ತೆಲಂಗಾಣ ರಾಜ್ಯ ವಿಧಾನಸಭೆ ವಿಸರ್ಜನೆಗೆ ಸಿಎಂ ಚಂದ್ರಶೇಖರ್ ರಾವ್ ನಿರ್ಧಾರ
ಹೈದರಾಬಾದ್, ಸೆ.6: ತೆಲಂಗಾಣ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಲು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ರಾಜ್ಯ ಸಂಪುಟ ಸಹೋದ್ಯೋಗಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಂಪುಟ ಸಭೆಯ ನಿರ್ಣಯದ ಬಳಿಕ ಕೆಸಿಆರ್ ಅವರು ರಾಜ್ಯಪಾಲ ಇಎಸ್ಎಲ್ ನರಸಿಂಹನ್ರನ್ನು ಭೇಟಿಯಾಗಿ ತಮ್ಮ ನಿರ್ಣಯ ತಿಳಿಸಿದರು.
ತೆಲಂಗಾಣ ಸಿಎಂ ಕೆಸಿಆರ್ ಅಧಿಕಾರದ ಅವಧಿ ಮುಗಿಯಲು ಇನ್ನೂ 9 ತಿಂಗಳು ಇರುವಾಗಲೇ ವಿಧಾನಸಭೆ ವಿಸರ್ಜಿಸಿ ಹೊಸ ಜನಾದೇಶ ಪಡೆಯಲು ನಿರ್ಧರಿಸಿದ್ದಾರೆ. ರಾವ್ ಅವರು ಈ ವರ್ಷದ ಡಿಸೆಂಬರ್ನಲ್ಲಿ ನಡೆಯುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ಹಾಗೂ ಮಿರೆರಾಂ ರಾಜ್ಯಗಳೊಂದಿಗೆ ತೆಲಂಗಾಣ ರಾಜ್ಯದ ಚುನಾವಣೆ ನಡೆಯಬೇಕೆನ್ನುವ ಬಯಕೆ ವ್ಯಕ್ತಪಡಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತೆಲಂಗಾಣ ಅಸೆಂಬ್ಲಿ ಚುನಾವಣೆ ನಡೆದರೆ, ಸ್ಥಳೀಯ ವಿಷಯಗಳ ಬದಲಿಗೆ ರಾಷ್ಟ್ರೀಯ ವಿಚಾರ ಚರ್ಚೆಗೆ ಬರಲಿದ್ದು ಕಾಂಗ್ರೆಸ್ಗೆ ಲಾಭವಾಗಲಿದೆ ಎಂಬ ಲೆಕ್ಕಾಚಾರದೊಂದಿಗೆ ತನ್ನ ಅದೃಷ್ಟದ ದಿನ ಸೆ.6 ರಂದು ಕೆಸಿಆರ್ ವಿಧಾನಸಭೆಯನ್ನು ವಿಸರ್ಜಿಸುವ ನಿರ್ಧಾರಕ್ಕೆ ಬಂದಿದ್ದಾರೆ.