ನನ್ನ 6,000 ಉದ್ಯೋಗಿಗಳ, ಶೇರುದಾರರ ಗತಿಯೇನು?: ಆಂಟಿಗುವಾದಿಂದ ಚೊಕ್ಸಿ ವಿಡಿಯೋ
ಹೊಸದಿಲ್ಲಿ, ಸೆ.12: 13,000 ಕೋಟಿ ರೂ.ಗೂ ಅಧಿಕ ಹಣವನ್ನು ಪಿಎನ್ ಬಿ ಬ್ಯಾಂಕಿಗೆ ವಂಚನೆಗೈದು ಆಂಟಿಗುವಾದಲ್ಲಿ ತಲೆಮರೆಸಿಕೊಂಡಿರುವ ವಜ್ರೋದ್ಯಮಿ ಮೆಹುಲ್ ಚೊಕ್ಸಿ ತನ್ನ ಒಡೆತನದ ಗೀತಾಂಜಲಿ ಜುವೆಲ್ಲರ್ಸ್ ನ ಸುಮಾರು 6000 ಉದ್ಯೋಗಿಗಳು ಹಾಗೂ ಶೇರುದಾರರು ಎದುರಿಸುತ್ತಿರುವ ಸಂದಿಗ್ಧತೆಗೆ ಸರಕಾರವನ್ನು ದೂರಿದ್ದಾರೆ. ಜಗತ್ತಿನಲ್ಲಿ ಯಾವುದಾದರೂ ಕಂಪೆನಿಯನ್ನು ಒಂದು ವಾರದಲ್ಲಿ ಮುಚ್ಚಲಾಗಿದೆಯೇ ಎಂದೂ ಅವರು ಪ್ರಶ್ನಿಸಿದ್ದಾರೆ.
ಈ ಹಿಂದೆ ದಾಖಲಿಸಲ್ಪಟ್ಟಿದ್ದ ತಪ್ಪು ದೂರಿನಿಂದಾಗಿ ತಾನು ಭಯದಿಂದ ಬದುಕುತ್ತಿರುವುದಾಗಿ ಚೊಕ್ಸಿ ಆಂಟಿಗುವಾದಿಂದ ಎರಡನೇ ಬಾರಿ ಕ್ಯಾಮರಾ ಮುಂದೆ ಮಾತನಾಡುತ್ತಾ ಹೇಳಿದ್ದಾರೆ.
“ಒಂದೇ ವಾರದೊಳಗೆ ನನ್ನ ಬ್ಯಾಂಕ್ ಖಾತೆಗಳನ್ನು ಹಾಗೂ ನನ್ನ ಸರ್ವರ್ ಅನ್ನು ಜಪ್ತಿಗೊಳಿಸಲಾಗಿದೆ. ನಾನು ಆಸ್ಪತ್ರೆಯಿಂದ ಹಿಂದಕ್ಕೆ ಬರಬೇಕಾದರ ನನ್ನ ಕಂಪೆನಿಗೆ ಯಾರೂ ಕೆಲಸ ಮಾಡುತ್ತಿರಲಿಲ್ಲ. ನಾನು ಅಮೆರಿಕಾದಲ್ಲಿ ಚಿಕಿತ್ಸೆಗಾಗಿ ಬಂದಿದ್ದು ಇದೇ ಕಾರಣಕ್ಕೆ ಭಾರತಕ್ಕೆ ಫೆಬ್ರವರಿಯಲ್ಲಿ ಹಿಂದಕ್ಕೆ ಬರಲಾಗದು'' ಎಂದು ಅವರು ಹೇಳಿದ್ದಾರೆ.
ಆಂಟಿಗುವಾ ಹಾಗೂ ಬರ್ಬುಡಾ ಮೆಹುಲ್ ಚೊಕ್ಸಿಗೆ ಪೌರತ್ವ ನೀಡಿವೆ. ನನ್ನ ಪಾಸ್ಪೋರ್ಟ್ ಒಪ್ಪಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ ಅವರು ತಾನು ಭದ್ರತೆಗೆ ಅಪಾಯವೆಂಬ ನೆಪದ ಮೇಲೆ ಅದನ್ನು ರದ್ದುಪಡಿಸಲಾಗಿದೆ ಎಂದರು.
``ನನ್ನ ಶೇರುದಾರರಿಗೆ ಏನಾಗಬಹುದು?, ನನ್ನ ಜನರಿಗೆ,ನನ್ನ ಕಂಪೆನಿ ನೇಮಕಗೊಳಿಸಿದ ಅಂಗವಿಕಲ ಉದ್ಯೋಗಿಗಳ ಗತಿಯೇನು?, ಯಾರೂ ಅದರ ಬಗ್ಗೆ ಯೋಚಿಸುತ್ತಿಲ್ಲ?'' ಎಂದು ಅವರು ಹೇಳಿದರು.