ಕೆಮಿಕಲ್ ಫ್ಯಾಕ್ಟರಿಯಲ್ಲಿ ಸ್ಫೋಟ: 6 ಮಂದಿ ಮೃತ್ಯು
ಬಿಜ್ನೋರ್, ಸೆ.12: ಇಲ್ಲಿಯ ನಗೀನಾ ರಸ್ತೆಯಲ್ಲಿರುವ ಮೋಹಿತ್ ಪೆಟ್ರೋ-ಕೆಮಿಕಲ್ ಫ್ಯಾಕ್ಟರಿಯಲ್ಲಿ ಬುಧವಾರ ಬೆಳಿಗ್ಗೆ ಬಾಯ್ಲರ್ ಸ್ಫೋಟಗೊಂಡು ಸಂಭವಿಸಿದ ಭೀಕರ ದುರಂತದಲ್ಲಿ ಆರು ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು,ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಓರ್ವ ಕಾರ್ಮಿಕ ನಾಪತ್ತೆಯಾಗಿದ್ದಾನೆ.
ಈ ಕಾರ್ಖಾನೆಯು ಎಥೆನಾಲ್ನ್ನು ಉತ್ಪಾದಿಸುತ್ತಿದ್ದು,ಅದರ ಬಾಯ್ಲರ್ ಕೆಲವು ದಿನಗಳಿಂದ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಬುಧವಾರ ಬೆಳಿಗ್ಗೆ ವೆಲ್ಡಿಂಗ್ ಯಂತ್ರ ಬಳಸಿ ದುರಸ್ತಿ ಮಾಡುತ್ತಿದ್ದಾಗ ಅದು ಸ್ಫೋಟಿಸಿದೆ. ಬಾಲಗೋವಿಂದ, ರವಿ, ಲೋಕೇಂದ್ರ,ಕಮಲವೀರ್,ವಿಕ್ರಾಂತ ಮತ್ತು ಚೇತರಾಂ ಎನ್ನುವವರು ಮೃತಪಟ್ಟಿದ್ದಾರೆ. ಗಂಭೀರ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ. ಓರ್ವ ಕಾರ್ಮಿಕ ಈಗಲೂ ನಾಪತ್ತೆಯಾಗಿದ್ದಾನೆ ಎಂದು ಎಸ್ಪಿ ಉಮೇಶ ಕುಮಾರ ಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಕಾರ್ಖಾನೆಯ ಮಾಲಿಕನನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು ಈ ದುರಂತದ ಬಗ್ಗೆ ಶೋಕವನ್ನು ವ್ಯಕ್ತಪಡಿಸಿದ್ದಾರೆ.