ಸೋಮವಾರದಿಂದ ಶಾಲೆಗಳಲ್ಲಿ ಮಕ್ಕಳಿಗೆ 5 ದಿನ ಹಾಲು
ದ.ಕ. ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆ
ಮಂಗಳೂರು, ಜು.13: ಮುಂದಿನ ಸೋಮವಾರದಿಂದ ಪ್ರೌಢಶಾಲೆವರೆಗಿನ ಮಕ್ಕಳಿಗೆ ವಾರದಲ್ಲಿ ಐದು ದಿನ ಹಾಲು ಲಭ್ಯವಾಗಲಿದೆ.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ಇಂದು ನಡೆದ ದ.ಕ. ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಡಿಡಿಪಿಐ ವಾಲ್ಟರ್ ಡಿಮೆಲ್ಲೋ ಈ ವಿಷಯ ತಿಳಿಸಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದ.ಕ. ಜಿಲ್ಲೆಯಲ್ಲಿ ಒಂದನೆ ತರಗತಿಗೆ 3,22,769 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದು ಹೇಳಿದ ಡಿಡಿಪಿಐ, ಜಿಲ್ಲೆಯಾದ್ಯಂತ ಶೇ. 90ರಷ್ಟು ಪಠ್ಯ ಪುಸ್ತಕಗಳು ಶಾಲೆಗಳಿಗೆ ವಿತರಣೆಯಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ 15,432 ಸೈಕಲ್ಗಳ ಬೇಡಿಕೆ ಇದ್ದು, 11597 ಸೈಕಲ್ಗಳು ಬಂದಿವೆ. ಶೇ. 94ರಷ್ಟು ಮಕ್ಕಳಿಗೆ ಸಮವಸ್ತ್ರ ವಿತರಣೆಯಾಗಿದೆ. 1ರಿಂದ 10ನೆ ತರಗತಿವರೆಗಿನ ಮಕ್ಕಳಿಗೆ ಶೂ ವಿತರಣೆಗೆ ಸಂಬಂಧಿಸಿ ಎಸ್ಡಿಎಂಸಿಗೆ ಈಗಾಗಲೇ ಹಣ ಬಿಡುಗಡೆಯಾಗಿದೆ. ಎರಡನೆ ಸೆಟ್ ಸಮವಸ್ತ್ರಕ್ಕಾಗಿಯೂ ಹಣ ಬಿಡುಗಡೆ ಮಾಡಲಾಗಿದೆ ಎಂದು ಅವರು ವಿವರ ನೀಡಿದರು.
ಅಂಗನವಾಡಿ: ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಶಿಫಾರಸ್ಸು
ಜಿಲ್ಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುತ್ತಿದೆಯೇ? ಮಕ್ಕಳು ತಿನ್ನುತ್ತಿದ್ದಾರೆಯೇ ಎಂದು ಸಚಿವ ರೈ ಅಧಿಕಾರಿಗಳನ್ನು ಪ್ರಶ್ನಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ ಉತ್ತರಿಸುತ್ತಾ, ಜೂನ್ನಿಂದ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಬಹುತೇಕವಾಗಿ ಅಂಗನವಾಡಿಗಳಲ್ಲಿ ಮಕ್ಕಳು ಮೊಟ್ಟೆ ತಿನ್ನುತ್ತಿದ್ದಾರೆ. ಕೆಲವೊಂದು ಮೊಟ್ಟೆ ತಿನ್ನದ ಮಕ್ಕಳಿಗೂ ಪರ್ಯಾಯ ಆಹಾರ ನೀಡುವ ವ್ಯವಸ್ಥೆಯಾಗಬೇಕು ಎಂದು ಹೇಳಿದರು.
ಬೇರೆ ಯಾವ ಆಹಾರ ನೀಡಬಹುದು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಪ್ರಶ್ನಿಸಿದಾಗ, ಬಾಳೆಹಣ್ಣು ನೀಡಬಹುದು ಎಂದು ಸುಂದರ ಪೂಜಾರಿ ಹೇಳಿದರು.
ಪ್ರಾಕೃತಿಕ ವಿಕೋಪ ಎದುರಿಸಲು ಸನ್ನದ್ಧರಾಗಿರಿ:
ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಗಮನ ಹರಿಸಲಾಗಿದೆ. ಇದೀಗ ಮಳೆಗಾದಲ್ಲಿ ಸಂಭವನೀಯ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಸರ್ವಸನ್ನದ್ಧರಾಗಿರಬೇಕು ಎಂದು ಸಚಿವ ರೈ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಡಿಯುವ ನೀರಿಗೆ ಸಂಬಂಧಿಸಿ ಮಂಗಳೂರು ಜನತೆಯನ್ನು ಹಲವಾರು ವರ್ಷಗಳಿಂದ ಕಾಡುತ್ತಿದ್ದ ಸಮಸ್ಯೆಯನ್ನು ಹೊಸ ತುಂಬೆ ಅಣೆಕಟ್ಟನ್ನು ಪೂರ್ಣಗೊಳಿಸುವ ಮೂಲಕ ನೀಗಿಸಲು ಪ್ರಯತ್ನಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯ ರಾಜ್ಯ ಹೆದ್ದಾರಿಗಳು, ಲೋಕೋಪಯೋಗಿ ರಸ್ತೆಗಳನ್ನು ಸುಸ್ಥಿತಿಯಲ್ಲಿಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ನೆರೆಹಾವಳಿ, ಪ್ರಾಕೃತಿಕ ವಿಕೋಪಗಳಿಗೆ ಸಂಬಂಧಿಸಿ ಪೂರ್ವಭಾವಿ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು. ಮಳೆಗಾಲದಲ್ಲಿ ರಸ್ತೆಯ ಇಕ್ಕೆಲಗಳ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.
ಹೆದ್ದಾರಿಗಳಲ್ಲಿ ಹಳೆ ವಾಹನ ತೆರವಿಗೆ ಸಭೆಗೆ ಸೂಚನೆ:
ಜಿಲ್ಲೆಯ ಹೆದ್ದಾರಿಗಳಲ್ಲಿ ಅಪಘಾತಕ್ಕೀಡಾದ, ಸರಕಾರದ ಉಪಯೋಗವಿಲ್ಲದ ವಾಹನಗಳಿಂದ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಕಳೆದ ಸಭೆಯಲ್ಲಿ ತಿಳಿಸಲಾಗಿದ್ದರೂ ಕ್ರಮವಾಗಿಲ್ಲ ಎಂದು ನಾಮನಿರ್ದೇಶಿತ ಸದಸ್ಯರೊಬ್ಬರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಸಿ ಕ್ರಮ ಕೈಗೊಳ್ಳುವಂತೆ ಸಚಿವ ರೈ ಸೂಚನೆ ನೀಡಿದರು.
ಗ್ರಾ.ಪಂ.ಗಳಲ್ಲಿ ಅಂಬೇಡ್ಕರ್ ಭವನ: ಜಿಲ್ಲಾಧಿಕಾರಿ ಅನುಮೋದನೆಗೆ ನಿರ್ಣಯ
ದ.ಕ. ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಿರ್ಮಾಣವಾಗಬೇಕಿರುವ ಅಂಬೇಡ್ಕರ್ ಭವನಗಳಿಗೆ ರಾಜ್ಯ ಸರಕಾರದಿಂದ ಅನುಮೋದನೆಗೆ ಕಳುಹಿಸಲಾಗಿದೆ ಎಂದು ಸಮಾಜ ಕಲ್ಯಾಣ ಅಧಿಕಾರಿ ಡಾ. ಸಂತೋಷ್ ಕುಮಾರ್ ತಿಳಿಸಿದರು.
ಸಚಿವ ರೈ ಪ್ರತಿಕ್ರಿಯಿಸಿ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹಣದ ತೊಂದರೆ ಇಲ್ಲ. ಸರಕಾರದಿಂದ ಅನುಮೋದನೆ ಆಗಿ ಬರಲು ತಡವಾಗುತ್ತಿರುವುದರಿಂದ ಗ್ರಾಮ ಪಂಚಾಯತ್ ಮಟ್ಟದ ಅಂಬೇಡ್ಕರ್ ಭವನಗಳನ್ನು ಜಿಲ್ಲಾಧಿಕಾರಿ ಮೂಲಕವೇ ಅನುಮೋದನೆ ಪಡೆದು ಕಾರ್ಯಾರಂಭಿಸಲು ನಿರ್ಣಯ ಕೈಗೊಳ್ಳಬೇಕು ಎಂದು ಹೇಳಿದರು.
94ಸಿಯಡಿ 60,439 ಅರ್ಜಿಗಳು ವಿಲೇ:
ದ.ಕ. ಜಿಲ್ಲೆಯಲ್ಲಿ 94ಸಿಯಡಿ ಒಟ್ಟು 77672 ಅರ್ಜಿಗಳು ಸ್ವೀಕೃತಗೊಂಡಿದ್ದು, ಅವುಗಳಲ್ಲಿ 60,439 ಅರ್ಜಿಗಳು ವಿಲೇವಾರಿ ಮಾಡಲಾಗಿದೆ. ಅರ್ಜಿಗಳ ಶೀಘ್ರ ವಿಲೇಗೆ ಸಂಬಂಧಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿವಾರ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಸಭೆಗೆ ಮಾಹಿತಿ ನೀಡಿದರು.
ಸಚಿವ ರೈ ಮಾತನಾಡಿ, 94 ಸಿಯಡಿ ಅರ್ಜಿಗಳ ವಿಲೇ ನಿಧಾನ ಆಗಿಲ್ಲ. ಆದರೂ ಆ ರೀತಿಯ ಆರೋಪಗಳು ಕೇಳಿ ಬರುತ್ತಿವೆ ಎಂದರು.
68,000 ಕುಟುಂಬಗಳಿಗೆ ಅನಿಲ ಭಾಗ್ಯ ಯೋಜನೆ
ದಕ್ಷಿಣ ಕನ್ನಡ ಜಿಲ್ಲೆಯ ಅಡುಗೆ ಅನಿಲ ಸ್ಥಿತಿಗತಿಯ ಕುರಿತಂತೆ ಸಚಿವ ಯು.ಟಿ.ಖಾದರ್ರವರ ಪ್ರಶ್ನೆಗೆ, ಒಟ್ಟು 71300 ಕುಟುಂಬಗಳಿಗೆ ಅಡುಗೆ ಅನಿಲ ಸೌಲಭ್ಯ ಇಲ್ಲದಿರುವುದಾಗಿ ಪತ್ತೆ ಹಚ್ಚಲಾಗಿದೆ. ಅವರಲ್ಲಿ ಸುಮಾರು 3,000 ಮಂದಿ ಉಜ್ವಲ ಯೋಜನೆಯಲ್ಲಿ ಅಡುಗೆ ಅನಿಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಬಾಕಿ ಉಳಿಯುವ 68000 ಮಂದಿಗೆ ಅನಿಲ ಭಾಗ್ಯದಡಿ ಉಚಿತ ಗ್ಯಾಸ್ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ಮುಂದಿನ ತಿಂಗಳೊಳಗೆ ಎಲ್ಲಾ ಪಡಿತರ ಸಾಮಗ್ರಿ ವಿತರಣಾ ಕೇಂದ್ರಗಳಲ್ಲಿ ಪಿಒಎಸ್ ಯಂತ್ರಗಳನ್ನು ಅಳವಡಿಸಿರುವುದನ್ನು ಖಾತರಿಪಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ ಸಚಿವ ಯು.ಟಿ.ಖಾದರ್, ಪಡಿತರ ಚೀಟಿಗೆ ಸಂಬಂಧಿಸಿದ ದೀರ್ಘಕಾಲೀನ ಸಮಸ್ಯೆ ಶೀಘ್ರವೇ ಬಗೆಹರಿಯಲಿದೆ ಎಂದರು.
ಪ್ರೌಢಶಾಲೆಯನ್ನು ಪಿಯುಸಿಯಾಗಿಸಿ ಮೇಲ್ದರ್ಜೆಗೆ: ಸ್ಥಳೀಯರ ಜತೆ ಚರ್ಚೆಗೆ ಸಲಹೆ
1ರಿಂದ 10ನೆ ತರಗತಿ ಇರುವಲ್ಲಿ ಅದನ್ನು ಪಿಯುಸಿಯನ್ನಾಗಿಸುವ ಸರಕಾರದ ಆದೇಶದ ಕುರಿತಂತೆ ವರದಿ ತಯಾರಿಸುತ್ತಿರುವುದು ಯಾರು ಸಚಿವ ಖಾದರ್ ಅಧಿಕಾರಿಗಳನ್ನು ಪ್ರಶ್ನಿಸಿದರು.
ಡಿಡಿಪಿಐ ಈ ಸಂದರ್ಭ ಪ್ರತಿಕ್ರಿಯಿಸಿ, ಪ್ರತಿ ತಾಲೂಕಿನನಲ್ಲಿ ಹೋಬಳಿಗೊಂದು 1ರಿಂದ 10ನೆ ತರಗತಿವರೆಗಿನ ಶಾಲೆಯನ್ನು ಪಿಯುಸಿವರೆಗೆ ಮೇಲ್ದರ್ಜೆಗೇರಿಸುವ ಕಲ್ಪನೆಯನ್ನು ಸರಕಾರ ಹೊಂದಿದೆ. ಡಿಡಿಪಿಐ ಹಾಗೂ ಡಿಡಿಪಿಯು ಇಲಾಖೆ ಅಧಿಕಾರಿಗಳು ಜಂಟಿಯಾಗಿ ಈ ವರದಿ ತಯಾರಿಸಬೇಕಿದೆ ಎಂದರು.
ವರದಿ ತಯಾರಿಸುವ ವೇಳೆ ಸ್ಥಳೀಯರ ಜರ್ತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಸಚಿವ ಖಾದರ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ಸಭೆಯಲ್ಲಿ ಶಾಸಕ ಅಭಯಚಂದ್ರ ಜೈನ್, ಜಿಲ್ಲಾ ಪಂಚಾಯತ್ನ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಾಹುಲ್ ಹಮೀದ್, ಸರ್ವೋತ್ತಮ ಗೌಡ, ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಸಿಇಒ ಡಾ. ಎಂ.ಆರ್. ರವಿ, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಅಕ್ಟೋಬರ್ನಿಂದ ಬಾಣಂತಿಯರಿಗೆ ‘ಮಾತೃಪೂರ್ಣ’ ಯೋಜನೆ ಆರಂಭ:
ಅಂಗನವಾಡಿ ಕೇಂದ್ರಗಳಲ್ಲೇ ಬಾಣಂತಿಯರಿಗೆ ಪೌಷ್ಠಿಕ ಆಹಾರವನ್ನು ಒದಗಿಸುವ ‘ಮಾತೃಪೂರ್ಣ’ ಯೋಜನೆ ದ.ಕ. ಜಿಲ್ಲೆಯಲ್ಲಿ ಅಕ್ಟೋಬರ್ತಿಂಗಳಿನಿಂದ ಆರಂಭಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಆರೋಗ್ಯ ಇಲಾಖೆಯ ಉಪನಿರ್ದೇಶಕರಾದ ಸುಂದರ ಪೂಜಾರಿ ಸಭೆಯಲ್ಲಿ ತಿಳಿಸಿದರು.
ಪಟ್ಟಿಯಲ್ಲಿರುವ ಎಂಡೋ ಸಂತ್ರಸ್ತರಲ್ಲದವರ ಸಮಗ್ರ ತನಿಖೆಯಾಗಲಿ: ಸಚಿವ ರೈ
ಎಂಡೋಸಲ್ಫಾನ್ ಸಂತ್ರಸ್ತರ ಕುರಿತ ಚರ್ಚೆಯ ವೇಳೆಗೆ ಸಚಿವ ರೈ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಪಟ್ಟಿಯಲ್ಲಿ ಎಂಡೋ ಪೀಡಿತರಲ್ಲದವರೂ ಸೇರಿದ್ದಾರೆ. ಇದರಿಂದ ಅರ್ಹರಿಗೆ ನ್ಯಾಯ ದೊರಕದಂತಾಗಿದೆ. ಪಟ್ಟಿಯ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಹೇಳಿದರು.