಗಿ ಮಾಡಿಕೊಂಡಿರುವುದನ್ನು ನೋಡಬಹುದು. ಇದೇ ಕಾರಣದಿಂದ ಇದನ್ನು ಭಾರತದ ವೆನಿಸ್ ಎನ್ನುವುದು.
ಮನ್ನರಸಲ ದೇವಾಲಯ

ಇದನ್ನು ಶ್ರೀ ನಾಗರಾಜ ದೇವಾಲಯ ಎಂದೂ ಕರೆಯುತ್ತಾರೆ. ನಾಗ ದೇವರ ಈ ದೇಗುಲದಲ್ಲಿ 30,000ಕ್ಕೂ ಅಧಿಕ ಹಾವುಗಳ ಚಿತ್ರಗಳಿವೆ. ಪರಷುರಾಮ ಪೂಜಿಸಿದ ಮೇಲೆ ನಾಗರಾಜ ಪ್ರತ್ಯಕ್ಷವಾದ ಸ್ಥಳ ಎಂದು ಇದನ್ನು ಹೇಳಲಾಗುತ್ತದೆ.
ಕೃಪೆ: www.happytrips.com







