ಕಾಂಗ್ರೆಸ್ ಮುಸ್ಲಿಮೇತರರ ಸಂಪತ್ತನ್ನು ಕಸಿದುಕೊಂಡು ಮುಸ್ಲಿಮರಿಗೆ ನೀಡುತ್ತದೆ ಎಂದು ಪ್ರತಿಪಾದಿಸುವ ಅನಿಮೇಟೆಡ್ ವೀಡಿಯೊ ಹಂಚಿಕೊಂಡ ಬಿಜೆಪಿ!
ಟೀಕೆಗಳ ನಂತರ Instagram ಖಾತೆಯಿಂದ ಸುಳ್ಳು ಸುದ್ದಿ ಹಬ್ಬಿಸುವ ವೀಡಿಯೊ ಡಿಲೀಟ್
Instagram ನಿಂದ ಡಿಲಿಟ್ ಮಾಡಿದ ವೀಡಿಯೊ | Photo : Shambhavi Thakur
ಹೊಸದಿಲ್ಲಿ : ಬಿಜೆಪಿಯ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ "ಕಾಂಗ್ರೆಸ್ ಮುಸ್ಲಿಮೇತರರಿಂದ ಸಂಪತ್ತನ್ನು ಕಸಿದುಕೊಂಡು ತನ್ನ ನೆಚ್ಚಿನ ಆಕ್ರಮಣಕಾರರ ಸಮುದಾಯಕ್ಕೆ ಅದನ್ನು ಹಂಚುತ್ತದೆ” ಎಂದು ಹೇಳುವ ಅನಿಮೇಟೆಡ್ ವೀಡಿಯೊವೊಂದನ್ನು ಪೋಸ್ಟ್ ಮಾಡಿತ್ತು. ಟೀಕೆಗಳು ಬರುತ್ತಿದ್ದಂತೆ ಅದನ್ನು ಸಾಮಾಜಿಕ ಜಾಲತಾಣ Instagram ಖಾತೆಯಿಂದ ಡಿಲೀಟ್ ಮಾಡಲಾಗಿದೆ.
ಬಿಜೆಪಿ ಈ ವೀಡಿಯೊವನ್ನು ತೆಗೆದುಹಾಕಿದೆಯೇ ಅಥವಾ ಬಳಕೆದಾರರು ಸಾಮೂಹಿಕವಾಗಿ ರಿಪೋರ್ಟ್ ಮಾಡಿದ ನಂತರ Instagram ಅದನ್ನು ತೆಗೆದುಹಾಕಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ವೀಡಿಯೊವನ್ನು "ತಪ್ಪು ಮಾಹಿತಿ" ಮತ್ತು "ದ್ವೇಷ ಭಾಷಣ" ಎಂದು ಹಲವಾರು Instagram ಬಳಕೆದಾರರು ವರದಿ ಮಾಡಿದ್ದರು ಎನ್ನಲಾಗಿದೆ.
ರಾಹುಲ್ ಗಾಂಧಿಯವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಹಿಡಿದಿರುವುದು ವೀಡಿಯೊದಲ್ಲಿದೆ. ಕ್ಷಣ ಮಾತ್ರದಲ್ಲಿ ಅದು ಮುಸ್ಲಿಂ ಲೀಗ್ನ ಚಿಹ್ನೆಯಂತೆ ಮಾರ್ಪಾಡಾಗುತ್ತಿರುವಂತೆ ಅನಿಮೇಟೆಡ್ ವೀಡಿಯೊ ಚಿತ್ರಿಸಿದೆ. “ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮೇತರರ ಎಲ್ಲಾ ಹಣ, ಸಂಪತ್ತನ್ನು ಅವರ ನೆಚ್ಚಿನ ಸಮುದಾಯವಾದ ಮುಸ್ಲಿಮರಿಗೆ ಹಂಚುತ್ತಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಮ್ಮ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಹೇಳಿದ್ದರು. ಪ್ರಧಾನಿ ಮೋದಿಗೆ ಇದು ತಿಳಿದಿದೆ. ಇದನ್ನು ತಡೆಯಲು ಮೋದಿಯೇ ಬೇಕು. ಹಾಗಾಗಿ ಪ್ರತಿಯೊಬ್ಬ ಭಾರತೀಯರ ಬೆಂಬಲ ಮೋದಿಗೆ ಬೇಕು” ಎಂದು ತಪ್ಪಾಗಿ ಪ್ರತಿಪಾದಿಸುವ ಅನಿಮೇಶನ್ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಈ ವೀಡಿಯೊದಲ್ಲಿರುವ ಮಾಹಿತಿಗಳು ಮೋದಿಯವರ ಏಪ್ರಿಲ್ 21 ರ ರಾಜಸ್ಥಾನದ ಭಾಷಣದಿಂದ ಎರವಲು ಪಡೆದಂತೆ ಕಾಣುತ್ತದೆ. ಮೋದಿಯವರ ದ್ವೇಷ ಭಾಷಣಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದರೂ ಬಿಜೆಪಿಯು ಅದನ್ನೇ ಮತ್ತೆ ತನ್ನ ಅನಿಮೇಟೆಡ್ ವೀಡಿಯೊದಲ್ಲಿ ಬಳಸಿಕೊಂಡಿದೆ ಎಂದು ತಿಳಿದು ಬಂದಿದೆ.
ಮುಸ್ಲಿಮರನ್ನು "ನುಸುಳುಕೋರರು" ಎಂದು ಕರೆದಿರುವ ಮೋದಿಯವರ ಪ್ರಚೋದನಾಕಾರಿ ಭಾಷಣದಂತೆಯೇ, ವೀಡಿಯೊದಲ್ಲಿ "ಆಕ್ರಮಣಕಾರರು, ಭಯೋತ್ಪಾದಕರು, ದರೋಡೆಕೋರರು ಮತ್ತು ಕಳ್ಳರು", “ಭಾರತವನ್ನು ಲೂಟಿ ಮಾಡಿದರು”, "ನಮ್ಮ ದೇವಾಲಯಗಳನ್ನು ಹಾಳುಮಾಡಿದರು" ಮತ್ತು "ಲೂಟಿಯ ಸಂಪತ್ತನ್ನು ತಮ್ಮಲ್ಲಿಯೇ ಮರುಹಂಚಿಕೆ ಮಾಡಿದರು", "ಕಾಂಗ್ರೆಸ್ ಪಕ್ಷವು ಅದೇ ಸಮುದಾಯಕ್ಕೆ ಸೇರಿದ ಜನರಿಗೆ ಅಧಿಕಾರ ನೀಡುತ್ತಿದೆ" ಎಂಬ ಪದಗಳನ್ನು ಬಳಸಲಾಗಿದೆ.
ಕಾಂಗ್ರೆಸ್ನ ಪ್ರಣಾಳಿಕೆಯು "ಮುಸ್ಲಿಮ್ ಲೀಗ್ನ ಸಿದ್ಧಾಂತವವೇ ಆಗಿದೆ" ಎಂದು ವೀಡಿಯೊ ಹೇಳಿಕೊಂಡಿದೆ. ನೀವು ಮುಸ್ಲಿಮೇತರರಾಗಿದ್ದರೆ, ಕಾಂಗ್ರೆಸ್ ನಿಮ್ಮ ಸಂಪತ್ತನ್ನು ಕಸಿದುಕೊಂಡು ಮುಸ್ಲಿಮರಿಗೆ ಹಂಚುತ್ತದೆ. ಅಲ್ಲದೇ ಬಿಜೆಪಿಯ ಅಧಿಕೃತ ಘೋಷಣೆಯಾದ "ಅಬ್ಕಿ ಬಾರ್, 400 ಪಾರ್" ಅನ್ನು ಒತ್ತಿ ಹೇಳಿದೆ. ಕಾಂಗ್ರೆಸ್ ನ ಈ ದುಷ್ಟ ಯೋಜನೆಯನ್ನು ನಿಲ್ಲಿಸುವ ಶಕ್ತಿ ಮೋದಿಗೆ ಮಾತ್ರ ಇದೆ ಎಂದಿರುವ ವೀಡಿಯೊ, ಇದು ಈಗಿನ ಅಗತ್ಯತೆ ಎಂದು ಪ್ರತಿಪಾದಿಸಿದೆ.
ಬಿಜೆಪಿಯ ಹಲವು ನಾಯಕರು ಇಂತಹ ಹೇಳಿಕೆಗಳನ್ನು ನೀಡಿದ್ದಾರೆ. ಇತ್ತೀಚಿಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು "ನಿಮ್ಮ ಮಕ್ಕಳ ಆಸ್ತಿಯನ್ನು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಬಯಸುತ್ತದೆ" ಎಂದು ಹೇಳಿದ್ದರು.
ಸೌಜನ್ಯ : newslaundry.com