ಮಧ್ಯಾಹ್ನದ 20 ನಿಮಿಷಗಳ ಕಿರುನಿದ್ರೆ ಹೇಗೆ ಲಾಭದಾಯಕ....?
ಬೆಳಗಿನ ವೇಳೆ ಧಾವಂತದ ಕೆಲಸಕಾರ್ಯಗಳ ಬಳಿಕ ಪ್ರತಿಯೊಬ್ಬ ವ್ಯಕ್ತಿಯೂ ಮಧ್ಯಾಹ್ನದ ವಿಶ್ರಾಂತಿಗಾಗಿ ಹಾತೊರೆಯುತ್ತಾನೆ. ಆದರೆ ಮಧ್ಯಾಹ್ನದ 20 ನಿಮಿಷಗಳ ಸೊಂಪಾದ ನಿದ್ರೆ ನಿಮ್ಮ ಆರೋಗ್ಯಕ್ಕೆ ಅಚ್ಚರಿಯ ಲಾಭಗಳನ್ನು ನೀಡುತ್ತದೆ ಮತ್ತು ನಿಮ್ಮಲ್ಲಿರುವ ಆಲಸಿತನವನ್ನು ಹೊಡೆದೋಡಿಸುತ್ತದೆ ಎನ್ನುವುದು ಗೊತ್ತೇ?
ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ
ಮಧ್ಯಾಹ್ನದ 20ರಿಂದ 30 ನಿಮಿಷಗಳ ನಿದ್ರೆಯು ವ್ಯಕ್ತಿಯಲ್ಲಿ ಚುರುಕುತನವನ್ನು ಮತ್ತು ಸಂಜ್ಞೇಯತಾ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ಇದರಿಂದ ಕಾರ್ಯ ನಿರ್ವಹಣೆಯೂ ಉತ್ತಮಗೊಳ್ಳುತ್ತದೆ. ಇಂತಹ ಕಿರುನಿದ್ರೆಯಿಲ್ಲದಿದ್ದರೆ ವ್ಯಕ್ತಿ ಆಲಸ್ಯತನ ಮತ್ತು ಜ್ಞಾಪಕ ಶಕ್ತಿ ನಷ್ಟಕ್ಕೆ ಸುಲಭದ ಗುರಿಯಾಗುತ್ತಾನೆ. ದಿನದ ಕೊನೆಯಲ್ಲಿ ವ್ಯಕ್ತಿ ಹೈರಾಣಾಗಿರುತ್ತಾನೆ. ಈ ಕಿರುನಿದ್ರೆ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ.
ರಕ್ತದೊತ್ತಡ ನಿಯಂತ್ರಣ
ಮಧ್ಯಾಹ್ನದ ಕಿರುನಿದ್ರೆ ಹೆಚ್ಚಿನ ರಕ್ತದೊತ್ತಡವನ್ನು ಪರಿಣಾಮಕಾರಿಯಾಗಿ ತಗ್ಗಿಸುತ್ತದೆ ಮತ್ತು ಹೆಚ್ಚಿನ ರಕ್ತದೊತ್ತಡ ನಿಯಂತ್ರಣಕ್ಕಾಗಿ ಸೇವಿಸುವ ಔಷಧಿಗಳ ಪ್ರಮಾಣವನ್ನು ಕಡಿಮೆಗೊಳಿಸಲು ನೆರವಾಗುತ್ತದೆ ಎನ್ನುವುದು ವೈದ್ಯರ ಅಭಿಪ್ರಾಯ. ಅಲ್ಲದೇ ಅಧಿಕ ರಕ್ತದೊತ್ತಡದಿಂದ ರಕ್ತನಾಳಗಳಿಗುಂಟಾಗಿರುವ ಹಾನಿಯನ್ನೂ ಕಡಿಮೆಗೊಳಿಸಬಹು ದಾಗಿದೆ.
ಒತ್ತಡ ನಿವಾರಣೆ
ಮಾನಸಿಕ ಒತ್ತಡಕ್ಕೆ ಕಾರಣವಾಗುವ ದೇಹದಲ್ಲಿಯ ನೊರೆಪಿನೆಫ್ರೈನ್ ಹಾರ್ಮೋನ್ ಶೇಖರಣೆ ಸರಿಯಾದ ಮಟ್ಟದಲ್ಲಿರುವಂತೆ ಮಾಡುವ ಸಾಮರ್ಥ್ಯ ಕಿರುನಿದ್ರೆಗಿದೆ. ಈ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿದ್ದರೆ ಹೆಚ್ಚಿನ ಒತ್ತಡ, ರಕ್ತದೊತ್ತಡದಲ್ಲಿ ಏರಿಕೆ ಮತ್ತು ಹೃದಯಬಡಿತ ಹೆಚ್ಚಳವನ್ನುಂಟು ಮಾಡುತ್ತದೆ.
ಎಚ್ಚರವನ್ನು ಹೆಚ್ಚಿಸುತ್ತದೆ
ವಾಹನಗಳ ಚಾಲನೆ ಸಮಯದಲ್ಲಿ ಸದಾ ಎಚ್ಚರಿಕೆಯಿಂದಿರುವುದು ಅತ್ಯಂತ ಮುಖ್ಯವಾಗಿದೆ. 20 ನಿಮಿಷಗಳ ಕಿರುನಿದ್ರೆ ವ್ಯಕ್ತಿಯಲ್ಲಿ ಎಚ್ಚರಿಕೆಯನ್ನು ಹೆಚ್ಚಿಸುವ ಜೊತೆಗೆ ಆತನಿಗೆ ಕೆಲಸ ಮಾಡಲು ಹುರುಪು ನೀಡುತ್ತದೆ. ಆದರೆ ಹೆಚ್ಚಿನ ಅವಧಿಯ ನಿದ್ರೆಯು ವ್ಯಕ್ತಿಯಲ್ಲಿ ಮಂಪರನ್ನುಂಟು ಮಾಡಬಹುದು ಮತ್ತು ಅದರಿಂದ ಹೊರಬರಲು ಸಮಯಾವಕಾಶ ಬೇಕಾಗಬಹುದು.
ನರಗಳಿಗೆ ವಿಶ್ರಾಂತಿ
ನರಗಳು ಮತ್ತು ಸ್ನಾಯುಗಳಿಗೆ ಅಗತ್ಯ ವಿಶ್ರಾಂತಿಯನ್ನು ಕಿರುನಿದ್ರೆಯು ನೀಡುತ್ತದೆ. ಮಿದುಳಿಗೆ ದಣಿವಾದಾಗ ಕೆಲವೊಂದು ನಂಜಿನ ಅಂಶಗಳು ಬಿಡುಗಡೆಗೊಳ್ಳುತ್ತವೆ ಮತ್ತು ಇದು ಆಲಸ್ಯತನಕ್ಕೆ ಕಾರಣವಾಗುತ್ತದೆ. ಈ ನಂಜಿನ ಅಂಶಗಳ, ವಿಶೇಷವಾಗಿ ನ್ಯೂರೊಟಾಕ್ಸಿನ್ಗಳ ಬಿಡುಗಡೆಯು ಕಿರುನಿದ್ರೆಯಿಂದಾಗಿ ಕನಿಷ್ಠ ಮಟ್ಟಕ್ಕಿಳಿಯುತ್ತದೆ ಮತ್ತು ಇದರಿಂದಾಗಿ ನರಗಳಿಗೆ ಅಗತ್ಯ ವಿಶ್ರಾಂತಿ ದೊರೆಯುತ್ತದೆ.
ಹೃದಯದ ಕ್ಷಮೆತೆಯನ್ನು ಹೆಚ್ಚಿಸುತ್ತದೆ
ನಮ್ಮ ದೇಹದ ಇತರ ಅಂಗಾಂಗಗಳಂತೆ ಹೃದಯವೂ ದಣಿಯುತ್ತದೆ ಮತ್ತು ಪ್ರತಿದಿನದ ಕೆಲಸ, ಉದ್ವಿಗ್ನತೆಯಿಂದಾಗಿ ಒತ್ತಡಕ್ಕೆ ಗುರಿಯಾಗುತ್ತದೆ. ಕಿರುನಿದ್ರೆಯು ಹೃದಯದ ಒತ್ತಡ ವನ್ನು ತಗ್ಗಿಸಿ ಅದಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ ಮತ್ತು ಅದರ ಕಾರ್ಯ ನಿರ್ವಹಣೆಯನ್ನು ಹೆಚ್ಚಿಸುತ್ತದೆ.
ಜೀವಕೋಶಗಳಿಗೆ ಹಾನಿಯನ್ನು ತಡೆಯುತ್ತದೆ
ಮನುಷ್ಯನಿಗೆ ಸರಿಯಾದ ನಿದ್ರೆ ದೊರೆಯದಿದ್ದರೆ ಜೀವಕೋಶಗಳಿಗೆ, ವಿಶೇಷವಾಗಿ ಯಕೃತ್ತು, ಶ್ವಾಸಕೋಶಗಳು, ಸಣ್ಣ ಕರುಳು ಇತ್ಯಾದಿ ಪ್ರಮುಖ ಅಂಗಾಂಗಗಳಿಗೆ ಹಾನಿ ತಟ್ಟುತ್ತದೆ. ಕಿರುನಿದ್ರೆಯು ಜೀವಕೋಶಗಳ ಹಾನಿಯಿಂದಾಗಿ ಉಂಟಾಗುವ ದುಷ್ಪರಿಣಾ ಮಗಳನ್ನು ನಿವಾರಿಸುತ್ತದೆ ಎಂದು ಸಂಶೋಧಕರು ತೀರ್ಮಾನಕ್ಕೆ ಬಂದಿದ್ದಾರೆ.