ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ಕ್ರೀಡಾಕೂಟಗಳು ಸಹಕಾರಿ: ಶಾಸಕ ರಾಜೇಗೌಡ
ಶೃಂಗೇರಿ, ಸೆ.9: ಸ್ಪರ್ಧಾತ್ಮಕ ಯುಗದಲ್ಲಿರುವ ನಾವು ಸಿಗುವ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಶಿಕ್ಷಣದೊಂದಿಗೆ ಕ್ರೀಡಾಕೂಟಗಳ ಪ್ರತಿಯೊಂದು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದಾಗ ಮಾತ್ರ ಅವರಲ್ಲಿ ಕ್ರಿಯಾಶೀಲತೆ ಹಾಗೂ ಮಾನಸಿಕ ದೃಢತೆ ವೃದ್ಧಿಯಾಗುತ್ತದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ತಾಲೂಕು ಬೇಗಾರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಗಳ ಪೂರ್ವ ತಯಾರಿಯ ನಿರಂತರ ಪರಿಶ್ರಮದಿಂದ ಶರೀರ ಮತ್ತು ಮನಸ್ಸು ಚುರುಕಾಗುತ್ತದೆ. ತಳಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ಮಾಡುವತ್ತ ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಹೇಳಿದರು.
ಜಿ.ಪಂ. ಸದಸ್ಯ ಬಿ.ಶಿವಶಂಕರ್ ಮಾತನಾಡಿ, ಇತ್ತೀಚೆಗೆ ಇಂಡೋನೇಷಿಯಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಕ್ರೀಡಾಕಲಿಗಳು, ಅದರಲ್ಲೂ ಗ್ರಾಮೀಣ ಗುಡ್ಡಗಾಡನ ಸ್ಪರ್ಧಿಗಳು ತೋರಿರುವ ಅಪ್ರತಿಮ ನಿರ್ವಹಣೆ ಮತ್ತು ಸಂಪಾದಿಸಿರುವ ಪದಕಗಳು ಇಲ್ಲಿಯ ಕ್ರೀಡಾಳುಗಳಿಗೆ ಸ್ಪೂರ್ತಿಯನ್ನು ತರಬೇಕು ಎಂದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಹೆಚ್.ಆರ್.ಸತ್ಯನಾರಾಯಣ ಮಾತನಾಡಿ, ನಮ್ಮ ವಿದ್ಯಾಲಯವು ಗ್ರಾಮೀಣ ಪ್ರದೇಶದಲ್ಲಿ ಇದ್ದರೂ ಸಹ ವಿದ್ಯಾರ್ಥಿಗಳ ಕ್ರೀಡಾಸಕ್ತಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸಲಾಗಿದೆ. ಇದರಿಂದ ಈ ಕ್ರೀಡಾಕೂಟದ ಸ್ಪರ್ಧೆಗಳಲ್ಲಿ ವಿಶೇಷ ದಾಖಲೆ ಮಾಡಲು ಸಾಧ್ಯವಾಗುವುದು ಎಂದರು.
ಸಮಾರಂಭದಲ್ಲಿ ತಾ.ಪಂ. ಅಧ್ಯಕ್ಷೆ ಜಯಶೀಲಾ ಚಂದ್ರಶೇಖರ್, ಸದಸ್ಯ ಕುರಾದಮನೆ ವೆಂಕಟೇಶ್, ಗ್ರಾ.ಪಂ.ಅಧ್ಯಕ್ಷೆ ರೇಣುಕಾ ಮಂಜುನಾಥ್, ಉಪಾಧ್ಯಕ್ಷ ಲಕ್ಷ್ಮೀಶ, ಸದಸ್ಯರಾದ ಜಟಕೇಶ್ವರ ಸುರೇಶ್, ಕೇಶವ್ ಹರಾವರಿ, ಉಮೇಶ್, ಪ್ರಾಂಶುಪಾಲೆ ಸರ್ವಮಂಗಳ, ಪಟ್ಟಣದ ಪ.ಪೂ.ಕಾಲೇಜು ಪ್ರಾಂಶುಪಾಲ ನಾಗರಾಜ್ ಹಾಗೂ ಸುರೇಶ್ ಇದ್ದರು.
6 ಕಾಲೇಜುಗಳು ಭಾಗವಹಿಸಿದ್ದ ಈ ಕ್ರೀಡಾಕೂಟದ ಬಾಲಕ ಮತ್ತು ಬಾಲಕೀಯರ ವಿಭಾಗದಲ್ಲಿ ಖೊಖೊ ಸ್ಪರ್ಧೆಯಲ್ಲಿ ಸರ್ಕಾರಿ ಪ.ಪೂ.ಕಾಲೇಜು ಶೃಂಗೇರಿ (ಪ್ರಥಮ) ವಾಲಿಬಾಲ್-ಬಿಜಿಎಸ್ ಕಾಲೇಜು (ಪ್ರ), ಕಬಡ್ಡಿ-ಜೆಸಿಬಿಎಂ ಕಾಲೇಜು (ಪ್ರ) ಸ್ಥಾನ ಪಡೆದವು.