ಮಗನ ಹಂತಕನನ್ನು ಕ್ಷಮಿಸಿ, 3 ಲಕ್ಷ ರಿಯಾಲ್ ಪರಿಹಾರ ಮೊತ್ತವನ್ನೂ ತಿರಸ್ಕರಿಸಿದ ಬಡ ವೃದ್ಧ
ಬಡ ಸೂಡಾನೀಸ್ ಕುರಿಗಾಹಿ ತನ್ನ ಮಗನನ್ನು ಕೊಂದ ಪಾತಕಿಯನ್ನು ಕ್ಷಮಿಸಿದ್ದಲ್ಲದೆ, ದಾನಿಯೊಬ್ಬ ನೀಡಿದ 3,00,000 ಸೌದಿ ರಿಯಾಲನ್ನು ಸ್ವೀಕರಿಸಲು ನಿರಾಕರಿಸಿದ್ದಾನೆ.
ಅಬ್ದುಲ್ಲ ಮೊಹಮ್ಮದ್ ಅಲ್ ನುಮೈರ್ ಜೆದಾಹ್ನಲ್ಲಿ ಕುರಿಗಾಹಿಯಾಗಿ ಕೆಲಸ ಮಾಡುತ್ತಿದ್ದ. 15 ವರ್ಷಗಳ ಹಿಂದೆ ತನ್ನ ಮಗನನ್ನು ಕಳೆದುಕೊಂಡ ಮೇಲೆ ಸೂಡಾನ್ ನಗರದ ನಿಲೆ ಕರಾವಳಿ ಬಳಿ ಇರುವ ದುವೈಮ್ಗೆ ವಾಪಾಸಾಗಿದ್ದಾನೆ. ಮುಹಮ್ಮದ್ನನ್ನು ಮತ್ತೊಬ್ಬ ಆಫ್ರಿಕಾದ ಕುರಿಗಾಹಿ ಅಲ್ ಘಲಿ ಕೊಲೆ ಮಾಡಿದ್ದ. ಅಲ್ ನುಯರ್ ಸೂಡಾನಿನಲ್ಲಿ ಶಿಥಿಲ ಮಣ್ಣಿನ ಮನೆಯಲ್ಲಿ ವಾಸವಾಗಿದ್ದಾನೆ. ಸೂಡಾನ್ಗೆ ತೆರಳುವ ಮೊದಲು ಅಲ್ ನುಮೈರ್ ಜೆದ್ದಾ ನ್ಯಾಯಾಲಯದಲ್ಲಿ ಅಲ್ ಘಲಿಯ ತಲೆ ಕಡಿಯುವಂತೆ ಕೋರಿ ಮೊಕದ್ದಮೆ ದಾಖಲಿಸಿದ್ದರು. 15 ವರ್ಷ ಜೈಲು ಶಿಕ್ಷೆ ಪಡೆದ ಮೇಲೆ ಕೊಲೆಗಾರ ಮರಣದಂಡನೆ ನಿರೀಕ್ಷಿಸುತ್ತಿದ್ದ. ಜೆದ್ದಾದ ಮಾನವ ಹಕ್ಕುಗಳ ರಾಷ್ಟ್ರೀಯ ಸಮಾಜದ ನಿರ್ದೇಶಕ ಸಲೇ ಸರಾಹ್ ಅಲ್ ಗಂದಿ ಅಲ್ ಘಲಿಯ ಮರಣದಂಡನೆ ತಡೆಯಲು ಎರಡು ಕುಟುಂಬಗಳ ನಡುವೆ ಮಾತುಕತೆ ನಡೆಸುತ್ತಿದ್ದರು. ಅಲ್ ಗಂದಿ ಫೋನಿನಲ್ಲಿ ಅಲ್ ನುಮೈರ್ನನ್ನು ಸಂಪರ್ಕಿಸಿ ಕಳೆದ ರಂಜಾನಿನ ಸಮಯದಲ್ಲಿ ಮಗನ ಕೊಲೆಗಾರನನ್ನು ಕ್ಷಮಿಸುವಂತೆ ಕೇಳಿದ್ದರು. ಆರಂಭದಲ್ಲಿ ನಾನು ಮಾತುಕತೆಗೆ ಮುಂದಾಗಲಿಲ್ಲ ಮತ್ತು ಕ್ಷಮೆಗೆ ಸಿದ್ಧವಾಗಲಿಲ್ಲ ಎನ್ನುತ್ತಾರೆ ನುಮೈರ್. ಅಲ್ ಘಲಿಯ ಮರಣದಂಡನೆ ನೋಡಲು ಜೆದ್ದಾಹ್ ಗೆ ಬರುವಂತೆಯೂ ಅಲ್ ಗಂದಿ ಅವರಿಗೆ ಹೇಳಿದ್ದರು. ನಾನು ಜೆದಾಹ್ಗೆ ಹೋಗಲೂ ನಿರಾಕರಿಸಿದ್ದೆ. ಆದರೆ ಅವರು ಒತ್ತಡ ಹೇರಿದಾಗ ಆ ಪ್ರಾಮುಖ್ಯತೆ ಪಡೆದ ಘಟನೆಯನ್ನು ವೀಕ್ಷಿಸಲು ಜೆದ್ದಾಹ್ಗೆ ಹೋಗಲು ನಿರ್ಧರಿಸಿದೆ ಎನ್ನುತ್ತಾರೆ ಅಲ್ ನುಮೈರ್. ಮೂರು ತಿಂಗಳ ಹಿಂದೆ ನುಮೈರ್ ಜೆದ್ದಾಹ್ಗೆ ಬಂದಾಗ ಅಲ್ ಗಂದಿ ಅವರನ್ನು ಸ್ವಾಗತಿಸಿದ್ದರು. ಅವರ ಮನೆಯಲ್ಲೇ ನನ್ನನ್ನು ಇರಿಸಿಕೊಂಡು ಪ್ರಯಾಣದ ವೆಚ್ಚವನ್ನೂ ಭರಿಸಿದರು. ಮತ್ತೊಮ್ಮೆ ಕೊಲೆಗಾರನ ಮರಣದಂಡನೆ ತಪ್ಪಿಸುವಂತೆ ಕೇಳಿಕೊಂಡರು ಎನ್ನುತ್ತಾರೆ ಅಲ್ ನುಮೈರ್. ನಂತರ ನುಮೈರ್ನನ್ನು ನ್ಯಾಯಾಲಯದಲ್ಲಿ ಅಬ್ದುಲ್ ರೆಹಮಾನ್ ಅಲ್ ಹುಸೈನಿಯನ್ನು ಭೇಟಿಯಾಗಿ ಮರಣದಂಡನೆಯ ದಾಖಲೆಗಳನ್ನು ಪರಿಶೀಲಿಸುವಂತೆ ಹೇಳಲಾಯಿತು.
ಕೊಲೆಗಾರನ್ನು ಕ್ಷಮಿಸಲು ದಾನಿಗಳು ಅವರಿಗೆ 3 ಲಕ್ಷ ಸೌದಿ ರಿಯಾಲ್ ಚೆಕ್ ಕೊಟ್ಟಿರುವುದಾಗಿಯೂ ಅಲ್ ಗಂಧಿ ಅವರಿಗೆ ತಿಳಿಸಿದ್ದರು. ಆದರೆ ಅಲ್ ನುಮೈರ್ ಆ ಚೆಕ್ಕನ್ನೂ ನಿರಾಕರಿಸಿದರು. ಆತನ ಪತ್ನಿಯೂ ಚೆಕ್ ಬೇಡವೆಂದು ತಿರಸ್ಕರಿಸಿದ್ದಳು. ಆದರೆ ನಂತರ ಆತ ಮನಸ್ಸು ಬದಲಾಯಿಸಿದ್ದ. ತಾನು ಮತ್ತು ಪತ್ನಿ ಇಬ್ಬರೂ ಮಗನ ಕೊಲೆಗಾರನನ್ನು ಕ್ಷಮಿಸಲು ನಿರ್ಧರಿಸಿರುವುದಾಗಿ ಅಲ್ ಗಂದಿಗೆ ಅವರು ತಿಳಿಸಿದ್ದರು. ಅವರ ಬಡತನವನ್ನು ಗಮನಿಸಿ ಚೆಕ್ ಸ್ವೀಕರಿಸುವಂತೆ ಅಲ್ ಗಂದಿ ಬಹಳ ಒತ್ತಾಯಿಸಿದ್ದರು. ನನ್ನ ಮಗನ ಕೊಲೆಗಾರನನ್ನು ಕ್ಷಮಿಸಿದ್ದಕ್ಕಾಗಿ ಅಲ್ಲಾಹ್ ಕೊಡುವ ಸಂಪೂರ್ಣ ಕೊಡುಗೆ ನನಗೆ ಬೇಕು. ಅದನ್ನು ನಾನು ಭೌತಿಕ ಲಾಭದ ಜೊತೆಗೆ ಮಿಶ್ರ ಮಾಡಲು ಬಯಸುವುದಿಲ್ಲ ಎಂದು ಅಲ್ ನುಮೈರ್ ತನ್ನ ನಿರ್ಧಾರಕ್ಕೆ ಕಾರಣ ಹೇಳುತ್ತಾರೆ. ನುಮೈರ್ ನಂತರ ನ್ಯಾಯಾಲಯಕ್ಕೆ ಭೇಟಿ ನೀಡಿ ಕ್ಷಮಾದಾನದ ದಾಖಲೆಗಳಿಗೆ ಸಹಿ ಹಾಕಿದ್ದಾರೆ.
ಕೃಪೆ: http://saudigazette.com.sa/