ಗೋವಾದಲ್ಲಿ ವಸಾಹತುಶಾಹಿ ಆಡಳಿತದ ವಿರುದ್ಧ ಹೋರಾಟ ಇನ್ನೂ ಮುಗಿದಿಲ್ಲ:ಪಾರಿಕ್ಕರ್
ಪಣಜಿ,ಜೂ.18: ಅನಾರೋಗ್ಯಕ್ಕೀಡಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಮರಳಿದ ಬಳಿಕ ಸೋಮವಾರ ತನ್ನ ಮೊದಲ ಬಹಿರಂಗ ಭಾಷಣವನ್ನು ಮಾಡಿದ ಗೋವಾ ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಅವರು,ರಾಜ್ಯದಲ್ಲಿ ವಸಾಹತುಶಾಹಿ ಅಧಿಕಾರದ ವಿರುದ್ಧದ ಹೋರಾಟವಿನ್ನೂ ಮುಗಿದಿಲ್ಲ ಎಂದು ಹೇಳಿದರು. ಇದೇ ವೇಳೆ, ಈ ವರ್ಷ ರಾಜ್ಯವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುವ ಸರಕಾರದ ನಿರ್ಣಯವನ್ನು ಅವರು ಪುನರುಚ್ಚರಿಸಿದರು.
ಗೋವಾ ಕ್ರಾಂತಿ ದಿನದ ಅಂಗವಾಗಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು,72 ವರ್ಷಗಳ ಹಿಂದೆ 1946ರಲ್ಲಿ ಆರಂಭಗೊಂಡಿದ್ದ ಹೋರಾಟವು 1961ರಲ್ಲಿ ಗೋವಾವನ್ನು ಪೋರ್ಚುಗೀಸರ ಆಡಳಿತದಿಂದ ವಿಮೋಚನೆಗೊಳಿಸಿದೆ. ಆದರೆ ಹೋರಾಟವಿನ್ನೂ ಮುಗಿದಿಲ್ಲ ಎಂದು ತಾನು ಭಾವಿಸಿದ್ದೇನೆ ಎಂದು ರಾಜ್ಯದ ಮಾಯೆಂ ಗ್ರಾಮದಲ್ಲಿ ನಿರ್ವಾಸಿತ ಆಸ್ತಿಗಳಲ್ಲಿ ವಾಸವಿರುವ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿ ಹೇಳಿದರು.
ಮಾಯೆಂ ನಿರ್ವಾಸಿತ ಆಸ್ತಿಗಳ ಸಮಸ್ಯೆಯು ಈ ಹೋರಾಟದ ಭಾಗವಾಗಿದೆ ಮತ್ತು ಆದಷ್ಟು ಶೀಘ್ರ ಅದನ್ನು ಬಗೆಹರಿಸಲು ತಾನು ಖುದ್ದಾಗಿ ಶ್ರಮಿಸುತ್ತಿದ್ದೇನೆ ಎಂದರು.
ಪಣಜಿಯಿಂದ 20 ಕಿ.ಮೀ. ದೂರದಲ್ಲಿರುವ,ಸುಮಾರು 30,000 ಜನಸಂಖ್ಯೆಯುಳ್ಳ ಮಾಯೆಂ ಗ್ರಾಮವನ್ನು ನಿರ್ವಾಸಿತ ಆಸ್ತಿ ಎಂದು ಘೋಷಿಸಲಾಗಿದೆ. ಈ ಆಸ್ತಿಗಳ ಒಡೆತನ ಹೊಂದಿದ್ದ ಪೋರ್ಚುಗೀಸ್ ಪ್ರಜೆಗಳು 1961ರಲ್ಲಿ ಗೋವಾ ವಿಮೋಚನೆಯ ಬಳಿಕ ಅವುಗಳನ್ನು ತೊರೆದು ಪೋರ್ಚುಗಲ್ಗೆ ಮರಳಿದ್ದರು. ಈ ಆಸ್ತಿಯಲ್ಲಿ ಒಕ್ಕಲುಗಳಾಗಿ ವಾಸವಾಗಿರುವ ಗೋವಾ ಪ್ರಜೆಗಳು ದಶಕಗಳಿಂದಲೂ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ.
ಮಾಯೆಂ ಗ್ರಾಮದಲ್ಲಿಯ ಭೂಮಿಯನ್ನು ಪೋರ್ಚುಗೀಸರ ಒಡೆತನದಿಂದ ಮುಕ್ತಗೊಳಿಸುವ ಅಗತ್ಯವಿದೆ ಎಂದು ಸ್ವಾತಂತ್ರ ಹೋರಾಟಗಾರ ಚಂದ್ರಕಾಂತ ಪೆಡ್ನೇಕರ್ ಅವರು ಕರೆ ನೀಡಿದರು.
ತನ್ನ ಅನಾರೋಗ್ಯ ಮತ್ತು ರಾಜ್ಯದಲ್ಲಿ ಮೂರು ತಿಂಗಳುಗಳ ಕಾಲ ತನ್ನ ಅನುಪಸ್ಥಿತಿಯು 2018ರಲ್ಲಿ ಗೋವಾವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಸರಕಾರದ ನಿರ್ಣಯವನ್ನು ವಿಳಂಬಿಸಿದೆ ಎಂದು ಹೇಳಿದ ಪಾರಿಕ್ಕರ್,ಈ ವರ್ಷ ರಾಜ್ಯವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಎಲ್ಲರೂ ಒಂದಾಗಿ ಶ್ರಮಿಸೋಣ ಎಂದರು.
ಪ್ರತಿ ವರ್ಷ ಜೂನ್ 18ನ್ನು ಗೋವಾ ಕ್ರಾಂತಿ ದಿನವನ್ನಾಗಿ ಆಚರಿಸಲಾಗುತ್ತಿದ್ದು, 1946ರಲ್ಲಿ ಇದೇ ದಿನ ಸ್ವಾತಂತ್ರ ಹೋರಾಟಗಾರ ರಾಮ ಮನೋಹರ ಲೋಹಿಯಾ ಅವರು ಪೋರ್ಚುಗೀಸರ ಆಡಳಿತದ ವಿರುದ್ಧ ಹೋರಾಟಕ್ಕೆ ಜನತೆಗೆ ಕರೆ ನೀಡಿದ್ದರು. ಈ ಚಳವಳಿ ಅಂತಿಮವಾಗಿ 1961,ಡಿ.19ರಂದು ಗೋವಾ ವಿಮೋಚನೆಗೆ ಕಾರಣವಾಗಿತ್ತು.